ನೀಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಕೇಂದ್ರ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈ ಹಿಂದೆಯೂ ಮೂರ್ನಾಲ್ಕು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗಲೂ ಯಾರ ಮೇಲೂ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೇಂದ್ರ ಸರ್ಕಾರ ಚೆಲ್ಲಾಟ ಆಡಿದಂತಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ಮಂಗಳೂರು: ನೀಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಕೇಂದ್ರ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈ ಹಿಂದೆಯೂ ಮೂರ್ನಾಲ್ಕು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗಲೂ ಯಾರ ಮೇಲೂ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೇಂದ್ರ ಸರ್ಕಾರ ಚೆಲ್ಲಾಟ ಆಡಿದಂತಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಗಂಭೀರ ವಿಚಾರವಾಗಿದೆ. ಸುಮಾರು 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಕನಸು ಇದು. ಹಗಲು ರಾತ್ರಿ ಪರೀಕ್ಷೆಗೆ ತಯಾರಿ ನಡೆಸಿ, ಪರೀಕ್ಷೆ ಬರೆದರೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಭಾರಿ ಲೋಪ. ಇಡೀ ಪರೀಕ್ಷೆ ವ್ಯವಸ್ಥೆ ಕುಸಿದು ಬಿದ್ದಿದ್ದು, ಇದರ ವೈಫಲ್ಯವನ್ನು ಕೇಂದ್ರ ಹೊರಬೇಕು. ಈ ಬಗ್ಗೆ ಕೇಂದ್ರದ ಸಂಬಂಧಿತ ಸಚಿವರು, ಪ್ರಧಾನಿ ಉತ್ತರಿಸಬೇಕು ಎಂದು ರಮಾನಾಥ ರೈ ಆಗ್ರಹಿಸಿದರು.

ಈ ಕುರಿತು ಸಿಬಿಐ ತನಿಖೆ ನಡೆಸುವುದಾಗಿ ಕೇಂದ್ರ ಹೇಳಿದರೂ ಈ ವರೆಗಿನ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ, ಹಾಗಾಗಿ ಈ ತನಿಖೆ ನಂಬಿಕೆ ಕಳೆದುಕೊಡಿದೆ. ದೇಶಾದ್ಯಂತ ಹಲವು ಕೋಚಿಂಗ್‌ ಕೇಂದ್ರಗಳಿದ್ದು, ಎಲ್ಲವೂ ಐಎಎಸ್‌, ಐಪಿಎಸ್‌ ಹಾಗೂ ಮಂತ್ರಿಗಳ ನೆರಳಿನಡಿ ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಿಗೂ ಪ್ರಶ್ನೆ ಪತ್ರಿಕೆ ಸೋರಿಕೆಗೂ ಸಂಬಂಧ ಇರುವ ಸಾಧ್ಯತೆ ಇದೆ ಎಂದರು.

ಕೇಂದ್ರದಿಂದ ಜನತೆಗೆ ಮೋಸ: ಮಧ್ಯಪ್ರಾಚ್ಯ ಯುದ್ಧ ಕಾರಣ ಡೀಸೆಲ್‌, ಪೆಟ್ರೋಲ್‌ ಮಿತವ್ಯಯದ ಬಗ್ಗೆ ಪ್ರಧಾನಿಯವರು ದೇಶದ ಜನತೆಯನ್ನು ವಿನಂತಿಸಿದ್ದಾರೆ. ಇಂತದ ಪರಿಸ್ಥಿತಿ ಈ ಹಿಂದೆ ಇದ್ದಾಗ ಆಗಿನ ಪ್ರಧಾನಿ ಮನಮೋಹನ ಸಿಂಗ್‌ ಅವರೇ ಗ್ಯಾಸ್‌ ಸಬ್ಸಿಡಿ ಜಾರಿಗೆ ತಂದು ಜನತೆಗೆ ಸಹಕಾರ ನೀಡಿದ್ದರು. ಆದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು ಗ್ಯಾಸ್‌ ಸಬ್ಸಿಡಿ ತ್ಯಜಿಸುವಂತೆ ಕರೆ ನೀಡಿದ್ದರು. ಆತ್ಮನಿರ್ಭರ ಸ್ಲೋಗನ್‌ ಮೂಲಕ ಜನತೆಯ ಹಿತ ಬದಲು ಬಂಡವಾಳಶಾಹಿಗಳ ಪರ ಪ್ರಧಾನಿ ಮಾತನಾಡುತ್ತಿದ್ದಾರೆ. ಚಿನ್ನ ಖರೀದಿಸಬೇಡಿ ಎಂದು ಹೆಣ್ಮಕ್ಕಳ ಭಾವನೆಗೆ ಪ್ರಧಾನಿ ದಕ್ಕೆತರುತ್ತಿದ್ದಾರೆ. ಈ ರೀತಿ ರಾಜಕೀಯ ನಡೆಸುವ ಬದಲು ಮೋದಿ ಅಧಿಕಾರ ತ್ಯಾಗ ಮಾಡಿ ಜನತೆಗೆ ನೆಮ್ಮದಿ ನೀಡಬೇಕು ಎಂದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಶಶಿಧರ ಹೆಗ್ಡೆ, ಜಯಶೀಲ ಅಡ್ಯಂತಾಯ, ಬೇಬಿ ಕುಂದರ್‌, ಎನ್‌ಎಸ್‌ಯುಐ ಅಧ್ಯಕ್ಷ ಸುಹಾನ್‌ ಆಳ್ವ, ವಿಕಾಸ್‌ ಶೆಟ್ಟಿ, ಸುಬೋಧ್ ಆಳ್ವ, ಅಪ್ಪಿ, ಯೋಗೀಶ್‌, ಶಬೀರ್‌ ಸಿದ್ಧಕಟ್ಟೆ, ನಝೀರ್‌ ಬಜಾಲ್‌ ಮತ್ತಿತರರಿದ್ದರು.