ಸಾರಾಂಶ
ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕೇಂದ್ರದಿಂದ ಬರುವ ಎನ್ಡಿಆರ್ಎಫ್ ಹಣವನ್ನೇ ಸರ್ಕಾರ ಗ್ಯಾರಂಟಿಗೆ ಬಳಸಿಕೊಳ್ಳುತ್ತಿದ್ದು ಅಭಿವೃದ್ಧಿ ಮರೀಚಿಕೆಯಾಗಿದೆ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕೇಂದ್ರದಿಂದ ಬರುವ ಎನ್ಡಿಆರ್ಎಫ್ ಹಣವನ್ನೇ ಸರ್ಕಾರ ಗ್ಯಾರಂಟಿಗೆ ಬಳಸಿಕೊಳ್ಳುತ್ತಿದ್ದು ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.ಕಾಗವಾಡ ತಾಲೂಕಿನ ಜುಗೂಳ ಗ್ರಾಮಕ್ಕೆ ಬೆಳೆ ಹಾನಿ ವೀಕ್ಷಣೆಗೆ ಹೋಗುತ್ತಿರುವ ಮಾರ್ಗ ಮಧ್ಯೆ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಗ್ಯಾರಂಟಿಗೆ ಎನ್ಡಿಆರ್ಎಫ್ ಹಣ ಬಳಸಿಕೊಳ್ಳಲ್ಲ. ಆದ್ರೆ ಇವರಿಗೆ ಮರ್ಯಾದೇನೇ ಇಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ನವೆಂಬರ್ ವೇಳೆಗೆ ಕಾಂಗ್ರೆಸ್ ಪಕ್ಷದಲ್ಲಿ ಕ್ರಾಂತಿ ಉಂಟಾಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಶೋಕ, ನವೆಂಬರ್ವರೆಗೂ ಕಾಯಿರಿ. ಈಗಾಗಲೇ ಕಾಂಗ್ರೆಸ್ನವರೆ ಹೇಳಿದ್ದಕ್ಕೆ ರಾಜಣ್ಣಗೆ ಗೇಟ್ ಪಾಸ್ ಕೊಟ್ಟಿದ್ದಾರೆ. ಶಿವರಾಮೇಗೌಡ, ರಂಗನಾಥ ಡಿಕೆಶಿ ಮುಖ್ಯಮಂತ್ರಿ ಆಗ್ತಾರೆ ಅಂತಾ ಹೇಳಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸದ್ಯ ಔಟ್ಗೋಯಿಂಗ್ ಮುಖ್ಯಮಂತ್ರಿ. ಡಿಕೆಶಿ ಪರಮೇಶ್ವರ, ಜಾರಕಿಹೋಳಿ ಯಾರೆ ಮುಖ್ಯಮಂತ್ರಿ ಆಗಲಿ ನಮಗೇನು ಒಟ್ಟಿನಲ್ಲಿ ಸಿದ್ದರಾಮಯ್ಯ ಹೋಗುತ್ತಾರೆ. ಸರ್ಕಾರನೆ ಬಿದ್ದು ಹೋಗಬಹುದು ಎಂದರು.ಡಿಕೆಶಿ ಬಿಜೆಪಿ ಬರ್ತಾರಾ ಎಂಬ ಪ್ರಶ್ನೆಗೆ ಬಿಜೆಪಿಯಲ್ಲಿ ಯಾವುದು ಖಾಲಿ ಇಲ್ಲ ಎಂದರು.ಈ ವೇಳೆ ಸಿ.ಟಿ.ರವಿ, ಎನ್.ರವಿಕುಮಾರ, ನಿಪ್ಪಾಣಿ ಶಾಸಕಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಲೋಕಸಭೆ ಸದಸ್ಯ ರಮೇಶ ಜಿಗಜಿಣಗಿ,ಶಾಸಕರಾದ ಡಿ.ಎಂ.ಐಹೊಳೆ, ಸಿದ್ದು ಸವದಿ,ಸಂಜಯ ಪಾಟೀಲ ಸೇರಿದಂತೆ ಬಿಜೆಪಿ ಚಿಕ್ಕೋಡಿ ಜಿಲ್ಲೆಯ ಪದಾಧಿಕಾರಿಗಳು ಇದ್ದರು.