ಸಾರಾಂಶ
ಯಲ್ಲಾಪುರ: ಭಾವ ಇಲ್ಲದಿದ್ದರೆ ಬದುಕು ಶುಷ್ಕವಾಗುತ್ತದೆ. ಭಾವ ಉದ್ದೀಪಿಸುವ ಗೀತೆಗಳ ಮೂಲಕ ಎಚ್.ಎಸ್.ವಿ. ಚಿರಸ್ಥಾಯಿಯಾಗಿದ್ದಾರೆ ಎಂದು ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.ಅವರು ಶನಿವಾರ ಪಟ್ಟಣದ ಶಿವಶಂಕರ ನಿಲಯದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲೆ ಹಾಗೂ ತಾಲೂಕು ಘಟಕ ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನರಾದ ಕನ್ನಡದ ಭಾವಗೀತೆಗಳ ಮೂಲಕ ಜನಮಾನಸದಲ್ಲಿ ಸದಾ ಸ್ಮರಣೀಯರಾದ ಎಚ್.ಎಸ್. ವೆಂಕಟೇಶ ಮೂರ್ತಿ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಅವರು ಜೀವ ಭಾವದ ಸಂಬಂಧ ಬಲಗೊಳಿಸುವ ಪ್ರಯತ್ನ ಮಾಡಿದ್ದರು ಎಂದರು. ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಮಾತನಾಡಿ, ಎಚ್.ಎಸ್.ವಿ. ದಟ್ಟವಾದ ಭಾವನೆಯನ್ನು ಕಟ್ಟಿಕೊಟ್ಟಿದ್ದರು. ಎಲ್ಲ ಭಾವಗೀತೆಗಳು ಜೀವನದ ಸಾರ ಒಳಗೊಂಡಿವೆ. ಸುಕೋಮಲ ಗೀತೆಗಳನ್ನು ಬರೆದಿದ್ದಾರೆ ಎಂದರು.ನೇತ್ರತಜ್ಞೆ ಡಾ.ಸೌಮ್ಯಾ ಕೆ.ವಿ. ಮಾತನಾಡಿ, ಲಯ ಹಾಗೂ ಮಾಧುರ್ಯ ಭರಿತವಾಗಿದೆ. ಅವರ ಭಾವಗೀತೆಗಳ ಮೂಲಕ ಮಾನಸಿಕ ನೆಮ್ಮದಿ, ಒತ್ತಡ ರಹಿತ ಬದುಕಿಗೆ ಪ್ರೇರಣೆಯಾಗುತ್ತದೆ. ಮಾನವೀಯ ಸಂಬಂಧ ಪೋಣಿಸಿ ಕೊಡುತ್ತದೆ. ಬಚ್ಚಿಟ್ಟ ನೋವುಗಳನ್ನು ಬಿಚ್ಚಿಡುವ ಕವಿತೆಗಳ ಮೂಲಕ ಜೀವನದ ದರ್ಶನ ಮಾಡಿಸುತ್ತವೆ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮುಕ್ತಾ ಶಂಕರ, ಸೀತಾ ಭಟ್ಟ, ಯಮುನಾ ನಾಯ್ಕ, ಸತೀಶ ಶೆಟ್ಟಿ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.ಸಾಹಿತಿ ಸುಬ್ರಾಯ ಬಿದ್ರೆಮನೆ, ಶಿಕ್ಷಕ ಸುಧಾಕರ ನಾಯಕ, ಪ್ರಮುಖರಾದ ಜಿ.ಎಸ್ ಗಾಂವ್ಕಾರ, ಆಶಾ ಶೆಟ್ಟಿ, ನಾಗೇಶ ಯಲ್ಲಾಪುರಕರ್, ಸುಮಂಗಲಾ ವೆರ್ಣೇಕರ, ಶಂಕರ ನಾಯಕ, ನಾಗೇಶ ಕುಮಾರ, ತ್ರೇಶಾನೋಹಾ ಭಾವ ನುಡಿನಮನ ಸಲ್ಲಿಸಿದರು.