ಜು.13ರಂದು ರಾಷ್ಟ್ರೀಯ ಲೋಕ ಅದಾಲತ್‌

| Published : Jun 26 2024, 12:36 AM IST

ಜು.13ರಂದು ರಾಷ್ಟ್ರೀಯ ಲೋಕ ಅದಾಲತ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ರೀತಿಯ ಸಣ್ಣ ಪುಟ್ಟ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವುದರಿಂದ ಗಂಟು-ನಂಟು ಉಳಿಯುತ್ತದೆ. ನ್ಯಾಯಾಲಯದ ಮೇಲಿನ ಹೊರೆಯು ಕಡಿಮೆಯಾಗುತ್ತದೆ. ನ್ಯಾಯಾಲಯಕ್ಕೆ ಅಲೆದಾಡುವುದು ತಪ್ಪುತ್ತದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಜುಲೈ ೧೩ ರಂದು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು ಕಕ್ಷಿದಾರರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನಾಗವೇಣಿ ತಿಳಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸರ್ವೋಚ್ಚ ನ್ಯಾಯಾಲಯ ಮತ್ತು ಹೈಕೋರ್ಟ್ ನಿರ್ದೇಶನದಂತೆ ಕೈಗೊಳ್ಳುತ್ತಿರುವ ರಾಷ್ಟ್ರೀಯ ಲೋಕ ಅದಾಲತ್ ಕಕ್ಷಿದಾರರಿಗೆ ವರದಾನವಾಗಿದೆ. ವಿವಿಧ ರೀತಿಯ ಸಣ್ಣ ಪುಟ್ಟ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವುದರಿಂದ ಗಂಟು-ನಂಟು ಉಳಿಯುತ್ತದೆ. ನ್ಯಾಯಾಲಯದ ಮೇಲಿನ ಹೊರೆಯು ಕಡಿಮೆಯಾಗುತ್ತದೆ. ನ್ಯಾಯಾಲಯಕ್ಕೆ ಅಲೆದಾಡುವ ಸಮಯ, ಹಣ, ಶ್ರಮ ಉಳಿತಾಯವಾಗುತ್ತದೆಯೆಂದರು.

ಸಂದಾನ ಮೂಲಕ ಇತ್ಯರ್ಥ

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥವಾದ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣಗಳು ಒಂದೇ ಆಗಿರುತ್ತವೆ. ಯಾವುದೇ ವ್ಯತ್ಯಾಸ ಇರುವುದಿಲ್ಲ. ರಾಷ್ಟ್ರೀಯ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥವಾದ ಪ್ರಕರಣಗಳು ಅಂತಿಮ ಮುಕ್ತಾಯವಾಗುತ್ತವೆ. ಯಾವುದೇ ಅಪೀಲು ಹೋಗುವುದಕ್ಕೆ ಅವಕಾಶ ಇರುವುದಿಲ್ಲ. ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣಗಳ ವಿರುದ್ದ ಮುಂದಿನ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಬಹುದು. ಹೀಗಾಗಿ ಲೋಕ ಅದಾಲತ್ ಗಳಲ್ಲಿ ಪ್ರಕರಣಗಳು ಒಂದೇ ದಿನದಲ್ಲಿ ಇತ್ಯರ್ಥವಾಗುತ್ತವೆ ಎಂದರು.

ಅದಾಲತ್ ನಲ್ಲಿ ಹಿರಿಯ ವಕೀಲರ ಮಾರ್ಗದರ್ಶನ, ಸಲಹೆ ನೀಡುತ್ತಾರೆ. ಯಾವುದೇ ಒತ್ತಡ ಒತ್ತಾಯ ಇರುವುದಿಲ್ಲ. ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರೆ ಈಗಾಗಲೇ ಪಾವತಿಸಿರುವ ನ್ಯಾಯಾಲಯದ ಶುಲ್ಕವನ್ನು ಹಿಂದಿರುಗಿಸಲಾಗುವುದು. ಪರಸ್ಪರ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡರೆ ದ್ವೇಷ ದೂರವಾಗಿ ಉತ್ತಮ ಬಾಂಧವ್ಯವೂ ಬೆಳೆಯುತ್ತದೆಯೆಂದು ಅಭಿಪ್ರಾಯಪಟ್ಟರು.

ಕಾನೂನು ಸೇವಾ ಸಮಿತಿ ಸಂಪರ್ಕಿಸಿ

ಸಣ್ಣ ಪುಟ್ಟ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡರೆ ನ್ಯಾಯಾಲಯದ ಮೇಲಿನ ಹೊರೆಯು ಕಡಿಮೆಯಾಗುತ್ತದೆ. ಇತರೆ ಪ್ರಕರಣಗಳಿಗೆ ಹೆಚ್ಚಿನ ಸಮಯ ದೊರೆಯುತ್ತದೆ. ನ್ಯಾಯಾಲಯದಲ್ಲಿರುವ ಕಾನೂನು ಸೇವಾ ಸಮಿತಿಯನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದೆಂದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಪಿ.ಎಂ.ಪ್ರಕಾಶ್, ಎಚ್.ವಿ.ಶೈಲಜಾ, ತ೫ಹಶೀಲ್ದಾರ್ ಸುದರ್ಶನ ಯಾದವ್ ಮತ್ತಿತರರು ಭಾಗವಹಿಸಿದ್ದರು