ಲೋಕ ಅದಾಲತ್ ಪೀಠದಲ್ಲಿ ನ್ಯಾಯಾಧೀಶರು, ನುರಿತ ವಕೀಲರು ಕುಳಿತು ವಾದಿ-ಪ್ರತಿವಾದಿಗಳ ಮನವೊಲಿಸಿ ವ್ಯಾಜ್ಯಕ್ಕೆ ಅವರ ಸಮಕ್ಷಮದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಂಡರೆ ನ್ಯಾಯಾಲಯದ ಶುಲ್ಕ ವಿಧಿಸುವುದಿಲ್ಲ. ಈಗಾಗಲೇ ಕಟ್ಟಿರುವ ನ್ಯಾಯಾಲಯದ ಶುಲ್ಕವನ್ನು ಹಿಂದಿರುಗಿಸಲಾಗುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜು.೧೧ರಂದು ಲೋಕ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎನ್.ಸುಬ್ರಹ್ಮಣ್ಯ ಅವರು ಹೇಳಿದರು.ಆಸ್ತಿ ವಿವಾದಗಳನ್ನು ಒಳಗೊಂಡ ಸಿವಿಲ್ ವ್ಯಾಜ್ಯಗಳು, ವಿಭಾಗದ ದಾವೆಗಳು, ಹಣ ವಸೂಲಾತಿ ದಾವೆಗಳು, ನಿರ್ದಿಷ್ಟ ಪರಿಹಾರ ಕಾಯ್ದೆಯಡಿ ದಾಖಲಿಸಿರುವ ದಾವೆಗಳು, ಮೋಟಾರು ವಾಹನಗಳ ಪ್ರಕರಣಗಳು, ಎಂಎಂಆರ್ಡಿ ಪ್ರಕರಣಗಳು, ಜೀವನಾಂಶ ಪ್ರಕರಣ, ದಾಂಪತ್ಯ ಪುನರ್ ಸ್ಥಾಪನೆ ಪ್ರಕರಣಗಳು, ರಾಜಿಯಾಗುವಂತಹ ಕ್ರಿಮಿನಲ್ ಪ್ರಕರಣಗಳು, ಚೆಕ್ಬೌನ್ಸ್ ಪ್ರಕರಣಗಳು, ಎಲ್ಎಸಿ, ಎಕ್ಸಿಕ್ಯುಷನ್ ಪ್ರಕರಣಗಳನ್ನು ರಾಜಿಗೆ ತೆಗೆದುಕೊಂಡು ಇತ್ಯರ್ಥಗೊಳಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭೂ ಸ್ವಾಧೀನ ಪ್ರಕರಣಗಳಲ್ಲಿ ಪರಿಹಾರ ಮೊತ್ತ ನೀಡಲು ಹೇಮಾವತಿ ವ್ಯಾಪ್ತಿಯ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಿರುವುದಾಗಿ ವಿವರಿಸಿದರು.ಲೋಕ ಅದಾಲತ್ ಪೀಠದಲ್ಲಿ ನ್ಯಾಯಾಧೀಶರು, ನುರಿತ ವಕೀಲರು ಕುಳಿತು ವಾದಿ-ಪ್ರತಿವಾದಿಗಳ ಮನವೊಲಿಸಿ ವ್ಯಾಜ್ಯಕ್ಕೆ ಅವರ ಸಮಕ್ಷಮದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಂಡರೆ ನ್ಯಾಯಾಲಯದ ಶುಲ್ಕ ವಿಧಿಸುವುದಿಲ್ಲ. ಈಗಾಗಲೇ ಕಟ್ಟಿರುವ ನ್ಯಾಯಾಲಯದ ಶುಲ್ಕವನ್ನು ಹಿಂದಿರುಗಿಸಲಾಗುವುದು ಎಂದರು.
ಸಾರಿಗೆ ಇಲಾಖೆಯಲ್ಲಿ ೧೯೯೧ ರಿಂದ ೨೦೨೨ರ ಅವಧೀಯಲ್ಲಿ ದಾಖಲಾಗಿರುವ ಬಾಕಿ ಇರುವ ಪ್ರಕರಣಗಳು ಮತ್ತು ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ನಲ್ಲಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.೫೦ರಷ್ಟು ರಿಯಾಯ್ತಿ ನೀಡಿ ಆದೇಶಿಸಲಾಗಿದೆ. ದಂಡ ಪಾವತಿಸಲು ೨೧.೦೬.೨೦೨೬ ರಿಂದ ೧೦.೦೭.೨೦೨೬ರವರೆಗೆ ಕಾಲಾವಕಾಶ ನೀಡಲಾಗಿದೆ. ಅದೇ ರೀತಿ ನಗರದ ಸಂಚಾರಿ ಪೊಲೀಸ್ ಠಾಣೆ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ಕೌಂಟರ್ಗಳಲ್ಲಿ ೧೧.೦೨.೨೦೨೩ವರೆಗೆ ಬಾಕಿ ಇರುವ ಇ-ಚಲನ್ ದಂಡದ ಮೊತ್ತವನ್ನು ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.ಸರ್ವೋಚ್ಛ ನ್ಯಾಯಾಲಯವು ಸಮಾಧಾನ್ ಸಮರೋಹ್ ಎಂಬ ವಿಶೇಷ ಲೋಕ್ ಅದಾಲತ್ನ್ನು ಆ.೨೧, ೨೨, ೨೩ರಂದು ಆಯೋಜಿಸಿದೆ. ಈಗಾಗಲೇ ಜಿಲ್ಲೆಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಒಟ್ಟು ೨೧ ಪ್ರಕರಣ ಗುರುತಿಸಲಾಗಿದೆ. ಹಾಗೂ ಕಕ್ಷಿದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಪೂರ್ವ ಸಂಧಾನ ನಡೆಸಲಾಗುತ್ತಿದ್ದು, ಈಗಾಗಲೇ ಸಂಧಾನ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ಸಂಧಾನ ಯಶಸ್ವಿಯಾದಲ್ಲಿ ಸರ್ವೋಚ್ಛ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಈ ಪ್ರಕರಣಗಳನ್ನು ಆಗಸ್ಟ್ ತಿಂಗಳಲ್ಲಿ ನಡೆಯುವ ವಿಶೇಷ ಲೋಕ್ಅದಾಲತ್ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.
ಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ, ಡಿವೈಎಸ್ಪಿ ಶಿವಮೂರ್ತಿ ಇದ್ದರು.