ಸಾರಾಂಶ
ಬೆಳ್ತಂಗಡಿ: ಬ್ರಹ್ಮಶ್ರೀ ನಾರಾಯಣಗುರುಗಳು ಸಾಮಾಜಿಕ ಪರಿವರ್ತನೆ ಹುಟ್ಟು ಹಾಕಿದ ಹರಿಕಾರ. ಹಿಂದೂ ಸಮಾಜದಲ್ಲಿರುವ ಜಾತೀಯ ವ್ಯವಸ್ಥೆಗಳನ್ನು ಎಲ್ಲ ಜಾತಿ, ಎಲ್ಲ ಮತ ಸಮಾನವಾಗಿರಬೇಕೆಂದು ಕಟ್ಟಕಡೆಯ ಜನಾಂಗಕ್ಕೂ ಪ್ರಾಮಾಣಿಕ ನೆಲೆಯಲ್ಲಿ ತೋರಿಸಿಕೊಟ್ಟವರು ನಾರಾಯಣಗುರುಗಳು ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾಪುರುಷರ ಜಯಂತಿ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಆಶ್ರಯದಲ್ಲಿ ಭಾನುವಾರ ಗುರುವಾಯನಕೆರೆ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಉದ್ಘಾಟಿಸಿ ಮಾತನಾಡಿದರು.
ಒಂದು ಕಾಲದಲ್ಲಿ ದೇವಸ್ಥಾನಗಳಿಗೆ ಪ್ರವೇಶ ಇಲ್ಲದ ಸಂದರ್ಭದಲ್ಲಿ ಧಾರ್ಮಿಕ ಪರಿವರ್ತನೆ ಹುಟ್ಟುಹಾಕಿದವರು. ಸಮಾನತೆಯ ಮೂಲ ಆಶಯದೊಂದಿಗೆ ಜೀವನವನ್ನು ಮುಡಿಪಾಗಿಟ್ಟವರು ಎಂದು ಹೇಳಿದರು.ವಿಧಾನ ಪರಿಷತ್ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿದರು.ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕ ದಿವಾಕರ ಕೆ. ಪ್ರಧಾನ ಭಾಷಣ ಮಾಡಿ, ನಾರಾಯಣಗುರುಗಳು ಸಮಾನತೆಗಾಗಿ ದೇವಸ್ಥಾನ, ವಿದ್ಯಾಭ್ಯಾಸದಿಂದ ಮೂಢನಂಬಿಕೆ ಹೋಗಲಾಡಿಸುವುದು, ಸ್ವಾವಲಂಬಿಯಾಗಿ ಬದುಕಲು ಉದ್ಯೋಗ ಸ್ಥಾಪಿಸಬೇಕು ಎಂಬ ಸಂದೇಶ ಸಾರಿದವರು. ಹಾಗಾಗಿ ನಮ್ಮ ನಾಡಿನ, ನೆಲದ ಸತ್ವವನ್ನು ತಿಳಿಯೋಣ ಎಂದರು.ತಹಸೀಲ್ದಾರ್ ಪೃಥ್ವಿ ಸಾನಿಕಮ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಕೆ., ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಉಪಾಧ್ಯಕ್ಷ ಸುಂದರ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಸಹಕಾರಿ ಸಂಘಗಳ ಉಪನಿಬಂಧಕರಾದ ಬಿ.ವಿ.ಪ್ರತಿಮಾ ಸಹಿತ ಇತರ ಇಲಾಖೆ ಅಧಿಕಾರಿಗಳು ಇದ್ದರು.ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್ ಸ್ವಾಗತಿಸಿದರು. ಲಾಯಿಲ ಕರ್ನೋಡಿ ಶಾಲೆ ಶಿಕ್ಷಕಿ ಮಮತಾ ನಿರೂಪಿಸಿದರು.