ಭಾರತದ ಸ್ವಾತಂತ್ರ್ಯದ ನಂತರ ವಿದ್ಯಾರ್ಥಿಗಳಿಗೆ ಸೈನಿಕ ತರಬೇತಿ ನೀಡುವ ಉದ್ದೇಶದಿಂದ ಎನ್ಸಿಸಿ ಸ್ಥಾಪಿಸಲಾಯಿತು. ಯುವಕರಲ್ಲಿ ಶಿಸ್ತು, ನಾಯಕತ್ವ ಮತ್ತು ದೇಶಾಭಿಮಾನ ಮೂಡಿಸುವ ಕಾರ್ಯ ಮಾಡಿತು.
ಧಾರವಾಡ:
ಎನ್ಸಿಸಿ ತರಬೇತಿಯಿಂದ ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ ಬಲ, ಏಕತೆ, ಶಿಸ್ತು ಹಾಗೂ ಸೃಜನಶೀಲತೆ ಹೆಚ್ಚಿಸುತ್ತದೆ ಎಂದು ಕಮಾಂಡಿಂಗ್ ಅಧಿಕಾರಿ ಕರ್ನಲ್ ಅನುಪ್ ರಾಲೆಗಾಂವ್ಕರ್ ಹೇಳಿದರು.ಕರ್ನಾಟಕ ಕಾಲೇಜಿನ 24 ಎನ್ಸಿಸಿ ಬಟಾಲಿಯನ್ ಕಾಲೇಜಿನ ಬಿಬಿಎ ಸಭಾಂಗಣದಲ್ಲಿ ಎನ್ಸಿಸಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಒತ್ತಡ ನಿರ್ವಹಣೆ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು, ಭಾರತದ ಸ್ವಾತಂತ್ರ್ಯದ ನಂತರ ವಿದ್ಯಾರ್ಥಿಗಳಿಗೆ ಸೈನಿಕ ತರಬೇತಿ ನೀಡುವ ಉದ್ದೇಶದಿಂದ ಎನ್ಸಿಸಿ ಸ್ಥಾಪಿಸಲಾಯಿತು. ಯುವಕರಲ್ಲಿ ಶಿಸ್ತು, ನಾಯಕತ್ವ ಮತ್ತು ದೇಶಾಭಿಮಾನ ಮೂಡಿಸುವ ಕಾರ್ಯ ಮಾಡಿತು ಎಂದರು.
1962ರ ಭಾರತ ಮತ್ತು ಚೀನಾ ಯುದ್ಧದ ಸಂದರ್ಭದಲ್ಲಿ ಎನ್ಸಿಸಿ ಕೆಡೆಟ್ಗಳು ಟ್ರಾಫಿಕ್ ನಿಯಂತ್ರಣ, ಸರಕು ಸಾಗಣೆ ಮತ್ತು ಸಂಪರ್ಕ ಹಾಗೂ ಸಂವಹನ ಕಾರ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿತು. 1965 ಮತ್ತು 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಎನ್ಸಿಸಿ ಕೆಡೆಟ್ ಗಳು ವೈದ್ಯಕೀಯ ಸಹಾಯ, ಜನರ ಸ್ಥಳಾಂತರ ಹಾಗೂ ಕಚೇರಿ ಮತ್ತು ಆಡಳಿತ ಸಹಾಯ ಇತ್ಯಾದಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದರು. ಯುವಜನರಲ್ಲಿ ನಾಯಕತ್ವ, ಶಿಸ್ತು, ಸಹೋದರತ್ವ, ಸಾಹಸ ಮನೋಭಾವ ಹಾಗೂ ನಿಸ್ವಾರ್ಥ ಸೇವೆಯ ಆದರ್ಶ ಬೆಳೆಸುವುದು ಎನ್ಸಿಸಿ ಪ್ರಮುಖ ಉದ್ದೇಶ ಎಂದು ತಿಳಿಸಿದರು.ಕರ್ನಾಟಕ ಕಲಾ ಕಾಲೇಜು ಪ್ರಾಚಾರ್ಯ ಡಾ. ಐ.ಸಿ. ಮುಳಗುಂದ ಮಾತನಾಡಿ, ಬದಲಾಗುತ್ತಿರುವ ಜೀವನಶೈಲಿ ಒತ್ತಡದ ಮೇಲೆ ಅತಿಹೆಚ್ಚು ಪರಿಣಾಮ ಬೀರುತ್ತದೆ. ಇಡೀ ಜಗತ್ತಿನಲ್ಲಿ ಶೇ.41.62 ಜನರು ಒತ್ತಡದಿಂದ ಬಳಲುತ್ತಿದ್ದಾರೆ. ಒತ್ತಡವು ಮಧುಮೇಹ ಮತ್ತು ಆತ್ಮಹತ್ಯೆ ಸಮಸ್ಯೆ ಉಂಟು ಮಾಡುತ್ತದೆ. ಒತ್ತಡ ನಿರ್ವಹಣೆಯಲ್ಲಿ ಎನ್ಸಿಸಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಪ್ರಾಚಾರ್ಯ ಡಾ. ಎಂ.ಎಸ್. ಸಾಲುಂಕೆ ಅಧ್ಯಕ್ಷತೆ ವಹಿಸಿದ್ದರು. ಡಿಮ್ಹಾನ್ಸ್ ನೋಡಲ್ ಅಧಿಕಾರಿ ಡಾ. ರಂಗನಾಥ ಕುಲಕರ್ಣಿ, ಮನೋವೈದ್ಯ ಡಾ. ರಾಘವೇಂದ್ರ ಪಾಟೀಲ, ನಾಮದೇವ ಕೊಡಾಟೆ, ಪ್ರೊ. ರಾಜೇಶ್ ಮತ್ತು ಸಮೀರ ಚಬ್ಬಿ ಇದ್ದರು.