ಬಿ. ಶೇಖರ್‌ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರುಮಕ್ಕಳಿಗೆ ಅಕ್ಷರ ಕಲಿಸಿ ಅವರ ಭವಿಷ್ಯವನ್ನು ರೂಪಿಸುವ ಶಾಲೆಗಳು ಸುಸಜ್ಜಿತ ಕಟ್ಟಡ ಹೊಂದಿರುವಷ್ಟೇ ಮುಖ್ಯವಾಗಿ ಶಾಲೆಯ ಸುತ್ತಲೂ ಸುರಕ್ಷಿತವಾದ ಕಾಂಪೌಂಡ್ ಅಗತ್ಯ.ಈ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ನರೇಗಾ (ವಿಬಿ ಜಿ ರಾಮ್ ಜಿ) ಯೋಜನೆಯಲ್ಲಿ ಜ್ಞಾನವಿಕಾಸ ಕೇಂದ್ರಗಳಾದ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸುವ ಮೂಲಕ ಶಾಲಾ ಮಕ್ಕಳ ರಕ್ಷಣೆ ಮಾಡಲಾಗಿದೆ.ಮೈಸೂರು ತಾಲೂಕು ಇಲವಾಲ ಹೋಬಳಿ ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಟ್ಟನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಿಸಲಾಗಿದ್ದು, ಇದರಿಂದಾಗಿ ಶಾಲಾ ಆವರಣಕ್ಕೆ ಅಪರಿಚಿತರು ಮತ್ತು ಬೀದಿ ಪ್ರಾಣಿಗಳು ಶಾಲಾ ಆವರಣಕ್ಕೆ ಅನಧಿಕೃತ ಪ್ರವೇಶವನ್ನು ನಿರ್ಬಂಧಿಸಲು ಸಹಕಾರಿ ಆಗುತ್ತಿದೆ.ಗ್ರಾಮದ ಹೊರವಲಯದಲ್ಲಿರುವ ಶಾಲೆಯು 5 ತರತಗತಿ ಕೊಠಡಿಗಳ ಕಟ್ಟಡ ಸೇರಿದಂತೆ ಒಂದು ಅಂಗವಾಡಿ ಕೇಂದ್ರವನ್ನೂ ಹೊಂದಿದೆ. ಕ್ಲಸ್ಟರ್ ಕೇಂದ್ರವಾಗಿರುವ ಈ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ 73 ಮಕ್ಕಳು ಕಲಿಯುತ್ತಿದ್ದಾರೆ. ಒಬ್ಬರು ಮುಖ್ಯೋಪಾಧ್ಯಾಯರು ಸೇರಿದಂತೆ 4 ಮಂದಿ ಶಿಕ್ಷಕರಿದ್ದಾರೆ.ಶಾಲೆಯ ಮುಂಭಾಗದಲ್ಲೇ ರಸ್ತೆಯಿದ್ದು, ಶಾಲಾ ಅವಧಿ ಹಾಗೂ ಬಿಡುವಿನ ವೇಳೆ ಮಕ್ಕಳು ಆಟವಾಡುತ್ತಾ ಒಮ್ಮಿಂದೊಮ್ಮೆಲೆ ರಸ್ತೆಗೆ ಓಡಿ ಹೋಗಿ ಅಪಘಾತವಾಗುವ ಸಂಭವವಿತ್ತು. ಅಲ್ಲದೆ, ಶಾಲೆಯ ಹಿಂಭಾಗವೇ ಕೆರೆಯಿದ್ದು, ಇದು ಪೋಷಕರು ಹಾಗೂ ಶಿಕ್ಷಕರನ್ನು ಹೆಚ್ಚಿನ ಆತಂಕಕ್ಕೀಡು ಮಾಡಿತ್ತು.ಈ ಎಲ್ಲಾ ಸಂಭವನೀಯ ತೊಂದರೆಗಳನ್ನು ತಪ್ಪಿಸಲು ಕಾಂಪೌಂಡ್ ನಿರ್ಮಾಣ ಏಕೈಕ ಮಾರ್ಗೋಪಾಯ ಎಂಬುದು ಗ್ರಾಮ ಪಂಚಾಯತಿ ಗಮನಕ್ಕೆ ಬಂದ ಕೂಡಲೇ ನರೇಗಾ ಯೋಜನೆಯಲ್ಲಿ ಕಾಮಗಾರಿ ಕೈಗೊಳ್ಳುವ ಮೂಲಕ ಶಾಲೆಗೆ ರಕ್ಷಾ ಕವಚವಾಗಿ ಕಾಂಪೌಂಡ್ ನಿರ್ಮಿಸಲಾಗಿದೆ.ಈ ಕಾಂಪೌಂಡ್ ಅನ್ನು ಸುಮಾರು 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದು, ಈ ಕಾಮಗಾರಿಯಲ್ಲಿ 2.09 ಲಕ್ಷ ರೂ. ಕೂಲಿ ಮೊತ್ತ ಹಾಗೂ 4.91 ಲಕ್ಷ ರೂ. ಸಾಮಾಗ್ರಿ ವೆಚ್ಚ ಬಳಕೆಯಾಗಿದೆ. ಈ ಕಾಮಗಾರಿಯಿಂದಾಗಿ 598 ಮಾನವ ದಿನಗಳು ಸೃಜನೆಯಾಗಿದ್ದು, ಸ್ಥಳೀಯರಿಗೂ ಕೆಲಸ ದೊರಕಿದೆ. ಶಾಲಾ ಆಸ್ತಿ ರಕ್ಷಣೆಶಾಲೆಯು ಆವರಣವು ಸುಮಾರು ಅರ್ಧ ಎಕರೆಗಿಂತ ಹೆಚ್ಚು ವಿಶಾಲವಾಗಿದೆ. ಇದೀಗ ಶಾಲೆಯ ಅಧಿಕೃತ ಜಾಗವನ್ನು ಕಾಂಪೌಂಡ್ ನಿರ್ಧರಿಸುತ್ತಿದೆ. ಇದರಿಂದ ಪಕ್ಕದ ಜಮೀನಿನವರು ಅಥವಾ ಖಾಸಗಿಯವರು ಶಾಲಾ ಆಸ್ತಿಯನ್ನು ಒತ್ತುವರಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾಂಪೌಂಡ್ ನಿರ್ಮಾಣದಿಂದಾಗಿ ಶಾಲೆಯ ಆಸ್ತಿಯನ್ನು ಸಂರಕ್ಷಿಸಿದಂತಾಗಿದೆ.ಶಾಲೆಯ ಪಕ್ಕದಲ್ಲೇ ಗ್ರಾಮದ ಕೆಲವರು ತ್ಯಾಜ್ಯಗಳನ್ನು ಸುರಿಯುತ್ತಿದ್ದರು. ಇದರಿಂದ ಮಕ್ಕಳಿಗೆ ಸಾಂಕ್ರಾಮಿಕ ತಗುಲುವ ಅಪಾಯವೂ ಇತ್ತು. ಪ್ರಸ್ತುತ ಈ ಆತಂಕ ದೂರವಾಗಿದ್ದು, ಮಕ್ಕಳು ನಿರಾತಂಕವಾಗಿ ಶಾಲಾ ಆವರಣದೊಳಗೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದಾಗಿದೆ.----ಕೋಟ್...ನರೇಗಾ ಯೋಜನೆಯಲ್ಲಿ ರಟ್ಟನಹಳ್ಳಿ ಶಾಲೆಯಲ್ಲಿ ಕಾಂಪೌಂಡ್ ನಿರ್ಮಿಸಿರುವುದು ಮಕ್ಕಳಾ ಕಲಿಕೆಗೆ ಹಾಗೂ ಕ್ರೀಡಾ ಚಟುವಟಿಕೆಗೆ ಅನುಕೂಲವಾಗಲಿದೆ. ಶಾಲೆಯ ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಿ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.- ಸಿ. ಕೃಷ್ಣ, ಇಒ, ಮೈಸೂರು ತಾಪಂ----ಶಾಲೆಯ ಮುಂಭಾಗದ ರಸ್ತೆ ಮತ್ತು ಹಿಂಭಾಗದ ಕೆರೆಯು ಅತ್ಯಂತ ಅಪಾಯಕಾರಿಯಾಗಿತ್ತು. ಇದನ್ನು ಮನಗಂಡು ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಿಸಲಾಗಿದೆ. ಅಲ್ಲದೆ, ಸಾರ್ವಜನಿಕರ ಅನಗತ್ಯ ಓಡಾಟ ಹಾಗೂ ಗದ್ದಲವಿಲ್ಲದೆ ಏಕಾಗ್ರತೆಯಿಂದ ಕಲಿಯುವಂತಾಗಿದೆ.- ಡಿ.ಸಿ. ಶಿವಣ್ಣ, ಪಿಡಿಒ, ಗುಂಗ್ರಾಲ್ ಛತ್ರ ಗ್ರಾಪಂ, ಮೈಸೂರು ತಾಲೂಕು----ಕಾಂಪೌಂಡ್ ನಿರ್ಮಾಣದಿಂದ ಶಾಲಾ ಮಕ್ಕಳಲ್ಲಿ ಶಿಸ್ತು ಕಾಪಾಡಲು ಸಹಾಯವಾಗುತ್ತಿದೆ. ವಿದ್ಯಾರ್ಥಿಗಳು ಶಾಲಾ ಅವಧಿಯಲ್ಲಿ ಶಿಕ್ಷಕರ ಅನುಮತಿಯಿಲ್ಲದೆ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ಯಾವುದೇ ಅಪಾಯವಿಲ್ಲದೆ ಮಕ್ಕಳು ಪಠ್ಯ ಮತ್ತು ಪತ್ಯೇತರ ಚಟುವಟಿಕೆಯಲ್ಲಿ ಸುರಕ್ಷಿತವಾಗಿ ಪಾಲ್ಗೊಳ್ಳಲು ಸಹಕಾರಿಯಾಗಿದೆ.- ಆರ್. ಗೀತಾ, ಮುಖ್ಯಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಟ್ನನಹಳ್ಳಿ