ಸಾರಾಂಶ
ಕೊಪ್ಪಳ: ಕೊಪ್ಪಳ ತಾಲೂಕಿನಲ್ಲಿ ಬಹಳ ಕಾರ್ಖಾನೆಗಳು ಸ್ಥಾಪನೆಯಾಗಿದ್ದು, ಅದರಿಂದ ತಾಲೂಕಿನ ಸಾಕಷ್ಟು ಹಳ್ಳಿಗಳು ಬಹಳ ದುಷ್ಪರಿಣಾಮಗಳನ್ನು ಎದುರಿಸುತ್ತಿವೆ. ಬೃಹತ್ ಉಕ್ಕು ಕಾರ್ಖಾನೆ ಸ್ಥಾಪನೆ ಬೇಡ ಎಂದು ಕರ್ನಾಟಕ ನವ ನಿರ್ಮಾಣ ಸೇನೆಯವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾ ಕೇಂದ್ರದ ಅನತಿ ದೂರದಲ್ಲಿಯೇ ಬೃಹತ್ ಉಕ್ಕು ಕಾರ್ಖಾನೆ ಸ್ಥಾಪನೆ ಮಾಡುತ್ತಿರುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿರುವುದು ದುರದೃಷ್ಟಕರ ಹಾಗೂ ಆತಂಕಕಾರಿ ಸಂಗತಿ. ಈ ಕಾರ್ಖಾನೆಗಳಿಂದ ಗ್ರಾಮೀಣ ಭಾಗದ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದ್ದು, ಬೆಳೆಗಳ ಹಾನಿಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡೆ ಸ್ಥಾಪನೆ ಹಾಗೂ ವಿಸ್ತರಣೆ ಮಾಡುತ್ತಿರುವುದು ಕೊಪ್ಪಳ ಜನರ ನಿದ್ದೆಗೆಡಿಸಿದೆ. ಈಗಾಗಲೇ ಈ ಕಾರ್ಖಾನೆಯಿಂದ ಜನರ ಆರೋಗ್ಯ ಹದಗೆಡುತ್ತಿದ್ದು, ನಿರಂತರ ಕೆಮ್ಮು ಕಾಡುತ್ತಿದೆ. ಮಕ್ಕಳ ಹಾಗೂ ಆರೋಗ್ಯದ ಮೇಲೆ ವಯೋವೃದ್ಧರು ಕೂಡ ಉಸಿರಾಟದ ತೊಂದರೆ ಸೇರಿದಂತೆ, ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.ಮನೆ ಮೇಲೆ ಮನೆಯ ಕಾಂಪೌಂಡ್ನಲ್ಲಿ ಕರಿಬೂದಿ ಹಾರಾಡುತ್ತಿದ್ದು, ಇದು ಜನರ ಆತಂಕಕ್ಕೆ ಕಾರಣವಾಗಿದೆ. ಹೀಗೆ ಬೃಹತ್ ಕಾರ್ಖಾನೆ ವಿಸ್ತರಣೆಗೆ ಅವಕಾಶ ಕೊಟ್ಟರೆ ಕೊಪ್ಪಳ ನಗರ ಇನ್ನೊಂದು ತೋರಣಗಲ್ ಆಗುವುದರಲ್ಲಿ ಸಂಶಯವೇ ಇಲ್ಲ. ನಮ್ಮ ನೆಲ, ಜಲ ಬಳಸಿಕೊಂಡು ಕನ್ನಡಿಗರಿಗೆ ಉದ್ಯೋಗ ಕೊಡದೆ ವಂಚನೆ ಮಾಡುತ್ತಿರುವುದು ಹೊಸದೇನಲ್ಲ. ನಮ್ಮ ನೆಮ್ಮದಿ ಜತೆ ಆಟ ಆಡುತ್ತಿರುವುದನ್ನು ಮೊದಲು ನಿಲ್ಲಿಸಿ. ಪರಿಸರ ಮತ್ತು ಮಾಲಿನ್ಯ ನಿಯಂತ್ರಣಾಧಿಕಾರಿಗಳು ಇದರಲ್ಲಿ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಆರೋಗ್ಯ ಇಲಾಖೆ ಕೂಡ ಸರ್ಕಾರಕ್ಕೆ ಮನದಟ್ಟು ಮಾಡಬೇಕೆಂದು ಮನವಿ ಸಲ್ಲಿಸಿದ್ದಾರೆ.
ಈ ಉಕ್ಕು ಕಾರ್ಖಾನೆ ವಿಸ್ತರಣೆಯನ್ನು ಈ ಕೂಡಲೇ ಸರ್ಕಾರ ಕೈ ಬಿಡಬೇಕು. ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.ಸಂಘಟನೆಯ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರು, ಗೌರವಾಧ್ಯಕ್ಷ ಜಿ.ಎಸ್. ಗೋನಾಳ, ತಾಲೂಕಾಧ್ಯಕ್ಷ ಮುದ್ದಪ್ಪ ಗೊಂದಿ ಹೊಸಳ್ಳಿ, ಪ್ರಮುಖರಾದ ಗವಿಸಿದ್ದಪ್ಪ ಮಂಗಳಾಪುರ, ಯುನುಸ್ ಅಲಿ ನಮಾಜಿ, ರಫೀ ಲೋಹಾರ, ಶಂಕರ ಮೇಟಿ, ಜಾಫರ್ ಸಾದಿಕ್, ದೇವೇಂದ್ರಪ್ಪ ತೊಂಡಿಹಾಳ, ಗವಿಸಿದ್ದಪ್ಪ ಹಲಗೇರಿ, ಮಂಜುನಾಥ ಪಾಟೀಲ್, ಮಾರುತಿ ಅಲ್ಲಾನಗರ, ಮಾರುತಿ ಕುಟಗನಹಳ್ಳಿ ಇತರರಿದ್ದರು.