ಸಮೀಪದ ಕಕ್ಕಬ್ಬೆ-ಯವಕಪಾಡಿ ಗ್ರಾಮದ ಶ್ರೀ ಪನ್ನಂಗಾಲತ್ತಮ್ಮೆ ದೇವಿಯ ವಾರ್ಷಿಕ ಉತ್ಸವ ಶ್ರದ್ಧಾ ಭಕ್ತಿಯಿಂದ ಸೋಮವಾರ ಸಂಪನ್ನಗೊಂಡಿತು.

ಕನ್ನಡಪ್ರಭವಾರ್ತೆ ನಾಪೋಕ್ಲು

ಸಮೀಪದ ಕಕ್ಕಬ್ಬೆ-ಯವಕಪಾಡಿ ಗ್ರಾಮದ ಶ್ರೀ ಪನ್ನಂಗಾಲತ್ತಮ್ಮೆ ದೇವಿಯ ವಾರ್ಷಿಕ ಉತ್ಸವ ಶ್ರದ್ಧಾ ಭಕ್ತಿಯಿಂದ ಸೋಮವಾರ ಸಂಪನ್ನಗೊಂಡಿತು. ಈ ದೇವಿಯನ್ನು ಪರಿಶಿಷ್ಟ ಜನಾಂಗದವರು ಪೂಜಿಸುತ್ತಿದ್ದು, ಇಲ್ಲಿ ಕೊಡೆ ಬರುವ ವಿಷಯ ವಿಸ್ಮಯವಾಗಿದೆ. ಕೊಡೆಗೆ ದೇವರು ಬರುವುದು ಅದನ್ನು ಹಿಡಿದು ನಿಲ್ಲಿಸಲಾಗದ ಸ್ಥಿತಿ ವಿಶೇಷತೆ. ಅದರಂತೆ ಪರಿಶಿಷ್ಟ ಜನಾಂಗದವರಿಗೆ ಇಲ್ಲಿ ತಿರೋಳ (ಆವೇಶ) ಬರುತ್ತದೆ. ಅಂದರೆ ಕರಿಚಾಮುಂಡಿ, ಚೌಂಡಿ, ಅಯ್ಯಪ್ಪ ಮತ್ತಿತರ ಉಗ್ರ ಮೂರ್ತಿ ದೇವತೆಗಳು ಮೈಮೇಲೆ ಬಂದು ಜೋಡಿ ಕತ್ತಿಯಿಂದ ತಲೆಗೆ ಕಡೆದುಕೊಳ್ಳುವ ದೃಶ್ಯ ಎಂತವರನ್ನು ಭಯಭೀತರನ್ನಾಗಿ ಮಾಡುತ್ತದೆ, ತಲೆಗೆ ಗಾಯವಾಗಿ ರಕ್ತ ಚಿಮ್ಮುತ್ತಿರುತ್ತದೆ. ನಂತರ ದೇವಾಲಯದಲ್ಲಿ ತಲೆಗೆ ದೇವರ ಎಣ್ಣೆಯನ್ನು ಹಾಕಿದರೆ, ಈ ಗಾಯವು 2-3 ದಿನದಲ್ಲಿ ಮಾಯವಾಗುವುದೆಂದು ಪ್ರತೀತಿ ಇದೆ. ಈ ವರ್ಷ ಚಿಕ್ಕ ಹಬ್ಬ ಈ ಹಬ್ಬದಲ್ಲಿ ಹಳೆಯ ಕೊಡೆಯನ್ನೆ ಉಪಯೋಗಿಸಲಾಯಿತು. ಉಳಿದಂತೆ ಹಬ್ಬವು ನಿಯಮದಂತೆ ನಡೆಯಿತು. ಮೊದಲ ದಿನವಾದ ಭಾನುವಾರ ಬೆಳಿಗ್ಗೆ ಅಂಜಪರವoಡ ಮನೆಯಿಂದ ದೇವರ ತಿರುವಭರಣ ಭಂಡಾರ ದೇವಾಲಯಕ್ಕೆ ತರಲಾಯಿತು. ಬಳಿಕ ದೇವರ ಮೂರ್ತಿಯನ್ನು ಸ್ವಚ್ಛಗೊಳಿಸಿ ತೆಂಗಿನಕಾಯಿ ನೀರು ಹಾಗೂ ಎಲೆನೀರಿನಿಂದ ಅಭಿಷೇಕ ಮಾಡಿ ಚಿನ್ನಾಭರಣ ಮತ್ತು ಹೂಗಳಿಂದ ಶೃಂಗರಿಸಿದ ನಂತರ ದೇವರನ್ನು ಹೊತ್ತು ಪ್ರದಕ್ಷಣೆ ಬರಲಾಯಿತು. ಈ ಸಂದರ್ಭದಲ್ಲಿ ಕೊಡೆಯನ್ನು ದೇವಾಲಯದ ಪ್ರದಕ್ಷಿಣೆ ತರಲಾಯಿತು.

ಎರಡನೇ ದಿನವಾದ ಸೋಮವಾರ ಕುರುಂದ ಹಬ್ಬ. ಈ ಹಬ್ಬದಲ್ಲಿ ತಿರೋಳ ಬಂದವರು ತಲೆಗೆ ತೆಂಗಿನಕಾಯಿಯನ್ನು ಕುಟ್ಟಿ ಹೊಡೆಯುವುದು ಭಕ್ತರನ್ನು ಮೂಕಪ್ರೇಕ್ಷಕರನ್ನಾಗಿ ಮಾಡಿತು. ನಂತರ ದೇವರವಿಧಿ ವಿಧಾನಗಳಂತೆ ಹಬ್ಬ ಕಾರ್ಯ ನಡೆಯಿತು. ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು ಊರು ಮತ್ತು ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದ

ಸ್ವೀಕರಿಸಿದರು.