ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ: ಜಟ್ಟಿಗಳ ಕಾದಾಟ

| Published : Sep 18 2025, 01:12 AM IST

ಸಾರಾಂಶ

ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತ ಬುಧವಾರ ಜಗಜಟ್ಟಿಗಳ ನಡುವೆ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ಅದ್ಧೂರಿಯಾಗಿ ಜರುಗಿದವು, ಕುಸ್ತಿ ವೀಕ್ಷಿಸಲು ಅನೇಕ ಗ್ರಾಮ ಮತ್ತು ಪಟ್ಟಣಗಳಿಂದ ಅಪಾರ ಪ್ರಮಾಣದ ಜನಸಾಗರವೇ ಹರಿದು ಬಂದಿತ್ತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತ ಬುಧವಾರ ಜಗಜಟ್ಟಿಗಳ ನಡುವೆ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ಅದ್ಧೂರಿಯಾಗಿ ಜರುಗಿದವು, ಕುಸ್ತಿ ವೀಕ್ಷಿಸಲು ಅನೇಕ ಗ್ರಾಮ ಮತ್ತು ಪಟ್ಟಣಗಳಿಂದ ಅಪಾರ ಪ್ರಮಾಣದ ಜನಸಾಗರವೇ ಹರಿದು ಬಂದಿತ್ತು.

ಬನಹಟ್ಟಿಯ ರಾಜೇಂದ್ರ ಹಾಗೂ ಶ್ರೀನಿವಾಸ ಭದ್ರಣ್ಣವರ ಕುಸ್ತಿ ಮೈದಾನಕ್ಕೆ ಪೂಜೆ ಸಲ್ಲಿಸಿದರು. ೧೦೦ಕ್ಕೂ ಹೆಚ್ಚು ಕುಸ್ತಿಪಟುಗಳು ಜಯಕ್ಕಾಗಿ ಹೋರಾಟ ನಡೆಸಿದರು. ವಿಭಿನ್ನ ಟಾಂಗ್‌ ಹಾಕಿದಾಗ ನೆರೆದ ಜನರು ಕೇ ಕೇ, ಚಪ್ಪಾಳೆ ತಟ್ಟುವ ಮೂಲಕ ಹುರುದುಂಬಿಸಿದರು. ಮೈಸೂರು ದಸರಾ ಕುಸ್ತಿಯಲ್ಲಿ ಪಾಲ್ಗೊಳ್ಳುವ ಅವಕಾಶ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕುಸ್ತಿ ಪಟುಗಳು ಪಾಲ್ಗೊಂಡಿದ್ದರು.

ಸಂಭ್ರಮಕ್ಕೆ ಮಳೆ ಅಡ್ಡಿ: ಕುಸ್ತಿ ನಡೆಯುವ ಮಧ್ಯಂತರದಲ್ಲಿ ಮಳೆ ಬಂದಿದ್ದರಿಂದ ಕುಸ್ತಿಗಳನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದರಿಂದ ಕುಸ್ತಿ ಪಟುಗಳಿಗೆ ಹಾಗೂ ನೆರೆದಿದ್ದ ಕುಸ್ತಿ ಪ್ರೇಮಿಗಳಿಗೆ ಕೊಂಚ ನಿರಾಸೆ ಆಯಿತು. ಮಳೆಯ ಮಧ್ಯೆಯೇ ಕುಸ್ತಿಗಳು ಪ್ರಾರಂಭವಾಗಿದ್ದವು. ಅದ್ಯಾವದನ್ನೂ ಲೆಕ್ಕಿಸದೆ ಕಾದಾಡಿದ ಪೈಲ್ವಾನರು ಮದಗಜಗಳಂತೆ ಕಾದಾಡಿದರು. ಹೊಡಿ, ಎತ್ತ, ತಿರುವ ಹಾ.. ಉಕಾಡ್ ಹಾಕ್ಯಾನ್ರಿ.. ಟಾಂಗ್ ಜೋಡಿ ಒಳ ಟಾಂಗ್, ಹೊರ ಟಾಂಗ್, ದಿಸೆ ಜೋಡಿ ಚಿತ್ತ ಹಾಕ್ಯಾನ್ರೀ.... ಹೀಗೆ ಕುಸ್ತಿ ಶೈಲಿಯ ಮಾತುಗಳು ಕೇಳಿಬಂದವು.

ಮಳೆಯಿಂದ ರಾಷ್ಟ್ರಮಟ್ಟದ ಪೈಲ್ವಾನರ ಕುಸ್ತಿಗಳು ನಡೆಯದ ಪೈಲ್ವಾನರು ವಾಪಸ್ ತೆರಳಿದ ಪ್ರಸಂಗ ನಡೆಯಿತು.

ಸಿದ್ದು ಕೊಣ್ಣೂರ, ವಿದ್ಯಾಧರ ಸವದಿ, ಕಮಿಟಿ ಅಧ್ಯಕ್ಷ ಚನ್ನವೀರಪ್ಪ ಹಾದಿಮನಿ, ದೇವರಾಜ ಅರಸು ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್, ಎನ್.ಜಿ, ಬ್ರಿಜ್‌ಮೋಹನ ಡಾಗಾ, ಮಲ್ಲಿಕಾರ್ಜುನ ಬಾಣಕಾರ, ಈರಪ್ಪ ಹಿಪ್ಪರಗಿ, ಶ್ರೀಶೈಲ ದಭಾಡಿ, ದಾನಪ್ಪ ಹುಲಜತ್ತಿ, ಭೀಮಸಿ ಮಗದುಮ್, ದೇವಲ ದೇಸಾಯಿ ಸೇರಿದಂತೆ ಅನೇಕರಿದ್ದರು.