ರಾಷ್ಟ್ರೀಯ ಚೆಸ್ ಪಂದ್ಯಾವಳಿ: ಮಂಡ್ಯ ವಿದ್ಯಾರ್ಥಿಗಳ ಸಾಧನೆ

| Published : Oct 19 2025, 01:00 AM IST

ರಾಷ್ಟ್ರೀಯ ಚೆಸ್ ಪಂದ್ಯಾವಳಿ: ಮಂಡ್ಯ ವಿದ್ಯಾರ್ಥಿಗಳ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಜೆ.ಶಿವಾನಿ ಹಿಮಾಚಲ ಪ್ರದೇಶದ ಕಾಂಗ್ರಾ ಜೆಎನ್‌ವಿಯಲ್ಲಿ ನಡೆದ ರಾಷ್ಟ್ರೀಯ ಚೆಸ್ ಸ್ಪರ್ಧೆಯಲ್ಲೂ ಸ್ವರ್ಣ ಪದಕ ಗಳಿಸಿದ್ದರು. ಮೈಸೂರಿನಲ್ಲಿ ನಡೆದ ಫಿಡೆ ರೇಟಿಂಗ್ ಸ್ಪರ್ಧೆಯಲ್ಲಿ ೨ ಸಾವಿರ ರು. ನಗದು ಬಹುಮಾನ ಗೆದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ರಾಯಲ್ ಚೆಸ್ ಅಕಾಡೆಮಿಯ ಇಬ್ಬರು ವಿದ್ಯಾರ್ಥಿನಿಯರು ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ಅಕಾಡೆಮಿಯ ಮುಖ್ಯ ತರಬೇತುದಾರ ಎಂ.ಎಸ್.ಚೇತನ್ ಹೇಳಿದರು.

ಅಕಾಡೆಮಿಯ ವಿದ್ಯಾರ್ಥಿನಿಯರಾದ ಜೆ.ಶಿವಾನಿ ತ್ರಿಪುರಾದ ಅಗರ್ತಲಾದಲ್ಲಿ ನಡೆಯಲಿರುವ ಎಸ್‌ಜಿಎಫ್‌ಐ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ ಹಾಗೂ ಎಂ.ಎಸ್.ಜ್ಞಾನವಿ ಅವರು ಕರ್ನಾಟಕ- ಗೋವಾ ಜಂಟಿ ತಂಡದ ಸದಸ್ಯರಾಗಿ ಸಿಐಎಸ್‌ಸಿಇ ರಾಷ್ಟ್ರೀಯ ೧೭ ವರ್ಷದೊಳಗಿನ ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ವರ್ಣ ಪದಕ ವಿಜೇತರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೆ.ಶಿವಾನಿ ಹಿಮಾಚಲ ಪ್ರದೇಶದ ಕಾಂಗ್ರಾ ಜೆಎನ್‌ವಿಯಲ್ಲಿ ನಡೆದ ರಾಷ್ಟ್ರೀಯ ಚೆಸ್ ಸ್ಪರ್ಧೆಯಲ್ಲೂ ಸ್ವರ್ಣ ಪದಕ ಗಳಿಸಿದ್ದರು. ಮೈಸೂರಿನಲ್ಲಿ ನಡೆದ ಫಿಡೆ ರೇಟಿಂಗ್ ಸ್ಪರ್ಧೆಯಲ್ಲಿ ೨ ಸಾವಿರ ರು. ನಗದು ಬಹುಮಾನ ಗೆದ್ದಿದ್ದಾರೆ. ಎಂ.ಎಸ್.ಜ್ಞಾನವಿ ಅವರು ಕರ್ನಾಟಕ-ಗೋವಾ ಜಂಟಿ ತಂಡದ ೧೦ ಸದಸ್ಯರಲ್ಲಿ ಒಬ್ಬರಾಗಿ ಸ್ವರ್ಣ ಪದಕ ವಿಜೇತರಾಗಿದ್ದಾರೆ. ಮೈಸೂರು ಬೃಂದಾವನ ರೋಟರಿ ೧೬ ವರ್ಷದೊಳಗಿನ ಬಾಲಕಿಯರ ಸ್ಟ್ಯಾಂಡರ್ಡ್ ಪಿಡೆ ರೇಟಿಂಗ್ ಚೆಸ್ ಟೂರ್ನ್‌ಮೆಂಟ್‌ನ ಓಪನ್ ವರ್ಗದಲ್ಲಿ ೮ನೇ ಸ್ಥಾನ ಗಳಿಸಿ ೭ ಸಾವಿರ ನಗದು ಬಹುಮಾನ ಹಾಗೂ ೨೪ ಫಿಡೆ ರೇಟಿಂಗ್ ಪಾಯಿಂಟ್ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿನಿಯರಾದ ಜೆ.ಶಿವಾನಿ, ಎಂ.ಎಸ್.ಜ್ಞಾನವಿ, ಶಿವಾನಿ ಪೋಷಕರಾದ ಜಯಪಾಲ್, ಕೋಕಿಲ ಗೋಷ್ಠಿಯಲ್ಲಿದ್ದರು.