ಕನ್ನಡಪ್ರಭ ವಾರ್ತೆ ಮೈಸೂರು
ಶಿಕ್ಷಣವೇ ಸಂಪತ್ತಿನ ಮೂಲವೆಂದು ಭಾವಿಸಿದ್ದ ಮೈಸೂರು ಮಾದರಿ ಸಂಸ್ಥಾನದ ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್ ಶೈಕ್ಷಣಿಕ ಕ್ರಾಂತಿಯ ಹರಿಕಾರ ಎಂದು ಮೈಸೂರು ವಿ.ವಿ. ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಎಂ.ಪಿ. ಸದಾಶಿವ ಹೇಳಿದರು.ಮೈಸೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘದ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಾಚರಣೆ ಅಂಗವಾಗಿ ಗುರುವಾರ
ಮೈಸೂರು ವಿಶ್ವವಿದ್ಯಾನಿಲಯ ಕಾರ್ಯಸೌಧದ ಮುಂಭಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗೆ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜು, ಅವರೊಂದಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿದ ನಂತರು ಅವರು ಮಾತನಾಡಿದರು.1902 ರಿಂದ 1940 ವರೆಗೆ 38 ವರ್ಷಗಳ ಕಾಲ ಮೈಸೂರು ಸಂಸ್ಥಾನದ ಮಾದರಿ ಅರಸರಾಗಿ ಆಳ್ವಿಕೆ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅಭಿವೃದ್ಧಿ ಮತ್ತು ಪ್ರಜಾ ಕಲ್ಯಾಣಕ್ಕಾಗಿ ಅರ್ಹನಿಸಿ ಶ್ರಮಿಸಿದವರು. ಶಿಕ್ಷಣವೇ ಸಂಪತ್ತಿನ ಮೂಲವೆಂದು ಭಾವಿಸಿದ್ದ ನಾಲ್ವಡಿ ಅವರು ಪಾಶ್ಚಾತ್ಯ ಮಾದರಿ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟು ಕಡ್ಡಾಯ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದು ಇಡೀ ಭಾರತದಲ್ಲಿಯೇ ಮಾದರಿಯಾದ ಆಡಳಿತ ಮಾಡಿದವರು. ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅವರಿಂದ ರಾಜ ಋಷಿ ಎನಿಸಿಕೊಂಡು, ಮೈಸೂರು ಸಂಸ್ಥಾನವನ್ನು ಸಾಂಸ್ಕೃತಿಕ ರಾಮ ರಾಜ್ಯ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು ಎಂದರು.
ಕೃಷಿ, ಕೈಗಾರಿಕೆ, ಆರೋಗ್ಯ, ವಿದ್ಯುತ್, ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿ, ಧರ್ಮ ಸಮನ್ವಯತೆ, ಸಾಮಾಜಿಕ ನ್ಯಾಯದ ಪ್ರತೀಕವಾಗಿ ತಳ ಸಮುದಾಯಗಳಿಗೆ ಮೀಸಲಾತಿ, ಮಹಿಳಾ ಸಬಲೀಕರಣ, ರಾಜಕೀಯ ಪ್ರಾತಿನಿಧ್ಯ ನೀಡಿ ಸರ್ವರ ಬಾಳಿನ ಬೆಳಕಾದವರು ಎಂದು ಅವರು ತಿಳಿಸಿದರು.
ಕಾರ್ಯದರ್ಶಿ ಪ್ರೊ.ಸಪ್ನಾ, ಪ್ರೊ.ಜ್ಯೋತಿ, ಪ್ರೊ.ಜೆ. ಸೋಮಶೇಖರ್, ಪ್ರೊ. ಅನಿಲ್ ಕುಮಾರ್, ಪ್ರೊ.ಮಾರುತಿ, ಪ್ರೊ. ವಾಸುಕಿ, ಪ್ರೊ.ರಾಜಕುಮಾರ್, ಪ್ರೊ.ನಮಿತಾ ತಿಮ್ಮಯ್ಯ, ಪ್ರೊ.ಸಿ.ಡಿ.ಪರಶುರಾಮ, ಪ್ರೊ.ಶ್ರೀನಿವಾಸ್, ಪ್ರೊ. ರೇವಣ್ಣಸಿದ್ದಪ್ಪ, ಪ್ರೊ.ಮಂಟೇಲಿಂಗು, ಪ್ರೊ.ಚಂದ್ರಶೇಖರ್, ಪ್ರೊ.ಗೀತಾ, ಪ್ರೊ.ಕೃಷ್ಣವೇಣಿ, ಪ್ರೊ.ಸಣ್ಣಪ್ಪ ಇದ್ದರು.