ಕನ್ನಡಪ್ರಭ ವಾರ್ತೆ ಕಾಗವಾಡ

ಗಾಂಧೀಜಿಯವರ ತತ್ವಗಳನ್ನು ಭೂತ ಕಾಲದಿಂದ ನೆನಪಿಸಿಕೊಂಡು ಯುವಜನತೆಗೆ ಹಸ್ತಾಂತರಿಸಬೇಕಾಗಿದೆ. ಅದಕ್ಕೆ ಈ ವಿಚಾರ ಸಂಕಿರಣಗಳು ಬಹಳ ಮಹತ್ವದ ಪಾತ್ರ ವಹಿಸುತ್ತವೆ ಎಂದು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಕಾರ್ಯಕ್ರಮದ ಸಂಯೋಜಕಿ ಡಾ.ಅಬಿದಾ ಬೇಗಂ ಹೇಳಿದರು.ಕಾಗವಾಡ ಶಿವಾನಂದ ಮಹಾವಿದ್ಯಾಲಯ ಐಕ್ಯೂಎಸಿ ಪ್ರಾಯೋಜಿತ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು2 ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಜ್ಯ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಆತ್ಮಚರಿತ್ರೆಯ ಶತಮಾನೋತ್ಸವ, ಗಾಂಧಿ ಸ್ಮಾರಕ ನಿಧಿಯ75ನೇ ವಾರ್ಷಿಕೋತ್ಸವ ಮತ್ತು ಭೂದಾನ ಚಳುವಳಿಯ ಅಂಗವಾಗಿ ಇಂದಿನ ಯುವಕರಿಗೆ ಗಾಂಧೀಜಿಯವರ ಹೊಸ ಭಾರತದ ಕಲ್ಪನೆಗಳ ಪ್ರಸ್ತುತತೆ ಕುರಿತು ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಅಮೇರಿಕಾ-ಇಸ್ರೇಲ್ ಮತ್ತು ಇರಾನ್‌ ನಡುವಿನ ಯುದ್ಧ ಇಡೀ ಜಗತ್ತಿನ ಮೇಲೆ ಅಶಾಂತಿ ಮತ್ತು ನಕಾರಾತ್ಮಕ ಪ್ರಭಾವ ಬೀರುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿಗೆ ಇವತ್ತು ಶಾಂತಿ, ಸೌಹಾರ್ದತೆ ಮತ್ತು ಮಾನವೀಯತೆಯ ಸಂದೇಶ ಬೇಕಾಗಿದೆ. ಆದ್ದರಿಂದ ನಾವು ಗಾಂಧೀಜಿಯವರ ತತ್ವಾದರ್ಶಗಳನ್ನು ಪಾಲಿಸಿ ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರು.

ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯ ಮಾನವಿಕ ವಿಭಾಗದ ಡೀನ್ ಡಾ.ಎಂ.ಎಸ್.ದೇಶಮುಖ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಅತಿಥಿಗಳಾದ ಸಾಂಗಲಿಯ ವಿಲಿಂಗ್ಡನ್ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮನೋಹರ ಕೋರೆ ಮಾತನಾಡಿ, ಗಾಂಧೀಜಿಯವರ ತತ್ವಗಳ ಆಧಾರದ ಮೇಲೆ ನಾವು ಹೊಸ ಭಾರತವನ್ನು ನಿರ್ಮಿಸಿ ಜಗತ್ತಿಗೆ ಮಾದರಿಯಾಗೋಣ ಎಂದು ಹೇಳಿದರು.ಪ್ರಾಚಾರ್ಯ ಡಾ.ಎಸ್.ಪಿ.ತಳವಾರ ಮಾತನಾಡಿ, ಗಾಂಧೀಜಿ ಸಾಮಾನ್ಯ ವ್ಯಕ್ತಿಯಾದರೂ ಮಹಾನ್ ವ್ಯಕ್ತಿಯಾಗಿ ಪರಿವರ್ತನೆಯಾದರು. ವಿದ್ಯಾರ್ಥಿಗಳಾದ ತಮ್ಮಲ್ಲಿ ಮಾಯವಾಗುತ್ತಿರುವ ನೈತಿಕ ಗುಣಗಳನ್ನು ಗಾಂಧೀಜಿಯವರನ್ನು ಅನುಕರಿಸಿ ಸರಿಪಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.ತಾಂತ್ರಿಕಗೋಷ್ಟಿಯಲ್ಲಿ ಗಾಂಧಿ ಪೀಳಿಗೆ: ಸಾಮಾಜಿಕ ಬದಲಾವಣೆಗಾಗಿ ಯುವಕರನ್ನು ಪ್ರೇರೆಪಿಸುವುದು ಎಂಬ ವಿಷದ ಮೇಲೆ ಬೆಂಗಳೂರಿನ ಟಿ.ದಾಸರಹಳ್ಳಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಡಾ.ಅಬಿದಾ ಬೇಗಂ ಮಾತನಾಡಿದರು. 2ನೇ ತಾಂತ್ರಿಕ ಗೋಷ್ಟಿಯಲ್ಲಿ ಗಾಂಧೀಜಿಯವರ ಆರ್ಥಿಕ ಚಿಂತನೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದು ವಿಷಯದ ಮೇಲೆ ಶಿವಾಜಿ ವಿಶ್ವವಿದ್ಯಾಲಯದ ಡಾ.ಎಸ್.ಎಂ.ದೇಶಮುಖ ಉಪನ್ಯಾಸ ನೀಡಿದರು. 3ನೇ ತಾಂತ್ರಿಕ ಗೋಷ್ಟಿಯಲ್ಲಿ ವೆಂಕಟೇಶ ಮಹಾವಿದ್ಯಾಲಯ ನಿವೃತ್ತ ಗ್ರಂಥಪಾಲಕ ಪ್ರೊ.ಆರ್.ಆರ್.ಪಾಟೀಲ ಗ್ರಾಮೀಣ ಗ್ರಂಥಾಲಯಗಳ ಮೂಲಕ ಗಾಂಧಿ ತತ್ವಶಾಸ್ತ್ರವನ್ನು ಅರ್ಥಮಾಡಿಕೊಳ್ಳುವುದು ವಿಷಯದ ಮೇಲೆ ಉಪನ್ಯಾಸ ನೀಡಿದರು. ಈ ಅವಧಿಯಲ್ಲಿ ಎನ್‌ಎಸ್‌ಎಸ್ ಘಟಕ-1ರ ಕಾರ್ಯಕ್ರಮಾಧಿಕಾರಿ ಡಾ.ಚಂದ್ರಶೇಖರ.ವೈ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಘಟಕ-2ರ ಕಾರ್ಯಕ್ರಮಾಧಿಕಾರಿ ಪ್ರೊ.ಎ.ಎ.ಪಾಟೀಲ ವರದಿಗಾರರಾಗಿದ್ದರು.ಆಡಳಿತ ಮಂಡಳಿ ಕಾರ್ಯದರ್ಶಿ ಪ್ರೊ.ಬಿ.ಎ.ಪಾಟೀಲ, ಆಡಳಿತಾಧಿಕಾರಿಗಳಾದ ಮೇಜರ್. ವಿ.ಎಸ್.ತುಗಶೆಟ್ಟಿ ಉಪಸ್ಥಿತರಿದ್ದರು. ರಾಧಿಕಾ ಕುರ್ಣೆ ಹಾಗೂ ಸಂಗಡಿಗರು ಸ್ವಾಗತಗೀತೆ ಹಾಡಿದರು. ಪ್ರೊ. ಎ.ಎ.ಪಾಟೀಲ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಕ ಪ್ರೊ.ಬಿ.ಡಿ.ಧಾಮಣ್ಣವರ ಪ್ರಸ್ತಾವಿಕ ನುಡಿದರು. ಡಾ.ಚಂದ್ರಶೇಖರ ವಂದಿಸಿದರು. ಪ್ರೊ.ಎಸ್.ಎಸ್.ಫಡತರೆ ನಿರೂಪಿಸಿದರು. ಸಂಜೆ ನಡೆದ ಸಮಾರೋಪದಲ್ಲಿ ಗಾಂಧಿ ಸ್ಮಾರಕ ನಿಧಿ ಬೆಂಗಳೂರಿನ ಕಾರ್ಯದರ್ಶಿ ಎಂ.ಸಿ.ನರೇಂದ್ರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಎನ್‌ಎಸ್‌ಎಸ್ ಸ್ವಯಂ ಸೇವಕರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.