ಸಾರಾಂಶ
ಗೌರಿ ಗಣೇಶೋತ್ಸವದ ಅಂಗವಾಗಿ ನಾಪೋಕ್ಲು ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿಗಣೇಶ ಮೂರ್ತಿಗಳ ವಿಸರ್ಜನೋತ್ಸವ ವಿಜೃಂಭಣೆಯಿಂದ ಬುಧವಾರ ನಡೆಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಗೌರಿ ಗಣೇಶೋತ್ಸವದ ಅಂಗವಾಗಿ ಪಟ್ಟಣದ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿಗಣೇಶ ಮೂರ್ತಿಗಳ ವಿಸರ್ಜನೋತ್ಸವ ವಿಜೃಂಭಣೆಯಿಂದ ಬುಧವಾರ ನಡೆಯಿತು.ಇಲ್ಲಿನ ಕಕ್ಕುಂದ ಕಾಡಿನ ವೆಂಕಟರಮಣ ದೇವಸ್ಥಾನದ ಗಣಪತಿ ಸೇವಾ ವತಿಯಿಂದ 19ನೇ ವರ್ಷದ ಗೌರಿ ಗಣೇಶ ಉತ್ಸವ ಸಮಿತಿ ವತಿಯಿಂದ ಬುಧವಾರ ಮಧ್ಯಾಹ್ನ ಮಹಾ ಪೂಜೆಯ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಗದಗದ ಮಹಿಳಾ ತಂಡದಿಂದ ಡೊಳ್ಳು ಕುಣಿತ, ಉಡುಪಿಯ ಕೀಲು ಗೊಂಬೆಗಳು ಸೇರಿದಂತೆ ಕಲಾತಂಡದೊಂದಿಗೆ ಪಟ್ಟಣದಲ್ಲಿ ಅಲಂಕೃತ ಮಂಟಪದೊಂದಿಗೆ ಮೆರವಣಿಗೆ ಸಾಗಿತು.
ಇಂದಿರಾನಗರದ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 19ನೇ ವರ್ಷದ ಗೌರಿ ಗಣೇಶ ಉತ್ಸವದಲ್ಲಿ ಸ್ಥಳೀಯರಿಂದ ಹಾಡುಗಾರಿಕೆ, ರವಿ ಬಳಗದಿಂದ ಸಂಗೀತ ಸಂಜೆ, ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಬುಧವಾರ ಸಂಜೆ ಅತ್ಯಾಕರ್ಷಕ ಕೇರಳದ ಕೋಝಿಕ್ಕೋಡಿನ ಲೈಟಿಂಗ್ಸ್ ವೇಷಭೂಷಣ ತೊಟ್ಟ ದೇವಕನ್ಯೆ ವೇಷಧಾರಿಗಳಿಂದ ನೃತ್ಯ, ಶಬರಿಮಲೆ ಅಯ್ಯಪ್ಪನ ಬೃಹತ್ ಆಕಾರದ ಪ್ರತಿರೂಪದೊಂದಿಗೆ ಆಕರ್ಷಕ ಮಂಟಪ ಹಾಗೂ ವಿಶೇಷ ಪಟಾಕಿ ಚಿತ್ತಾರ ಗಮನ ಸೆಳೆಯಿತು.ಹಳೆ ತಾಲೂಕು ಶ್ರೀ ಪೊನ್ನುಮುತ್ತಪ್ಪ ವಿನಾಯಕ ಸೇವಾ ಸಮಿತಿ ವತಿಯಿಂದ 15ನೇ ವರ್ಷದ ಅದ್ಧೂರಿ ಗೌರಿ ಗಣೇಶ ಉತ್ಸವದಲ್ಲಿ ಮಡಿಕೇರಿಯ ಇವೆಂಟ್ಸ್ ತಂಡದವರಿಂದ ಚಲಿಸುವ ಬೃಹತ್ ಗಾತ್ರದ ದೇವತೆಗಳ, ರಾಕ್ಷಸರ ಪ್ರತಿರೂಪದೊಂದಿಗೆ ಗಣೇಶನ ಕಥಾವಸ್ತು ಅಳವಡಿಸಲಾಗಿತ್ತು. ಬೆಂಗಳೂರಿನ ಪಿಎಸ್ಎಲ್ ಅವರಿಂದ ಆಕರ್ಷಕ ಲೈಟಿಂಗ್ಲ ಸೌಂಡ್ಸ್, ಪ್ರದರ್ಶನದೊಂದಿಗೆ ಸಿಡಿಮದ್ದು ಪ್ರದರ್ಶನವಿತ್ತು.ನಾಪೋಕ್ಲುನಾಡು ಗೌರಿ ಗಣೇಶ ಸಮಿತಿ ವತಿಯಿಂದ ಹಳೆ ತಾಲೂಕಿನ ಭಗವತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶನ ಮಂಟಪ ಹಾಗೂ ಶ್ರೀರಾಮ ಟ್ರಸ್ಟ್ ವತಿಯಿಂದ ಸ್ಥಾಪಿಸಲಾಗಿದ್ದ ಗಣೇಶಮೂರ್ತಿಯ ಮಂಟಪಗಳೂ ವಿಶೇಷ ಆಕರ್ಷಣೆಯೊಂದಿಗೆ ಸಾಗಿತು.
ವಿವಿಧ ಸೇವಾ ಸಮಿತಿಗಳು ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಆಕರ್ಷಕ ಕಲಾ ತಂಡಗಳ ವೇಷ ಭೂಷಣ ನೃತ್ಯದ ಜೊತೆ ಸಾರ್ವಜನಿಕರು ಕುಣಿದು ಕುಪ್ಪಳಿಸಿ ಅಲಂಕೃತ ವಾಹನಗಳಲ್ಲಿ ಕೊಂಡೊಯ್ದರು. ಮೂರ್ತಿಗಳನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು.ವಿವಿಧ ಸೇವಾ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಚುನಾಯಿತ ಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು.
ಪೊಲೀಸ್ ಇಲಾಖೆ ವತಿಯಿಂದ ಡಿಎಸ್ಪಿ ಮಹೇಶ್ ಕುಮಾರ್, ವೃತ ನಿರೀಕ್ಷಕ ಅನುಪ್ ಮಾದಪ್ಪ, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ಬಂದೋಬಸ್ತು ಒದಗಿಸಿದ್ದರು.