ಸಾರಾಂಶ
ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ್ದರಂತೆ ಎಂಬ ಮಾತಿನಂತೆ 6 ವರ್ಷದ ಬಾಲಕಿ ಬಲಿಯಾದ ನಂತರ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದ್ದು, ತಾಲೂಕಿನಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಿದೆ.
ಕನ್ನಡಪ್ರಭ ವಾರ್ತೆ ತಿಪಟೂರು
ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ್ದರಂತೆ ಎಂಬ ಮಾತಿನಂತೆ 6 ವರ್ಷದ ಬಾಲಕಿ ಬಲಿಯಾದ ನಂತರ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದ್ದು, ತಾಲೂಕಿನಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಿದೆ.ಸೋಮವಾರ ಇಲ್ಲಿನ ನಗರಸಭೆಯ ಶಾಸಕರ ಕಚೇರಿಯಲ್ಲಿ ತಾಲೂಕು ಆಡಳಿತ, ನಗರಸಭೆ, ಪಶು ಸಂಗೋಪನಾ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಕೆ. ಷಡಕ್ಷರಿ ತಾಲೂಕು ಹಾಗೂ ನಗರದ ಪ್ರದೇಶದಲ್ಲಿ ಬೀದಿನಾಯಿ ದಾಳಿಯಂತಹ ಪ್ರಕರಣಗಳು ಮರುಕಳಿಸುತ್ತಿದ್ದು ಈ ಬೀದಿ ನಾಯಿಗಳ ತಡೆಗೆ ತಾಲೂಕು ಆಡಳಿತ ಅಗತ್ಯ ಕ್ರಮಕೈಗೊಂಡು ಕಡಿವಾಣ ಹಾಕಬೇಕು. ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲೆಂದು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ನಗರದಲ್ಲಿ ಈ ಹಿಂದಿನ ಸರ್ವೆ ಪ್ರಕಾರ 1500ಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಗ್ರಾಮಾಂತರ ಪ್ರದೇಶದಲ್ಲಿ 6ಸಾವಿರಕ್ಕೂ ಹೆಚ್ಚಿರುವ ಮಾಹಿತಿ ಇದೆ. ಮತ್ತೆ ಪ್ರಸ್ತುತ ವರ್ಷ ಸರ್ವೆ ಮಾಡಿಸಲಾಗುವುದು. ಒಂದು ಬೀದಿ ನಾಯಿ ಹಿಡಿಯಲು 200ರು ತಗುಲಲಿದ್ದು ಅದಕ್ಕೆ ಚಿಕಿತ್ಸೆಗೆ 1400ರೂ ಒಟ್ಟು ಒಂದು ನಾಯಿಗೆ 1600ರೂ ಖರ್ಚಾಗಲಿದೆ. ನಗರದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ತಾಲೂಕಿನಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿಗಳು ಇದರ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಚರ್ಚಿಸಿ ಹೆಚ್ಚಿನ ಅನುದಾನ ತರಲಾಗುವುದು. ಮುಂದಿನ ದಿನಗಳಲ್ಲಿ ಅಯ್ಯನಬಾವಿಯಲ್ಲಿ ನಡೆದ ಬೀದಿನಾಯಿ ದಾಳಿ ನಡೆಯದಂತೆ ಕ್ರಮವಹಿಸಬೇಕು. ಸಾರ್ವಜನಿಕರ ಮಾಹಿತಿಗಾಗಿ ಕರಪತ್ರದೊಂದಿಗೆ ಪ್ರತಿ ಗ್ರಾಮ ಪಂಚಾಯಿತಿಗೆ ಹಾಗೂ ನಗರದಲ್ಲಿ ನಗರಸಭೆ ಕಸ ವಿಲೇವಾರಿ ವಾಹನಗಳಲ್ಲಿ ಜನರಿಗೆ ಮಾಹಿತಿ ನೀಡಲಾಗುವುದು ಎಂದರು. ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ ನಗರದಲ್ಲಿ ಬೀದಿ ನಾಯಿ ಹಾವಳಿಗೆ ಬ್ರೇಕ್ ಹಾಕ ಲು ಟೆಂಡರ್ ಕರೆಯಲಾಗಿದ್ದು ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನೀಡುವುದರಿಂದ ನಾಯಿಗಳ ಸಂತತಿ ಕಡಿಮೆಯಾಗಲಿದೆ. ಅತ್ಯಂತ ಜವಾಬ್ದಾರಿಯಿಂದ ಈ ಕೆಲಸ ನಿರ್ವಹಿಸಲಾಗುವುದು ಎಂದರು. ಸಭೆಯಲ್ಲಿ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಪಶು ಇಲಾಖೆಯ ಸಹಾಯಕ ನಿರ್ದೆಶಕ ಡಾ. ನಂದೀಶ್ ಇದ್ದರು.ಕೋಟ್.. ,,,...ತಾಲೂಕಿನ ಅಯ್ಯನಬಾವಿಯಲ್ಲಿ ಆರು ವರ್ಷದ ಬಾಲಕಿ ಬೀದಿ ನಾಯಿ ದಾಳಿಗೆ ಬಲಿಯಾಗಿದ್ದು ತುಂಬಾ ನೋವುಂಟು ಮಾಡಿದೆ. ಮತ್ತೆಂದೂ ಇಂತಹ ಘಟನೆ ನಡೆಯಬಾರದೆಂಬ ಉದ್ದೇಶದಿಂದ ತುರ್ತು ಸಭೆ ಕರೆದು ಅಧಿಕಾರಿಗಳೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಂಡಿದ್ದೇನೆ. ಮೃತ ಬಾಲಕಿ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡುವುದು ನನ್ನ ಜವಾಬ್ದಾರಿಯಾಗಿದೆ. - ಕೆ.ಷಡಕ್ಷರಿ, ಶಾಸಕರು, ತಿಪಟೂರು.