ಕನ್ನಡಿಗರಿಂದಲೇ ಕನ್ನಡದ ನಿರ್ಲಕ್ಷ : ಡಾ. ಶ್ರೀಪತಿ ಹಳಗುಂದ

| Published : Nov 18 2024, 12:05 AM IST

ಸಾರಾಂಶ

ಚಿಕ್ಕಮಗಳೂರು, ಕನ್ನಡಿಗರು ಇಂಗ್ಲಿಷ್‌ ವ್ಯಾಮೋಹದ ಮಡಿವಂತಿಕೆ ಬಿಟ್ಟು ಹೊರ ಬಂದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಲೇಖಕ ಡಾ. ಶ್ರೀಪತಿ ಹಳಗುಂದ ಅವರು ಹೇಳಿದ್ದಾರೆ.

- ಕನ್ನಡ ರಾಜ್ಯೋತ್ಸವ ಮತ್ತು ಮಧುಮೇಹ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕನ್ನಡಿಗರು ಇಂಗ್ಲಿಷ್‌ ವ್ಯಾಮೋಹದ ಮಡಿವಂತಿಕೆ ಬಿಟ್ಟು ಹೊರ ಬಂದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಲೇಖಕ ಡಾ. ಶ್ರೀಪತಿ ಹಳಗುಂದ ಅವರು ಹೇಳಿದ್ದಾರೆ.

ಚಿಕ್ಕಮಗಳೂರಿನ ಲಯನ್ಸ್ ಸಂಸ್ಥೆ, ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಷನ್‌ ಆಶ್ರಯದಲ್ಲಿ ನಗರದ ಎಂಇಎಸ್‌ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಧುಮೇಹ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.ಕನ್ನಡಿಗರು ಇಂಗ್ಲಿಷ್ ವ್ಯಾಮೋಹಕ್ಕೆ ಬಲಿ ಆಗುತ್ತಿರುವ ಪರಿಣಾಮ ಕನ್ನಡ ಮಾತನಾಡಲು ಕನ್ನಡಿಗರಲ್ಲೇ ಕೇಳರಿಮೆ ಇದ್ದು ಪರಭಾಷಿಕರಿಂದ ಕನ್ನಡ ಭಾಷೆ ಕೊಲ್ಲುವ ಹುನ್ನಾರ ನಡೆದಿದೆ ಎಂದರು.

ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದ್ದು ಪೆನ್ನು ಪೇಪರ್ ಇಲ್ಲದ ಕಾಲದಲ್ಲೇ ನಮ್ಮ ಪೂರ್ವಜರು ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸಿದ್ದಾರೆ. ಅನ್ಯ ಭಾಷೆಗಳ ಹಾವಳಿಯಿಂದ ಕನ್ನಡ ಭಾಷೆ ರಕ್ಷಣೆಯೇ ಒಂದು ಸವಾಲಾಗಿ ಪರಿಣಮಿಸಿದೆ. ಎಲ್ಲ ಭಾಷೆ ಗಳಿದ್ದರೂ ಕನ್ನಡ ಯಾವತ್ತಿಗೂ ಸಾಯುವುದಿಲ್ಲ. ಇಂತಹ ಇತಿಹಾಸವುಳ್ಳ ಕನ್ನಡ ಭಾಷೆ ಬಳಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದು ತಿಳಿಸಿದರು.

ಮಕ್ಕಳಲ್ಲಿ ಇತ್ತೀಚೆಗೆ ಕಂಡು ಬರುವ ಮಧುಮೇಹ ಕುರಿತು ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹ ರೋಗಕ್ಕೆ ಬೀದಿ ಬದಿ ತಿಂಡಿ ತಿನಿಸುಗಳ ಮತ್ತು ಸೇವನೆ ಮಕ್ಕಳಲ್ಲಿ ಚಟುವಟಿಕೆ ಇಲ್ಲದಿರುವುದೇ ಮಧುಮೇಹಕ್ಕೆ ಕಾರಣ ಎಂದು ಹೇಳಿದರು.ವಿಶ್ವದಲ್ಲಿರುವ 7 ಸಾವಿರ ಭಾಷೆಗಳಲ್ಲಿ ಕನ್ನಡ ಭಾಷೆ 40ನೇ ಸ್ಥಾನದಲ್ಲಿದೆ. ಅತ್ಯಂತ ಪ್ರಮುಖ ಭಾಷೆಗಳಲ್ಲಿ ಕನ್ನಡ ಭಾಷೆಯೂ ಕೂಡ ಒಂದಾಗಿದ್ದು ಕನ್ನಡ ಪ್ರತ್ಯೇಕ ಲಿಪಿ ಹೊಂದಿದೆ. ಇದರ ಜೊತೆಗೆ 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವುದು ಕನ್ನಡ ಭಾಷೆಗೆ ಹೆಗ್ಗಳಿಕೆ ಇದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಪುಷ್ಪರಾಜ್‌ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರು ಕನ್ನಡ ರಾಜ್ಯೋತ್ಸವ ಒಂದು ಹಬ್ಬವಾಗಿ ಆಚರಿಸಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಕನ್ನಡ ನಾಡು ನುಡಿ ನೆಲ ಜಲ ಭಾಷೆ ರಕ್ಷಣೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಲಯನ್ಸ್ ಸಂಸ್ಥೆ ಪ್ರಾಂತೀಯ ಅಧ್ಯಕ್ಷ ಗೋಪಾಲಗೌಡ, ಮಲೆನಾಡು ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಡಿ.ಎಲ್. ವಿಜಯಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಲಯನ್ಸ್ ವಲಯ ಅಧ್ಯಕ್ಷ ಬಿ.ಎನ್. ವೆಂಕಟೇಶ್, ಕಾರ್ಯದರ್ಶಿ ಗೋಪಿಕೃಷ್ಣ, ಖಜಾಂಚಿ ಎಂ.ಎಂ. ಗಿರೀಶ್ ಉಪಸ್ಥಿತರಿದ್ದರು.

ಚಿಕ್ಕಮಗಳೂರು ಜಿಲ್ಲಾ ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಷನ್‌ ಅಧ್ಯಕ್ಷ ಜಿ. ರಮೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಭಾರ್ಗವ ವಂದಿಸಿದರು.

17 ಕೆಸಿಕೆಎಂ 2ಚಿಕ್ಕಮಗಳೂರಿನ ಎಂಇಎಸ್‌ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಮಧುಮೇಹ ದಿನಾಚರಣೆ ಯಲ್ಲಿ ಲೇಖಕ ಡಾ. ಶ್ರೀಪತಿ ಹಳಗುಂದ ಅವರನ್ನು ಸನ್ಮಾನಿಸಲಾಯಿತು. ಡಾ. ಜೆ.ಪಿ. ಕೃಷ್ಣೇಗೌಡ, ಜಿ. ರಮೇಶ್‌, ಪುಷ್ಪರಾಜ್‌, ವೆಂಕಟೇಶ್‌, ಗೋಪಿಕೃಷ್ಣ ಇದ್ದರು.