ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಜಿಲ್ಲೆಯ ಮೇರು ರಾಜಕಾರಣಿ, ಮಾಜಿ ಸಚಿವ ದಿವಂಗತ ಎಚ್. ಸಿ. ಶ್ರೀಕಂಠಯ್ಯನವರ ಜನ್ಮ ಶತಮಾನೋತ್ಸವದ ಅಂಗವಾಗಿ ತಾಲೂಕಿನ ಎಚ್. ಸಿ. ಶ್ರೀಕಂಠಯ್ಯ ಸೇವಾ ಸಮಿತಿಯು ಜೂನ್ ೫ರಿಂದ ೭ರವರೆಗೆ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸೇವಾಸಮಿತಿ ಅಧ್ಯಕ್ಷ ವಿ.ಎನ್. ಅಶೋಕ್ ಹೇಳಿದರು.ಪಟ್ಟಣದ ದಿ. ಶ್ರೀಕಂಠಯ್ಯ ಸಭಾಂಗಣದಲ್ಲಿ ವಾಲಿಬಾಲ್ ಪಂದ್ಯಾವಳಿ ಕುರಿತಾಗಿ ನಡೆದ ಸೇವಾಸಮಿತಿ ಸದಸ್ಯರು ಮತ್ತು ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಕಂಡ ಧೀಮಂತ ನಾಯಕ, ಸಹಕಾರ ಬಂಧು ಮಾಜಿ ಸಚಿವ ಎಚ್. ಸಿ. ಶ್ರೀಕಂಠಯ್ಯನವರ ೧೦೦ನೇ ವರ್ಷದ ಜನ್ಮದಿನಾಚರಣೆಯನ್ನು ತಾಲೂಕಿನಲ್ಲಿ ಸ್ಮರಣೀಯವಾಗಿ ಆಚರಿಸುವ ನಿರ್ಧಾರವನ್ನು ಅವರ ಕುಟುಂಬವರ್ಗ ಮತ್ತು ಶ್ರೀಕಂಠಯ್ಯನವರ ಅನುಯಾಯಿಗಳು, ಕಾರ್ಯಕರ್ತರು ಮಾಡಿದ್ದು, ಜುಲೈ ೧೮ರಂದು ಆಚರಣೆಗೆ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಇದರ ಸಲುವಾಗಿ ಶ್ರೀಕಂಠಯ್ಯನವರ ಮೊಮ್ಮಗ ಕವಿಕಾ ಅಧ್ಯಕ್ಷ ಎಚ್. ಸಿ.ಲಲಿತ್‌ ರಾಘವ್ ಅವರು ಈಗಾಗಲೇ ತಮ್ಮ ತಾತನ ಸ್ಮರಣಾರ್ಥ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಅಯೋಜನೆ ಮಾಡಿದ್ದಾರೆ. ತಾಲೂಕಿನ ವಿದ್ಯಾವಂತ ನಿರುದ್ಯೋಗಿಗಳು ಕೆಲಸ ಪಡೆಯಲು ನೆರವಾಗಲು, ೨ ಸಾವಿರ ಯುವಕರಿಗೆ ಕೌಶಲ್ಯ ತರಬೇತಿ, ಇಂಗ್ಲೀಷ್‌ ಸ್ಪೀಕಿಂಗ್ ಕೋರ್ಸ್, ಕಂಪ್ಯೂಟರ್ ಕಲಿಕೆಯಂತಹ ತರಬೇತಿ ಕಾರ್ಯಕ್ರಮಗಳು, ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಗುಡಿಕೈಗಾರಿಕೆಗಳ ತರಬೇತಿ, ಅರ್ಥಿಕ ನೆರವು ನೀಡುವ ಕೆಲಸ ಮಾಡುತ್ತಿದ್ದಾರೆ ಎಂದರು.ಜೂನ್ ೫ರಿಂದ ೭ರವರೆಗೆ ಮೂರು ದಿನಗಳು ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿ ಅಣ್ಣಯ್ಯ ಕಪ್‌ನ್ನು ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಯೋಜಿಸಿದ್ದು, ಪಂದ್ಯಾವಳಿಯ ಆಯೋಜನೆಯ ರೂಪರೇಷೆಗಳನ್ನು ಕವಿಕಾ ಅಧ್ಯಕ್ಷರಾದ ಎಚ್. ಸಿ. ಲಲಿತ್‌ ರಾಘವ್‌ರವರ ಸಲಹೆ, ಸೂಚನೆ ಮೇರೆಗೆ ನಡೆಸಿದ್ದು, ತಂಡಗಳ ಜರ್ಸಿ ಅನಾವರಣಗೊಳಿಸಲಾಗಿದೆ ಎಂದರು.

ಸೇವಾಸಮಿತಿ ನಿರ್ದೇಶಕ, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಮಿಲ್ಟ್ರಿ ಮಂಜು ಮಾತನಾಡಿ, ಎಚ್. ಸಿ. ಶ್ರೀಕಂಠಯ್ಯನವರ ಹೆಸರಿನಲ್ಲಿ ಅಣ್ಣಯ್ಯ ಕಪ್ ಎಂಬ ವಾಲಿಬಾಲ್ ಪಂದ್ಯಾವಳಿಗೆ ದೇಶದ ಹಲವು ರಾಜ್ಯಗಳಿಂದ ಆಯ್ದ ಅತ್ಯುತ್ತಮ ತಂಡಗಳು ಭಾಗಿಯಾಗಲಿವೆ. ಹೊನಲು ಬೆಳಕಿನ ಪಂದ್ಯಾವಳಿಯಾಗಿದ್ದು, ಮೊದಲನೇ ಬಹುಮಾನವಾಗಿ ೧.೫ ಲಕ್ಷ ರು. ದ್ವಿತೀಯ ಬಹುಮಾನವನ್ನು ₹೧.೪ ಲಕ್ಷ , ತೃತೀಯ ಬಹುಮಾನವಾಗಿ ₹೧.೩ ಲಕ್ಷ ಮತ್ತು ನಾಲ್ಕನೇ ಬಹುಮಾನವಾಗಿ ₹೧.೨೦ ಲಕ್ಷ ರು. ನೀಡಲಿದ್ದೇವೆ ಎಂದರು. ಈ ವೇಳೆ ಎಚ್. ಸಿ. ಶ್ರೀಕಂಠಯ್ಯ ಸೇವಾಸಮಿತಿ ಪದಾಧಿಕಾರಿಗಳಾದ ಎಚ್. ಜಿ. ಮಂಜೇಗೌಡ, ಗೋವಿಂದ್‌ರಾಜು, ಆಗ್ರಹಾರ ಗಿರೀಶ್, ಎಚ್. ಎಂ. ಜಯರಾಮ್, ಸಿ.ಟಿ. ರಮೇಶ್, ಶಿವಸ್ವಾಮಿ, ವಿಶ್ವನಾಥ್, ಸಿ.ಟಿ.ಅಶೋಕ್‌ಕುಮಾರ್, ಸುಜಾತ, ಉಮಾಶಂಕರ್, ಕೆ.ಜಿ.ಬಾಬು, ಗನ್ನಿ ಗಿರೀಶ್, ರುದ್ರೇಶ್ ಸೇರಿ ಇತರರು ಇದ್ದರು.