ತ್ಯಾಗ, ಬಲಿದಾನ ಹಾಗೂ ಸಮರ್ಪಣಾ ಮನೋಭಾವದ ಮಹತ್ವವನ್ನು ಸಾರುವ ಪವಿತ್ರ ‘ಈದುಲ್ ಅಝ್ಹಾ’ (ಬಕ್ರೀದ್) ಹಬ್ಬವನ್ನು ನಾಪೋಕ್ಲು, ಹಳೆತಾಲೂಕು, ಎಮ್ಮೆಮಾಡು, ಕುಂಜಿಲ, ಕೊಳಕೇರಿ, ಕಿಕ್ಕರೆ, ಕೊಟ್ಟಮುಡಿ, ಚೆರಿಯಪರಂಬು ಸೇರಿದಂತೆ ಇನ್ನಿತರ ಮಸೀದಿಯಲ್ಲಿ ಗುರುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಕನ್ನಡಪ್ರಭವಾರ್ತೆ ನಾಪೋಕ್ಲುತ್ಯಾಗ, ಬಲಿದಾನ ಹಾಗೂ ಸಮರ್ಪಣಾ ಮನೋಭಾವದ ಮಹತ್ವವನ್ನು ಸಾರುವ ಪವಿತ್ರ ‘ಈದುಲ್ ಅಝ್ಹಾ’ (ಬಕ್ರೀದ್) ಹಬ್ಬವನ್ನು ನಾಪೋಕ್ಲು, ಹಳೆತಾಲೂಕು, ಎಮ್ಮೆಮಾಡು, ಕುಂಜಿಲ, ಕೊಳಕೇರಿ, ಕಿಕ್ಕರೆ, ಕೊಟ್ಟಮುಡಿ, ಚೆರಿಯಪರಂಬು ಸೇರಿದಂತೆ ಇನ್ನಿತರ ಮಸೀದಿಯಲ್ಲಿ ಗುರುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಇಲ್ಲಿಗೆ ಸಮೀಪದ ಹಳೆತಾಲೂಕು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಕಹಾಲಿದ್ ಹಿಮಾಮಿ ನೇತೃತ್ವದಲ್ಲಿ ವಿಶೇಷ ಈದ್ ನಮಾಝ್ ನೆರವೇರಿತು. ಬಳಿಕ ಈದ್ ಸಂದೇಶ ಭಾಷಣ ನೀಡಿದ ಅವರು, ಪ್ರವಾದಿ ಇಬ್ರಾಹಿಂ (ಅ) ಅವರ ತ್ಯಾಗ ಮತ್ತು ದೇವರ ಮೇಲಿನ ದೃಢವಾದ ನಂಬಿಕೆಯನ್ನು ಸ್ಮರಿಸುತ್ತಾ, ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿ, ಸಹನೆ ಮತ್ತು ಪರಸ್ಪರ ಸೌಹಾರ್ದತೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಸೀದಿ ಜಮಾಅತ್ ಕಮಿಟಿಯ ಅಧ್ಯಕ್ಷ ಪಿ.ಎ ಮಹಮ್ಮ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸ್ಥಳೀಯ ಪಟ್ಟಣದ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಖತೀಬರಾದ ಶೌಕತ್ ಸಖಾಫಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಹಿತವಚನವನ್ನಾಡಿದರು. ಈ ಸಂದರ್ಭ ಮಸೀದಿ ಜಮಾಅತ್ ಕಮಿಟಿಯ ಅಧ್ಯಕ್ಷ ಎಂ.ಎಚ್ ಅಬ್ದುಲ್ ರೆಹಮಾನ್ , ಕಾರ್ಯದರ್ಶಿ ಯೂನಸ್ ಪಿ ಎಂ , ಉಪಾಧ್ಯಕ್ಷ ಅರಫತ್, ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.ನಮಾಝ್ ಮುಕ್ತಾಯಗೊಂಡ ಬಳಿಕ ನೆರೆದಿದ್ದ ಮುಸ್ಲಿಂ ಬಾಂಧವರು ಪರಸ್ಪರ ಆಲಂಗಿಸಿಕೊಂಡು ಹಸ್ತಲಾಘವ ಮಾಡುವ ಮೂಲಕ ಈದ್ ಮುಬಾರಕ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರಲ್ಲದೆ, ಖಬರಸ್ಥಾನ ಮತ್ತು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು.