ಸಾರಾಂಶ
-ವಿಶ್ವ ಎಚ್ಐವಿ ದಿನ ಕಾರ್ಯಕ್ರಮದ ಪ್ರಯುಕ್ತ ಜಾಗೃತಿ ಜಾಥಾಕ್ಕೆ ನ್ಯಾ.ಮರಿಯಪ್ಪ ಚಾಲನೆ
-----ಕನ್ನಡಪ್ರಭ ವಾರ್ತೆ ಯಾದಗಿರಿ
ಎಚ್ಐವಿ ಸೋಂಕಿಗೆ ಹೆಚ್ರಚಾಗಿ ಯುವಕರು ಬಲಿಯಾಗುತ್ತಿದ್ದಾರೆ. ಮೊಬೈಲ್ ಹಾವಳಿ ಯುವಕರಲ್ಲಿ ಅತಿಯಾಗಿದ್ದು, ಅವರು ದಾರಿ ತಪ್ಪಲು ಕಾರಣವಾಗುತ್ತಿದೆ. ಇದರಿಂದ ಹೆಚ್ಚು ಜಾಗೃತರಾಗಬೇಕಿದೆ. ಈ ಸೋಂಕಿನಿಂದ ದೂರವಿರಲು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಹೇಳಿದರು.ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಜಿಲ್ಲಾ ಎಚ್ಐವಿ ನಿಯಂತ್ರಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ
ಎಚ್ಐವಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ್ ಬಿರಾದಾರ್ ಮಾತನಾಡಿ, ಎಚ್ಐವಿ ಚಿಕಿತ್ಸೆ ಸಾಧ್ಯ. ಆದರೆ, ಸಂಪೂರ್ಣ ಗುಣಮುಖರಾಗಲು ಅಸಾಧ್ಯ. ಈ ಕಾರಣದಿಂದ ರೋಗಕ್ಕೆ ತುತ್ತಾಗದಂತೆ ಎಚ್ಚರ ವಹಿಸಬೇಕು. ಎಚ್ಐವಿ ಕುರಿತು ಅರಿವು ಹೊಂದಬೇಕು. ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಎಚ್ಐವಿ ನಿಯಂತ್ರಣಾಧಿಕಾರಿ ಸಂಜೀವ್ ಕುಮಾರ ಸಿಂಗ್ ರಾಯಚೂರಕರ್ ಮಾತನಾಡಿ, ಯುವಕರಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದೆ. ಸಂಪೂರ್ಣ ಗುಣಮುಖವಾಗಲು ಲಸಿಕೆ ಲಭ್ಯವಾಗಿಲ್ಲ. ಆದರೆ, ಇದನ್ನು ತಡೆಗಟ್ಟಲು ವಿಧಾನ ಸುಲಭ. ಅಸುರಕ್ಷಿತ ಲೈಂಗಿಕ ಪ್ರಕ್ರಿಯೆಯಿಂದ ಈ ರೋಗ ಬರುತ್ತದೆ. ನಿರ್ಲಕ್ಷ್ಯದ ಸೂಜಿಗಳಿಂದ ರೋಗ ಬರುತ್ತದೆ. ತಾಯಿಯಿಂದ ಮಗುವಿಗೆ ಬರುತ್ತದೆ. ಇದನ್ನು ತಡೆಗಟ್ಟ ಬಹುದು.ಅಸುರಕ್ಷಿತ ಲೈಂಗಿಕ ಸಂಬಂಧದಿಂದ ಗ್ರಾಮೀಣ ಭಾಗದಲ್ಲಿಯೂ ಎಚ್ಐವಿ ಹೆಚ್ಚಾಗುತ್ತಿದೆ. ಲೈಂಗಿಕ ಕ್ರಿಯೆಗಳು ಮದುವೆ ಮುಂಚೆ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.ಕಾರ್ಯಕ್ರಮಕ್ಕೂ ಮುನ್ನ ನಗರದ ಗಾಂಧಿ ವೃತ್ತದಲ್ಲಿ ಎಚ್ಐವಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಸಾಜೀದ್, ತಾಲೂಕು ಆರೋಗ್ಯಾಧಿಕಾರಿ ಡಾ. ಹನುಮಂತ ರೆಡ್ಡಿ, ಐಎಂಎ ಜಿಲ್ಲಾಧ್ಯಕ್ಷ ಡಾ. ಚಂದ್ರಕಾಂತ ಪೂಜಾರಿ, ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ನಿರ್ಮಲಾ ಸಿನ್ನೂರ್, ಡಾ. ಶರಣಬಸಪ್ಪ ಎಲ್ಹೇರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ , ತುಳಸಿರಾಮ, ಅಮರೇಶ ಬೋತಿ ಇದ್ದರು.ಕಾರ್ಯಕ್ರಮದಲ್ಲಿ ಹೆಚ್.ಐ.ವಿ ಸಮುದಾಯಕ್ಕೆ ಸಹಾಯ, ಸಹಕಾರ ಮತ್ತು ಎಚ್ಐವಿ ಪರೀಕ್ಷೆ ಮಾಡುವಲ್ಲಿ ಗುರಿ ಸಾಧನೆ ಮಾಡಿದ್ದಕ್ಕಾಗಿ ಸಂಬಂಧಿಸಿದ ಸಿಬ್ಬಂದಿಗೆ ಸನ್ಮಾನ ಮಾಡಲಾಯಿತು.
----ಫೋಟೊ: ಯಾದಗಿರಿ ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದ ಅಂಗವಾಗಿ ಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮರಿಯಪ್ಪ ಅವರು ಚಾಲನೆ ನೀಡಿದರು.
4ವೈಡಿಆರ್10