ರಾಜ್ಯಾದ್ಯಂತ ಜೈಲುಗಳಲ್ಲಿರುವ ಹಲವು ಕೈದಿಗಳು ಗಾಂಜಾ ವ್ಯಸನಿಗಳಾಗಿರುವುದು ಗಮನಕ್ಕೆ ಬಂದಿದೆ. ಜತೆಗೆ ಮಾದಕ ವಸ್ತುಗಳ ಮಾರಾಟ ಜಾಲವು ಕಂಡು ಬಂದಿದೆ. ಹಾಗಾಗಿ ಎಲ್ಲ ಜೈಲುಗಳಲ್ಲಿರುವ ಕೈದಿಗಳಿಗೆ ಎನ್ಡಿಪಿಎಸ್ ಪರೀಕ್ಷೆ ಮಾಡಲಾಗುತ್ತಿದೆ.
ಹುಬ್ಬಳ್ಳಿ:
ಬೆಂಗಳೂರು ಹಾಗೂ ಬೆಳಗಾವಿ ಜೈಲುಗಳಲ್ಲಿ ಡ್ರಗ್ಸ್, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಬಳಕೆ, ಸಾಗಾಟವಾಗುತ್ತಿರುವ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿನ ವಿಶ್ವೇಶ್ವರ ನಗರದಲ್ಲಿರುವ ಉಪಕಾರಾಗೃಹಕ್ಕೆ ಡಿಜಿಪಿ ಅಲೋಕಕುಮಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.ಈ ವೇಳೆ ಹುಬ್ಬಳ್ಳಿ ಸಬ್ಜೈಲಿನಲ್ಲಿನ ಕಟ್ಟಡ, ಗಾರ್ಡನ್ ಏರಿಯಾ ಸೇರಿದಂತೆ ಮತ್ತಿತರೆಡೆ ಪರಿಶೀಲನೆ ನಡೆಸಿದರು. ಜೈಲು ಸಿಬ್ಬಂದಿಯ ಜತೆಗೆ ಚರ್ಚಿಸಿ ಜೈಲಿನ ಸಮಗ್ರ ಮಾಹಿತಿ ಪಡೆದರು. ಅಲ್ಲದೇ, ಅಕ್ರಮ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು. ಯುವ ಕೈದಿ, ಮೊದಲ ಬಾರಿಗೆ ಬಂದ ಕೈದಿಗಳನ್ನು ಪ್ರತ್ಯೇಕವಾಗಿರಿಸಬೇಕು. ಹಳೆಯ ಕೈದಿಗಳೊಂದಿಗೆ ಸೇರಿಸಬಾರದು ಎಂದು ಸೂಚಿಸಿದ ಅವರು, ಕೈದಿಗಳ ಸೆಲ್, ಜೈಲಿನಲ್ಲಿರುವ ವ್ಯವಸ್ಥೆ ಕುರಿತು ಕೈದಿಗಳೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿಪಿ, ರಾಜ್ಯಾದ್ಯಂತ ಜೈಲುಗಳಲ್ಲಿರುವ ಹಲವು ಕೈದಿಗಳು ಗಾಂಜಾ ವ್ಯಸನಿಗಳಾಗಿರುವುದು ಗಮನಕ್ಕೆ ಬಂದಿದೆ. ಜತೆಗೆ ಮಾದಕ ವಸ್ತುಗಳ ಮಾರಾಟ ಜಾಲವು ಕಂಡು ಬಂದಿದೆ. ಹಾಗಾಗಿ ಎಲ್ಲ ಜೈಲುಗಳಲ್ಲಿರುವ ಕೈದಿಗಳಿಗೆ ಎನ್ಡಿಪಿಎಸ್ ಪರೀಕ್ಷೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗುವುದು. ಜೈಲಿನಲ್ಲಿ ಗಾಂಜಾ ಸೇವನೆ ಹಾಗೂ ಮೊಬೈಲ್ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಕೈದಿಗಳು ಶಿಸ್ತು ಹಾಗೂ ಜೈಲಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜೈಲಿನಿಂದ ಹೊರ ಹೋಗುವಾಗ ಉತ್ತಮ ನಾಗರಿಕರಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದರು.ಕಾರಾಗೃಹ ಪರಿಶೀಲನೆ ವೇಳೆ ಯಾವುದೇ ವಸ್ತುಗಳು ದೊರೆಕಿಲ್ಲ. ಈ ಮೊದಲು ಮೊಬೈಲ್ ಬಳಕೆ ನಡೆಯುತ್ತಿತ್ತು. ಈಗಾಗಲೇ ಬಹಳಷ್ಟು ಕಡೆ ಕಡಿವಾಣ ಹಾಕಿದ್ದು, ಮುಂದೆಯೂ ಸೂಕ್ತ ಕ್ರಮ ಕೈಗೊಳ್ಳಲು ಜೈಲರ್ಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಕಾರಾಗೃಹದಲ್ಲಿ ಕೊಲೆ, ಅತ್ಯಾಚಾರ, ದರೋಡೆ, ಕಳವು ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾದ 132 ಕೈದಿಗಳಿದ್ದಾರೆ. ಅವರಿಗೆ ಯೋಗ, ಧ್ಯಾನ ಕಲಿಸಲಾಗುತ್ತಿದೆ. ಅವರು ಬಿಡುಗಡೆಯಾದ ಬಳಿಕ ಅಪರಾಧ ಕೃತ್ಯದಲ್ಲಿ ತೊಡಗದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.ಕೈದಿಗಳಿಗೆ ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ ಸಂಬಂಧಿಸಿದ ಕೌಶಲಾಧಾರಿತ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ಅವರ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ವೇಳೆ ಎಸಿಪಿ ಶಿವಾನಂದ ಚಲವಾದಿ ಸೇರಿದಂತೆ ಹಲವರಿದ್ದರು.