ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಈ ಬಾರಿ ಅದ್ದೂರಿಯಾಗಿ ಹಾಗೂ ಜನರ ಹಬ್ಬವಾಗಿ ದಸರಾ ಆಚರಣೆ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನಿಂದ 9 ದಿನಗಳ ಕಾಲ ನವರಾತ್ರಿ ಹಾಗೂ 10ನೇ ದಿನ ವಿಜಯದಶಮಿ ನಡೆಯುತ್ತದೆ.
ಹೆಚ್ಚು ಹೆಚ್ಚು ಜನರು ಈ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು, ಮೂಲಕ ನಾಡಹಬ್ಬ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.ಈ ದಸರಾ ಹಬ್ಬದ ಸಂಕೇತ ಏನೆಂದರೆ ಶಿಷ್ಟರ ರಕ್ಷಣೆ, ದುಷ್ಟರ ಸಂಹಾರ, ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆ ಕೊಡುವುದು ಹಬ್ಬ ಇದು. ಹಿಂದೆ ರಾಜ, ಮಹಾರಾಜರು ವಿಜಯೋತ್ಸವ ಆಚರಣೆ ಮಾಡಲು ದಸರಾ ಮಾಡುತ್ತಿದ್ದರು, ಈಗ ಪ್ರಜಾ ಸರ್ಕಾರ ಬಂದ ಮೇಲೆ ಜನರ ಹಬ್ಬವಾಗಿ ಆಚರಣೆ ಮಾಡುತ್ತಿದ್ದೇವೆ. ಇಂದು ದೇಶ ವಿದೇಶಗಳಿಂದ ಲಕ್ಷಾಂತರ ಜನ ದಸರಾ ಮಹೋತ್ಸವ ವೀಕ್ಷಣೆ ಮಾಡಲು ಬರುತ್ತಿದ್ದಾರೆ ಎಂದರು.
ಮಹದೇವಪ್ಪ ಅವರ ನೇತೃತ್ವದಲ್ಲಿ ದಸರಾ:ಈಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ನೇತೃತ್ವದಲ್ಲಿ ಈ ವರ್ಷ ಅದ್ದೂರಿಯಾಗಿ ದಸರಾ ನಡೆಯುತ್ತದೆ. ಅದ್ದೂರಿಯಾಗಿ ನಡೆಯಲು ನೀವೆಲ್ಲ ಹೆಚ್ಚಾಗಿ ಪಾಲ್ಗೊಳ್ಳುವುದರಿಂದ ಹಾಗೂ ಆನಂದ, ಖುಷಿ ಪಡುವುದರಿಂದ ಸಾರ್ಥಕವಾಗುತ್ತದೆ. ಆಗ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಜೊತೆಗೆ ನಮ್ಮ ಸಂಸ್ಕೃತಿ ಪರಂಪರೆ ನಮ್ಮ ರಾಜ್ಯದ ಅಭಿವೃದ್ಧಿ ಜನರಿಗೆ ಹೆಚ್ಚಿಸುವಂತ ಕೆಲಸ ಮಾಡಲಾಗುತ್ತದೆ. ಹಾಗಾಗಿ ಇದು ಜನರ ಉತ್ಸವ ಎಂದು ಅವರು ತಿಳಿಸಿದರು.
ಈ ಆಹಾರ ಮೇಳವನ್ನು ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಶಾಸಕ ಎ.ಆರ್. ಕೃಷ್ಣಮೂರ್ತಿ, ವಿಧಾನ ಪರಿಷತ್ಸದಸ್ಯರಾದ ಸಿ.ಎನ್. ಮಂಜೇಗೌಡ, ಡಿ. ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾವತಿ ಅಮರನಾಥ್, ಮುಡಾ ಆಯುಕ್ತ ಎ.ಎನ್. ರಘುನಂದನ್, ಮಾನಸ, ಅಧಿಕಾರಿಗಳಾದ ಕಾಂತರಾಜ್, ಕುಮುದ ಭಾಗವಹಿಸಿದ್ದರು.