ಸಾರಾಂಶ
ತರು ಯಜ್ಞ ಎಂಬ ವಿಶೇ಼ಷ ಕಾರ್ಯಕ್ರಮಕ್ಕೆ ಕೊಡಗಿನ ವಿವಿಧ ತಾಲೂಕುಗಳಲ್ಲಿ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ) ಕೊಡಗು, ಜಿಲ್ಲಾ ಘಟಕದಿಂದ ತನ್ನ 25 ವರ್ಷಗಳ ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ ತರು-ಯಜ್ಞ ಎಂಬ ವಿಶೇಷ ಕಾರ್ಯಕ್ರಮಕ್ಕೆ ಕೊಡಗಿನ ವಿವಿಧ ತಾಲೂಕುಗಳಲ್ಲಿ ಚಾಲನೆ ನೀಡಲಾಯಿತು.ಮಕ್ಕಳಲ್ಲಿ ಹಾಗೂ ಅವರ ಪೋಷಕರಲ್ಲಿ ಮದ್ದಿನ ಗಿಡಗಳ ಬಗ್ಗೆ ಅರಿವು ಮೂಡಿಸುವ ಯೋಜನೆಯ ಅಂಗವಾಗಿ ಹಾಗೂ ಪ್ರಕೃತಿಯನ್ನು ವಿಶೇಷವಾಗಿ ಸಲಹಿ, ಬೆಳೆಸುವ ನಿಟ್ಟಿನಿಂದ ಈ ಕಾರ್ಯಕ್ರಮವನ್ನು ಕೊಡಗಿನಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಡಿಯಲ್ಲಿ ಒಂದು ವರ್ಷದಲ್ಲಿ, ಕೊಡಗಿನ ಶಾಲಾ ಕಾಲೇಜುಗಳಲ್ಲಿ ಕನಿಷ್ಠ 2,500 ಮದ್ದಿನ ಗಿಡಗಳನ್ನು ಮಕ್ಕಳ ಮೂಲಕ ನೆಡೆಸುವ ಯೋಜನೆ ಇದೆ.
ಮಕ್ಕಳಿಗೆ ಈ ಬಗ್ಗೆ ಸ್ಫೂರ್ತಿ ತುಂಬುವುದಕ್ಕಾಗಿ ಒಂದು ವರ್ಷದ ನಂತರ ಅತ್ಯುನ್ನತವಾಗಿ ಬೆಳೆದಂತಹ ಮದ್ದಿನ ಗಿಡಗಳನ್ನು ಪೋಷಿಸುತ್ತಿರುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು.ಮಡಿಕೇರಿಯ ಕೊಡಗು ವಿದ್ಯಾಲಯದ ಎನ್ಸಿಸಿ ವಿದ್ಯಾರ್ಥಿಗಳು, ನಾಪೋಕ್ಲುವಿನ ಪಾರಾಣೆ ಪ್ರೌಢಶಾಲೆಯ ವಿದ್ಯಾರ್ಥಿಗಳು, ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಹಾಗೂ ಕುಶಾಲನಗರದಲ್ಲಿ ಪೋಷಕರು ಈ ವಿಶೇಷ ಯೋಜನೆಗೆ ಚಾಲನೆ ನೀಡಿದರು. ಇವರೊಂದಿಗೆ ಕೊಡಗು ನೀಮಾ ಸದಸ್ಯ ವೈದ್ಯರು ಗಿಡಗಳನ್ನು ವಿತರಿಸಿ ಅವುಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.