ತಾಯಿ ನಮಗೆ ಜನ್ಮ ಕೊಟ್ಟ ನಂತರ ಭೂ ತಾಯಿ ನಮ್ಮನ್ನು ಕಟ್ಟ ಕಡೆಯವರೆಗೂ ಹೊತ್ತಿರುತ್ತಾಳೆ. ಹಾಗಾಗಿ ತಂದೆ ತಾಯಂದಿರಿಗೆ ತೋರಿಸುವಷ್ಟು ಪ್ರೀತಿ-ಪ್ರೇಮವನ್ನು ಪ್ರಕೃತಿಗೂ ತೋರಿಸಬೇಕು. ಇಲ್ಲಿದ್ದರೆ ಜೀವನ ಪರ್ಯಂತ ಪರದಾಡುವ ಪರಿಸ್ಥಿತಿ ಎದುರಾಗುತ್ತದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ದಾಹಕ್ಕೆ ಸಿಲುಕಿರುವ ನಾವುಗಳು ಪ್ರಕೃತಿ, ಪ್ರಾಣಿ ಪಕ್ಷಿಗಳನ್ನು ಕೊಂದು ತಿನ್ನುತ್ತಿದ್ದೇವೆ. ಇದು ಪ್ರಕೃತಿಗೆ ವಿರುದ್ಧವಾಗುತ್ತಿದೆ. ಪರಿಸರ ಉಳಿಸದಿದ್ದರೆ ಮುಂದೊಂದು ದಿನಗಳು ಬಹಳ ಕಷ್ಟಕರವಾಗಿರುತ್ತದೆ ಉಪ ಲೋಕಾಯುಕ್ತ ಬಿ.ವೀರಪ್ಪ ಎಚ್ಚರಿಸಿದರು.ತಾಲೂಕಿನ ಪಡುವಲಪಟ್ಟಣ ಗ್ರಾಮದ ಹೊರವಲಯದ ಬಸವನಕಲ್ಲು ಅರಣ್ಯ ತಪ್ಪಲಿನಲ್ಲಿ ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ, ತಾಲೂಕು ವಕೀಲರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕದ ಸಹಭಾಗಿತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಮಾತೃಗೊಂದು ಮರ ಸಹಸ್ರ ಗಿಡನೆಡುವ ಅಭಿಯಾನ-4ಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಯಿ ನಮಗೆ ಜನ್ಮ ಕೊಟ್ಟ ನಂತರ ಭೂ ತಾಯಿ ನಮ್ಮನ್ನು ಕಟ್ಟ ಕಡೆಯವರೆಗೂ ಹೊತ್ತಿರುತ್ತಾಳೆ. ಹಾಗಾಗಿ ತಂದೆ ತಾಯಂದಿರಿಗೆ ತೋರಿಸುವಷ್ಟು ಪ್ರೀತಿ-ಪ್ರೇಮವನ್ನು ಪ್ರಕೃತಿಗೂ ತೋರಿಸಬೇಕು. ಇಲ್ಲಿದ್ದರೆ ಜೀವನ ಪರ್ಯಂತ ಪರದಾಡುವ ಪರಿಸ್ಥಿತಿ ಎದುರಾಗುತ್ತದೆ ಎಂದರು.ಕಳೆದ ನಾಲ್ಕೈದು ದಶಕಗಳ ಹಿಂದೆ ಸಾಕಷ್ಟು ಅರಣ್ಯ ಪ್ರದೇಶವಿತ್ತು ಕೆರಗಳಿದ್ದವು. ಕಾಡಿನೊಳಗೆ ಸಿಗುತ್ತಿದ್ದ ಹಲವು ಬಗೆಯ ಹಣ್ಣುಗಳು ತಿಂದು ಕಾಡು ಪ್ರಾಣಿಗಳು ಜೀವಿಸುತ್ತಿದ್ದವು. ಆದರೆ, ಮನುಷ್ಯರಾದ ನಾವುಗಳು ಅರಣ್ಯ ಮತ್ತು ಕೆರೆಗಳನ್ನು ತಿಂದು ತೇಗಿದ್ದೇವೆ. ಅರಣ್ಯ ಪ್ರದೇಶದಲ್ಲಿ ಹೋಂ ಸ್ಟೇಗಳು ತಲೆ ಎತ್ತಿವೆ. ಅರಣ್ಯ ನಾಶದಿಂದಾಗಿ ಕಾಡು ಪ್ರಾಣಿಗಳು ವಿಧಿ ಇಲ್ಲದೆ ಮನುಷ್ಯರ ಮೇಲೆ ದಾಳಿ ಮಾಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಾವು ಎಚ್ಚೆತ್ತುಕೊಂಡು ಔಷಧಿ ಮೌಲ್ಯಯುತವಾದ ಪ್ರಕೃತಿ ಕಾಪಾಡದಿದ್ದರೆ ಮುಂದೊಂದು ದಿನ ಉಸಿರಾಡಲು ಗಾಳಿ ಸಿಗದೆ ಬಳಲಿ ಸಾಯಬೇಕಾಗುತ್ತದೆ. ಅಂತಹ ಪರಿಸ್ಥಿತಿ ಬರಬಾರದೆಂದರೆ ಪ್ರಕೃತಿಯನ್ನು ಪ್ರೀತಿಸಿ ಆಸ್ವಾದಿಸಬೇಕು. ಹಾಗಾಗಿ ಶಿಕ್ಷಕರು ಮಕ್ಕಳಲ್ಲಿ ಸಂಸ್ಕಾರ, ದೇಶಭಕ್ತಿ ಮತ್ತು ಪ್ರಕೃತಿ ಪ್ರೇಮ ಬೆಳೆಸಬೇಕು. ಪರಿಸರದ ವಾಸನೆ ಎಷ್ಟಿದೆ ಎಂಬುದನ್ನು ಯುವ ಸಮುದಾಯ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಬೇಕಿದೆ ಎಂದರು.ದೇಶದ 148 ಕೋಟಿ ಭಾರತೀಯರು, 8 ಕೋಟಿ ಕನ್ನಡಿಗರು ಅವರ ಜನ್ಮ ದಿನದ ಪ್ರಯುಕ್ತ ಒಂದೊಂದು ಗಿಡ ನೆಟ್ಟರೆ 5 ವರ್ಷದಲ್ಲಿ ಕೋಟ್ಯಂತರ ಮರಗಳು ಬೆಳೆಯುತ್ತವೆ. ಅದಕ್ಕೆ ಅವಕಾಶ ಕೊಡುತ್ತಿಲ್ಲ. ಆದ್ದರಿಂದ ಮಕ್ಕಳು ಪೋಷಕರಿಂದ ಏನನ್ನೂ ನಿರೀಕ್ಷಿಸದೆ ಒಂದೊಂದು ಗಿಡ ನೆಡುವ ಸಂಕಲ್ಪ ಮಾಡಬೇಕು. ದೇಶದ ಪ್ರತಿಯೊಬ್ಬ ಪ್ರಜೆಯೂ ಕೂಡ ಒಂದು ಸಸಿ ನೆಡದಿದ್ದರೆ ನಿಮ್ಮ ಜೀವನ ಪ್ರಯೋಜನವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಗಿಡ ನೆಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸಂದರ್ಭದಲ್ಲಿ ಶೇಕಡ 18ರಷ್ಟು ಮಾತ್ರ ಶಿಕ್ಷಣವಿತ್ತು. ಶೇಕಡ 95ರಷ್ಟು ಸ್ವಾತಂತ್ರ್ಯ ಯೋಧರು, ಸ್ವಾತಂತ್ರ್ಯ ಪ್ರೇಮಿಗಳಿದ್ದರು. ಈಗ ದೇಶದಲ್ಲಿ ಶೇ.90ರಷ್ಟು ವಿದ್ಯಾವಂತರಿದ್ದರೂ ಸಹ ಶೇ.95ರಷ್ಟು ಭ್ರಷ್ಟರಾಗಿದ್ದಾರೆ. ವಿದ್ಯಾವಂತರಿಂದಲೇ ಕ್ರಿಮಿನಲ್, ವರದಕ್ಷಿಣೆ, ಕೌಟುಂಬಿಕ ಕಲಹ ಪ್ರಕರಣಗಳು ಹೆಚ್ಚಾಗುತ್ತಿವೆ. ವಿದ್ಯಾವಂತ ಮೋಸಗಾರರಿಂದ ದೇಶ ಹದಗೆಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.