ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ರಾಜ್ಯದ ಪ್ರತಿಷ್ಠಿತ ತಾಂತ್ರಿಕ ಕಾಲೇಜುಗಳಲ್ಲಿ ಒಂದಾದ ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳಿಗೆ ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡೇಷನ್ ಮಂಡಳಿ ಮುಂದಿನ ಮೂರು ವರ್ಷಗಳಿಗೆ ಎನ್ಬಿಎ ಮಾನ್ಯತೆ ನೀಡಿರುವುದು ಸಂಸ್ಥೆಗೆ ಹಾಗೂ ಕಾಲೇಜಿಗೆ ಹೆಮ್ಮೆಯ ವಿಷಯ ಎಂದು ಸಂಸ್ಥೆಯ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿತು.ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾನಿಲಯದಲ್ಲಿ ಈ ಸಂಬಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕಲ್ಪತರು ವಿದ್ಯಾಸಂಸ್ಥೆ ಖಜಾಂಚಿ ಟಿ.ಎಸ್. ಶಿವಪ್ರಸಾದ್ ಮಾತನಾಡಿ ನಮ್ಮ ಕಾಲೇಜು ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದು ಇಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ದೇಶ ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ನಮ್ಮ ಕಾಲೇಜಿನ ಗರಿಮೆ ಎಂಬಂತೆ ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡೇಷನ್ ದೆಹಲಿ ತಂಡ ಕಳೆದ ಏಪ್ರಿಲ್ನಲ್ಲಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗಗಳಿಗೆ ಭೇಟಿ ನೀಡಿ ಇಲ್ಲಿನ ಮೂಲಭೂತ ವ್ಯವಸ್ಥೆ, ವಿದ್ಯಾರ್ಥಿಗಳ ಪಠ್ಯಕ್ರಮ, ಪಠ್ಯೇತರ ಚಟುವಟಿಕೆಗಳು, ಬೋಧನಾ ಕ್ರಮಗಳನ್ನು ಪರಿಶೀಲನೆ ಮಾಡಿ ಎಲ್ಲ ವಿಚಾರಗಳಲ್ಲಿಯೂ ಉತ್ತಮ ಅಂಕಗಳನ್ನು ನೀಡಿ ಎನ್.ಬಿ.ಎ ಮಾನ್ಯತೆ ನೀಡಿದೆ. ಇದರಿಂದ ಇನ್ನೂ ಹೆಚ್ಚಿನ ಶೈಕ್ಷಣಿಕ ಸೇವೆ ಮಾಡಬೇಕೆನ್ನುವ ಉತ್ಸಾಹ ಹೆಚ್ಚಿಸಿದ್ದು ಈ ಸಾಧನೆಗೆ ಕಾರಣಿಕರ್ತರಾದ ಬೋಧಕ ಬೋಧಕೇತರ ಹಾಗೂ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ತಿಳಿಸಿದರು. ಸಂಸ್ಥೆ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜ್ ಮಾತನಾಡಿ ಕಲ್ಪತರು ಎಂಜಿನಿಯರಿಂಗ್ ಕಾಲೇಜಿನ ಎರಡು ವಿಭಾಗಗಳ ಸೌಲಭ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಎನ್ಬಿಎ ಮಾನ್ಯತೆ ನೀಡಿದೆ. ಎನ್.ಬಿ.ಎ ತಂಡ ಭೇಟಿ ನೀಡಿದ ಸಮಯದಲ್ಲಿ ವಿವಿಗಳಲ್ಲಿ ಇರುವ ಎಲ್ಲ ಸೌಕರ್ಯಗಳಿದ್ದರೂ ಇನ್ನೂ ವಿವಿಯಾಗಿ ಏಕೆ ಪರಿವರ್ತಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಯೂನಿವರ್ಸಿಟಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು. ಸಂಸ್ಥೆ ಕಾರ್ಯದರ್ಶಿ ಎಂ.ಆರ್. ಸಂಗಮೇಶ್ ಮಾತನಾಡಿ ನಮ್ಮ ಕಲ್ಪತರು ವಿದ್ಯಾಸಂಸ್ಥೆ ಬೃಹದಾಕಾರವಾಗಿ ಬೆಳೆಯಲು ತಿಪಟೂರು ಸೇರಿದಂತೆ ಕೊಬ್ಬರಿ ವರ್ತಕರು, ವ್ಯಾಪಾರಿಗಳು, ರೈತರ ಸಹಕಾರವೇ ಕಾರಣ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಸಂಸ್ಥೆಯ ಆಶಯದಂತೆ ನಾವು ಕೆಲಸ ಮಾಡುತ್ತಿದ್ದೇವೆ ಎಂದರು. ಸಂಸ್ಥೆ ಕಾರ್ಯದರ್ಶಿ ಸುಧಾಕರ್ ಮಾತನಾಡಿ ನಮ್ಮಲ್ಲಿ ಸುಮಾರು 1800 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು, ಕ್ರೀಡೆ ಸೇರಿದಂತೆ ಎಲ್ಲಾ ವಿಭಾಗಗಳಿಗೆ ಆಧ್ಯತೆ ನೀಡಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯ ಸಂಸ್ಥೆ ಉಪಾಧ್ಯಕ್ಷರುಗಳಾದ ಟಿ.ಎಸ್ ಬಸವರಾಜು, ಜಿ.ಪಿ.ದೀಪಕ್, ಬಿ.ಎಸ್ ಉಮೇಶ್, ಕಾರ್ಯದರ್ಶಿಗಳಾದ ಟಿ.ಯು. ಜಗದೀಶ್ ಮೂರ್ತಿ, ಜಿ.ಎಸ್ ಉಮಾಶಂಕರ್, ಪ್ರಾಚಾರ್ಯರಾದ ಡಾ.ಜಿ.ಡಿ ಗುರುಮೂರ್ತಿ, ಕಂಪ್ಯೂಟರ್ಸೈನ್ಸ್ ವಿಭಾಗದ ಮುಖ್ಯಸ್ಥೆ ಸಿ. ಮೈತ್ರಿ, ರಾಜಶೇಖರ್ ಆರಾಧ್ಯ ಮತ್ತಿತರರಿದ್ದರು.