ಸಾರಾಂಶ
ಕಿಕ್ಕೇರಿ:
ಶಿಸ್ತು, ಸಂಯಮ, ಸಮಯ ಪ್ರಜ್ಞೆ ಎಲ್ಲವನ್ನು ವಿದ್ಯಾರ್ಥಿ ದಿಸೆಯಲ್ಲಿ ಕಲಿಸುವ ಎನ್ಸಿಸಿ ವಿದ್ಯಾರ್ಥಿಗಳಲ್ಲಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಲಿದೆ ಎಂದು ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಏರ್ಫೋರ್ಸ್ ಎನ್ಸಿಸಿ ತರಬೇತಿಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಬಾಲ್ಯವಿವಾಹದ ಅರಿವು ಮೂಡಿಸಬೇಕಿದೆ. ಉನ್ನತ ವ್ಯಾಸಂಗ, ಉದ್ಯೋಗಕ್ಕೆ ಸುಲಭವಾಗಿ ಸೇರಲು ಎನ್ಸಿಸಿ ಉಪಯೋಗವಾಗಿದೆ ಎಂದರು.
ವಿಶೇಷ ಕೃಪಾಂಕ ಈ ವಿದ್ಯಾರ್ಥಿಗಳಿಗೆ ಇದ್ದು, ಪೆರೇಡ್ಗಳಲ್ಲಿ ವಿಶೇಷ ತರಬೇತಿ ಪಡೆಯುವ ಮಕ್ಕಳಿಗೆ ನೀಡುವ ಅರ್ಹತಾ ಪತ್ರ ಉಪಯೋಗಕರವಾಗಲಿದೆ. ವಿದ್ಯಾರ್ಥಿ ದಿಸೆಯಲ್ಲಿ ರಾಷ್ಟ್ರಾಭಿಮಾನ, ಸ್ವಾಭಿಮಾನ ಮೂಡಲಿದ್ದು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದರು.ಸಾಜೆಂಟ್ ಸುಧಾನ್ಸು ಗೋಯಲ್ ಹಾಗೂ ಸಾಜೆಂಟ್ ರಂಜನ್ ಅವರು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ಹಾಗೂ ಸಂದರ್ಶನ ಮಾಡಿ ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಈ ವೇಳೆ ಎನ್ಸಿಸಿ ಅಧಿಕಾರಿ ಎಸ್.ಎಂ.ಬಸವರಾಜು, ಶಿಕ್ಷಕ ಬಿ.ಎನ್.ಪರಶಿವಮೂರ್ತಿ, ಮಹಮ್ಮದ್ ರಿಜ್ವಿ, ನಂದಿನಿ, ರಾಗಿಣಿ ಚಂದ್ರೇಗೌಡ ಇದ್ದರು.
ಕಾಳಿಕಾದೇವಿಯ ಜಯಂತ್ಯುತ್ಸವಮೇಲುಕೋಟೆ: ಆಷಾಢ ಮಾಸದ ಪ್ರಯುಕ್ತ ಹೊಸಬಾವಿ ಕಾಳಿಕದೇವಿಯ ಜಯಂತ್ಯುತ್ಸವ ವೈಭವದಿಂದ ಜರುಗಿತು. ಪ್ರತಿವರ್ಷದಂತೆ ಈ ಬಾರಿಯೂ ಪಂಚಕಲ್ಯಾಣಿಯಲ್ಲಿ ಪೂಜಾ ವಿಧಿವಿಧಾನ ನೆರವೇರಿಸಿ, ಪಂಚನಾದಸ್ವರ ಡೊಳ್ಳು ಕುಣಿತದೊಂದಿಗೆ ದೇವಿ ಕರಗವನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಕರೆತಂದು ದೇಗುಲದಲ್ಲಿ ವಿಶೇಷ ಅಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಿ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಭಕ್ತರು ವಿವಿಧ ಬಗೆಯ ಪುಷ್ಪಗಳಿಂದ ಕಂಗೊಳಿಸುತ್ತಿದ್ದ ದೇವಿ ದರ್ಶನ ಪಡೆದರು. ಭಕ್ತರಿಗೆ ಸಂಜೆವರೆಗೂ ಅನ್ನದಾನ ವ್ಯವಸ್ಥೆ ನಡೆಯಿತು. ಕಾಲ ಕಾಲಕ್ಕೆ ಮಳೆ ಬೆಳೆಯಾಗಿ ಗ್ರಾಮದಲ್ಲಿ ಶಾಂತಿ- ನೆಮ್ಮದಿ ನೆಲೆಸಲಿ, ಲೋಕ ಕಲ್ಯಾಣವಾಗಲಿ ಎಂದು ಪ್ರಾರ್ಥಿಸಿ ದೇವರ ಗುಡ್ಡಪ್ಪ ಬೈರಶೆಟ್ಟಿ, ಸಹಾಯಕ ಗುಡ್ಡಪ್ಪ ಶ್ರೀಕಾಂತ್ ನೇತೃತ್ವದಲ್ಲಿ ದೇವಿ ಹೆಸರಲ್ಲಿ ಹೋಮ- ಹವನ ನೆರವೇರಿಸಲಾಯಿತು. ನೂರಾರು ಭಕ್ತರು ಭಾಗವಹಿಸಿ ದೇವಿ ದರ್ಶನ ಪಡೆದರು.