ನಾಲ್ನಾಡ್‌ ಕಪ್‌ ಅಂತರ ಗ್ರಾಮ ಹಾಕಿ ಕೂಟ ಚಾಲನೆ

| Published : Oct 30 2024, 12:40 AM IST / Updated: Oct 30 2024, 12:41 AM IST

ಸಾರಾಂಶ

ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ನಾಲ್ ನಾಡು ಹಾಕಿ ಕ್ಲಬ್ ವತಿಯಿಂದ ಅಂತರ ಗ್ರಾಮ ಹಾಕಿ ಪಂದ್ಯಾವಳಿ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆ ಮಂಗಳವಾರ ಉದ್ಘಾಟನೆಗೊಂಡಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಲ್ನಾಡ್ ಕಪ್ ಹಾಕಿ ಕ್ರೀಡಾಕೂಟ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ.12 ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಕ್ರೀಡಾಕೂಟಕ್ಕೆ ಅಪ್ಪ ಚೆಟ್ಟೋಳ೦ಡ ಕುಟುಂಬ ಸಹಾಯಧನ ನೀಡುವುದರ ಮೂಲಕ ಕ್ರೀಡೆಗೆ ಪುನಃ ಚೇತನ ನೀಡಿದೆ ಎಂದು ನಾಪೋಕ್ಲು ಕೊಡವ ಸಮಾಜ ಉಪಾಧ್ಯಕ್ಷ ಕರವ೦ಡ ಲವ ನಾಣಯ್ಯ ಹೇಳಿದ್ದಾರೆ.

ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ನಾಲ್ ನಾಡು ಹಾಕಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಅಂತರ ಗ್ರಾಮ ಹಾಕಿ ಪಂದ್ಯಾವಳಿ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕ್ರೀಡೆಯಲ್ಲಿ ತೊಡಗಿಸಿಕೊಂಡ ಹಲವು ಯುವಕರು ಉತ್ತಮ ಉದ್ಯೋಗ ಪಡೆದುಕೊಂಡಿದ್ದಾರೆ. ಊರು ನಾಡಿನ ನಡುವೆ ಉತ್ತಮ ಸಂಬಂಧ ಇರಿಸಿಕೊಳ್ಳಬೇಕಾಗಿದೆ ಎಂದರು.ಗ್ರಾಮ ಪಂಚಾಯತಿ ಉಪಾಧ್ಯಕ್ಷ ಚೊಕೆರ ಬಾಭಿ ಭೀಮಯ್ಯ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು ಮುಖ್ಯ .ಶಿಸ್ತಿನಿಂದ ಪಾಲ್ಗೊಂಡರೆ ವಿದ್ಯಾರ್ಥಿಗಳು, ಯುವಜನರು ಯಶಸ್ಸು ಗಳಿಸಬಹುದು ಎಂದರು.

ಗ್ರಾಮ ಪಂಚಾಯಿತಿ ಮಾಜಿ (ಪ್ರಧಾನ) ಅಧ್ಯಕ್ಷ ಮೂವೆರ ನಾಣಪ್ಪ ಮಾತನಾಡಿ, ಹಾಕಿ ಕ್ರೀಡೆಗೆ ಜಿಲ್ಲೆ ಮಹತ್ವದ ಕೊಡುಗೆ ನೀಡಿದ್ದು ನಾಲ್ಕುನಾಡು ಹಾಕಿ ಪಂದ್ಯಾವಳಿ ಗ್ರಾಮೀಣ ಮಟ್ಟದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದರು.

ನೇತಾಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಮುಕ್ಕಾಟಿರ ವಿನಯ್ ಮಾತನಾಡಿ, ಕಾಫಿಗೆ ಉತ್ತಮ ಧಾರಣೆ ದೊರೆಯುತ್ತಿದ್ದು ಕೃಷಿಕರು ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ದಾನಿಗಳ ಸಂಖ್ಯೆ ಹೆಚ್ಚಾಗಿದೆ. ದಾನಿಗಳ ನೆರವಿನಿಂದ ನಾಲ್ನಾಡು ಕಪ್ ಹಾಕಿ ಸಮಿತಿ ಯಶಸ್ಸಿ ಕ್ರೀಡಾಕೂಟ ಆಯೋಜಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಶುಭ ಹಾರೈಸಿದರು. ನಾಲ್ನಡ್ ಕಪ್ ಹಾಕಿ ಪಂದ್ಯಾವಳಿಯ ಅನ್ನು ಅಪ್ಪ ಚೆಟ್ಟೋ ಳ೦ಡ ಕುಟುಂಬದ ಉಪಾಧ್ಯಕ್ಷ ಅಪ್ಪಚೆಟ್ಟೋಳ೦ಡ ಭೀಮಯ್ಯ ಉದ್ಘಾಟಿಸಿದರು .

ನಾಲ್ನಾಡು ಹಾಕಿ ಕ್ಲಬ್ ಅಧ್ಯಕ್ಷ ಕರವ೦ಡ ಟಿ ಸುರೇಶ್ ಅಧ್ಯಕ್ಷತೆ ವಹಿಸಿದ್ದರು.

ಕಾಫಿ ಬೆಳೆಗಾರ ಅಪ್ಪು ಮಣಿಯಂಡ ರಘು ಸುಬ್ಬಯ್ಯ, ಕ್ರೀಡಾಕೂಟದ ಸಂಚಾಲಕ ಅಪ್ಪಚೆಟ್ಟೊಳ೦ಡ ಮನು ಮುತ್ತಪ್ಪ, ಹಾಕಿ ಕ್ಲಬ್ ಖಜಾಂಚಿ ಚಿಯಂಡೀರ ದಿನೇಶ್, ನೇತಾಜಿ ವಿದ್ಯಾ ಸಂಸ್ಥೆ ಮುಖ್ಯ ಶಿಕ್ಷಕ ಸಿ ಎಸ್ ಸುರೇಶ್, ಟ್ರೋಫಿ ದಾನಿಗಳು, ಕ್ಲಬ್ ಪದಾಧಿಕಾರಿಗಳು, ನಿರ್ದೇಶಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಅಪ್ಪಚೆಟ್ಟೊಳ೦ಡ ವನು ವಸಂತ್ ಪ್ರಾರ್ಥಿಸಿದರು. ಮಾಲೇಟಿರ ಶ್ರೀನಿವಾಸ ಮತ್ತು ಕರವ೦ಡ ಸೀಮಾ ವೀಕ್ಷಕ ವಿವರಣೆ ನೀಡಿದರು.

ಉದ್ಘಾಟನಾ ಪಂದ್ಯ:

ಬಲ್ಲಮಾವಟಿ (ವೈಟ್) ಮತ್ತು ನಾಪೊಕ್ಕು (ಗ್ರೀನ್) ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಿತು. ಬಲ್ಲಮಾವಟಿ ತಂಡ 3 -0 ಗೋಲುಗಳ ಅಂತರದಿಂದ ಗೆಲವು ಸಾಧಿಸಿತು.

ಎರಡನೇ ಪಂದ್ಯದಲ್ಲಿ ನಾಲಡಿ ಪುಲಿಕೋಟು ವಿರುದ್ಧ 6-0 ಅಂತರದ ಭರ್ಜರಿ ಜಯ ಸಾಧಿಸಿತು.

ಮೂರನೇ ಪಂದ್ಯದಲ್ಲಿ ಪೆರೂರು ತಂಡ ಬಲ್ಲಮಾವಟಿ (ಗ್ರೀನ್ಸ್) ತಂಡದೊಂದಿಗೆ ಸ್ಪರ್ಧಿಸಿತು. ಪೇರೂರು ತಂಡ ನಾಲ್ಕು ಗೋಲು ಗಳಿಸಿದರೆ ಬಲ್ಲಮಾವಟಿ ಒಂದು ಗೋಲಿನೊಂದಿಗೆ ಪರಾಭವಗೊಂಡಿತು.

ನಾಲ್ಕನೇ ಪಂದ್ಯದಲ್ಲಿ ಕುಂಜಿಲ ತಂಡವು ನೆಲಜಿ ತಂಡದ ವಿರುದ್ಧ ಭರ್ಜರಿ ಜಯ ಗಳಿಸಿತು. ಕುಂಜಿಲ ತಂಡವು 6-0 ಅಂತರದಿಂದ ಗೆಲವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.

.......................

ಇಂದಿನ ಪಂದ್ಯಗಳು

9 ಗಂಟೆಗೆ: ನೆಲಜಿ -ಬೇತು

10 ಗಂಟೆಗೆ: ನಾಪೋಕ್ಲು ಭಗವತಿ -ಯವಕಪಾಡಿ

11 ಗಂಟೆಗೆ: ಪುಲಿಕೋಟು ಗ್ರೀನ್ಸ್- ಕೊಳಕೇರಿ

1 ಗಂಟೆಗೆ: ಪೇರೂರು -ಮರ೦ದೊಡ