ಸಾರಾಂಶ
ಕಟೀಲಿನ ಸಾನಿಧ್ಯ ಸಭಾ ಭವನದಲ್ಲಿ ಕಟೀಲು ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕೋತ್ಸವ ಸಮಾರಂಭ ನಡೆಯಿತು. ವಿದ್ವಾಂಸ ಅತ್ತೂರು ರವೀಂದ್ರ ರಾವ್ ಉಪನ್ಯಾಸ ನೀಡಿದರು.
ಕನ್ನಡಪ್ರಭವಾರ್ತೆ ಮೂಲ್ಕಿ
ವ್ಯಕ್ತಿಯನ್ನು ರೂಪಿಸುವಲ್ಲಿ ಸಂಸ್ಕಾರದ ಪಾತ್ರ ಮುಖ್ಯವಾಗಿದ್ದು ಬ್ರಾಹ್ಮಣರು ಸಂಸ್ಕಾರಯುತ ಬದುಕಿನಿಂದ ಆಚರಣೆಗಳ ಅನುಷ್ಠಾನದಿಂದ ಅಧ್ಯಯನದಿಂದ ಗೌರವಯುತ ಸ್ಥಾನವನ್ನು ಪಡೆದಿದ್ದಾರೆಂದು ವಿದ್ವಾಂಸ ಅತ್ತೂರು ರವೀಂದ್ರ ರಾವ್ ಹೇಳಿದರು.ಕಟೀಲಿನ ಸಾನಿಧ್ಯ ಸಭಾ ಭವನದಲ್ಲಿ ಜರಗಿದ ಕಟೀಲು ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು ವಿದೇಶಿಯರ ದಾಳಿಯಿಂದ ನಮ್ಮ ಸಂಸ್ಕೃತಿ ನಾಶ ಪಡಿಸುವ ಪ್ರಯತ್ನ, ಶಿಕ್ಷಣ ಪದ್ಧತಿಯ ಬದಲಾವಣೆ, ಆಹಾರ ಪದ್ಧತಿಯಲ್ಲಿನ ಬದಲಾವಣೆ, ಆರಾಧನೆ, ವೇಷಭೂಷಣ ಇವೆಲ್ಲ ವ್ಯತ್ಯಾಸವಾಗುವುದನ್ನು ಗಮನಿಸುತ್ತಾ ಜಾಗೃತರಾಗುವ ಅಗತ್ಯವಿದೆ ಎಂದು ಹೇಳಿದರು.
ಸಂಘದ ಹಿರಿಯ ದಂಪತಿಗಳನ್ನು ಗೌರವಿಸಿದ ಮಂಗಳೂರು ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಬಿ. ಪುರಾಣಿಕ್ ಮಾತನಾಡಿ ವೇದ ಪಠಣ, ಕೇಳುವಿಕೆಯಿಂದ ಯಾವ ಧನಾತ್ಮಕ ಪರಿಣಾಮ ಆಗುತ್ತದೆ ಎಂದು ವಿದೇಶಿಯರು ಅರಿತಿದ್ದು ಆದರೆ ನಾವು ಮರೆತಿದ್ದೇವೆ. ವಿದ್ಯೆ, ಆಹಾರ, ಔಷಧಿಯನ್ನು ಮಾರಾಟ ಮಾಡದೆ ಅತಿ ಆಸೆ ಪಡದೆ ಕೊಟ್ಟ ಹಣಕ್ಕೆ ಕಳಿಸುವ ಕೊಡುವ ಪರಂಪರೆ ನಮ್ಮದು. ಆದರೆ ಈಗ ಇವೆಲ್ಲವೂ ವ್ಯಾಪಾರವಾಗಿದೆ. ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕೊಡುವ ಅಗತ್ಯ ಇದ್ದು ಬ್ರಾಹ್ಮಣರ ಮನೆಯ ಮಕ್ಕಳು ದುಶ್ಚಟಗಳಿಗೆ ಬಲಿ ಬೀಳದೆ ಜಪ ತಪ ಭಜನೆ ಅಧ್ಯಯನದ ಮೂಲಕ ಒಳ್ಳೆಯ ಬದುಕು ನಡೆಸುವಂತಾಗಬೇಕು. ನಾವು ಕೋಟ ,ಶಿವಳ್ಳಿ, ಸ್ಥಾನಿಕ ದೇಶಸ್ಥ ಎಂದು ಬಿಕ್ಕಟ್ಟು ತಾರದೆ ಬ್ರಾಹ್ಮಣರು ಎಲ್ಲ ಒಗ್ಗಟ್ಟು ಆಗಬೇಕೆಂದು ಹೇಳಿದರು.ಕಟೀಲು ದೇಗುಲದ ಅರ್ಚಕ ವೆಂಕಟರಮಣ ಆಸ್ರಣ್ಣ ಮಾತನಾಡಿ ಸಂಘಟನೆಯ ಮೂಲಕ ಬ್ರಾಹ್ಮಣರು ಒಂದಾಗಿ ಸತ್ಕಾರ್ಯಗಳನ್ನು ಮಾಡಬೇಕು. ಮಕ್ಕಳಿಗೆ ನಮ್ಮ ಭಾಷೆ, ಕಲೆಗಳನ್ನು, ಆಚರಣೆಗಳನ್ನು ಕಳಿಸುವಂತಾಗಬೇಕು ಎಂದರು. ನಂದಿನಿ ಬ್ರಾಹ್ಮಣ ಸಭಾದ ಅಧ್ಯಕ್ಷ ಡಾ. ಪದ್ಮನಾಭ ಭಟ್ ಎಕ್ಕಾರು ಅಧ್ಯಕ್ಷತೆಯನ್ನು ವಹಿಸಿದ್ದು ಕೊಡೆತ್ತೂರು ವೇದವ್ಯಾಸ ಉಡುಪ, ಸಿ ಎ ಗಣೇಶ ರಾವ್, ಅಜಾರು ನಾಗರಾಜ ರಾವ್, ಜ್ಯೋತಿ ಉಡುಪ, ಶ್ರೀಶ ಆಚಾರ್ಯ ಮತ್ತಿತರರಿದ್ದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅನಂತಕೃಷ್ಣ ರಾವ್ ಎಕ್ಕಾರು, ಇಂದುಮತಿ ಮತ್ತು ಸುರೇಶ್ ರಾವ್, ಮಂದಾಕಿನಿ ಮತ್ತು ಪ್ರಭಾಕರ ರಾವ್ ದಂಪತಿಗಳನ್ನು ಹಾಗೂ ಸಿಎ ಗಣೇಶ ರಾವ್, ಅಜಾರು ಗುರುಪ್ರಸಾದ್ ರಾವ್ ಇವರನ್ನು ಸಮ್ಮಾನಿಸಲಾಯಿತು. ಸಾಧಕರಾದ ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರ್, ಶ್ರೀರಕ್ಷ ಭಟ್, ಅಕ್ಷಯ ರಾವ್, ಕಾರ್ತಿಕ್ ಉಡುಪರನ್ನು ಅಭಿನಂದಿಸಲಾಯಿತು. ಸುಮಂಗಲ ಭಟ್, ತೇಜಸ್ವಿ, ಅರುಣ್ ರಾವ್, ವೈಷ್ಣವಿ ರಾವ್ ಸನ್ಮಾನ ಪತ್ರ ವಾಚಿಸಿದರು. ಕಲಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯದರ್ಶಿ ದೇವಿಪ್ರಕಾಶ್ ರಾವ್ ವರದಿ ವಾಚಿಸಿದರು. ಸುಮಂಗಲ ಭಟ್, ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಪು. ಗುರುಪ್ರಸಾದ್ ಭಟ್ ನಿರೂಪಿಸಿದರು. ಸುಧಾ ಉಡುಪ ವಂದಿಸಿದರು.