ಪಂಚಮಸಾಲಿ ಸಮುದಾಯಕ್ಕೆ ಕಡೆಗಣನೆ: ಮೃತ್ಯುಂಜಯ ಸ್ವಾಮೀಜಿ

| Published : Feb 29 2024, 02:00 AM IST

ಸಾರಾಂಶ

2(ಎ) ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು. ಸಮುದಾಯವು ಸಂಘಟಿತವಾಗಿ ತಾಕತ್ತು ತೋರಿಸಿ ಎಂದು ಸಮುದಾಯದವರಿಗೆ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಹಲವು ವರ್ಷಗಳಿಂದ ನಮ್ಮನ್ನಾಳಿದ ಸರ್ಕಾರಗಳು, ರಾಜಕಾರಣಿಗಳು ಪಂಚಮಸಾಲಿ ಸಮುದಾಯವನ್ನು ಕಡೆಗಣಿಸಿದ್ದಾರೆ. ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿಯ ಮಹಾಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಅಗ್ರಹಿಸಿದರು.

ತಾಲೂಕಿನ ದಿಗ್ಗಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕೋಟಿ 30 ಲಕ್ಷ ಜನಸಂಖ್ಯಾ ಹೊಂದಿರುವ ಹಾಗೂ ಹಲವು ನಿರ್ಲಕ್ಷ್ಯಗಳಿಗೆ ಒಳಗಾಗಿರುವ ಪಂಚಾಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಒದಗಿಸಿಕೊಡಬೇಕೆಂದು ಕಳೆದ ಮೂರು ವರ್ಷಗಳಿಂದ ರಾಜ್ಯಾದ್ಯಾಂತ ಬೃಹತ್ ಪ್ರಮಾಣದ ವಿವಿಧ ಹೋರಾಟಗಳ ಮೂಲಕ ಸರ್ಕಾರಗಳ ಗಮನಕ್ಕೆ ತಂದು ಒತ್ತಾಯಿಸಿದರೂ ಸಹ ಯಾವುದೇ ರೀತಿಯಿಂದ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದರು.

ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ಸಮುದಾಯವಾಗಿರುವ ಪಂಚಮಸಾಲಿಯು ನಾಡಿಗೆ ವಿಶಿಷ್ಟ ಕೊಡುಗೆ ನೀಡಿದೆ. ಆದರೆ, ಈ ಸಮುದಾಯವು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಾ ಶೈಕ್ಷಣಿಕ, ಸಾಮಾಜಿಕ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ತುಂಬಾ ಹಿಂದುಳಿದಿದೆ. ಪಂಚಮಸಾಲಿ ಸಮುದಾಯವು ಸಂಘಟಿತ ಗೊಳ್ಳುವ ಮೂಲಕ ಸರ್ಕಾರಕ್ಕೆ ಪಂಚಮಿ ಸಾಲಿ ಸಮುದಾಯದ ತಾಕತ್ತು ತೋರಿಸಬೇಕಾಗಿದೆ ಎಂದರು

ಫೆ.29ರಂದು ಹುಣಸಗಿ ತಾಲೂಕಿನ ರಾಜ್ಯ ಹೆದ್ದಾರಿಯಲ್ಲಿ ಯಾದಗಿರಿ ಜಿಲ್ಲೆಯ ವತಿಯಿಂದ ಲಿಂಗಪೂಜೆಯ ಮೂಲಕ ಪಂಚಮಸಾಲಿ ಬೃಹತ್ ಹೋರಾಟವನ್ನು ಮಾಡಲಾಗುವುದು ಮತ್ತು ಮಾ.10 ರಂದು ಕಲಬುರಗಿಯಲ್ಲಿ ಪ್ರಥಮಬಾರಿಗೆ ಕಲ್ಯಾಣ ಕರ್ನಾಟಕದ ಪಂಚಮಸಾಲಿಯ ಬೃಹತ್ ಪ್ರಮಾಣದ ಹೋರಾಟವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಮೂಲಕ ಸಂವಿಧಾನದ ಸಾಮಾಜಿಕ ನ್ಯಾಯದ ಆಶಯದಂತೆ ಹಲವು ಕ್ಷೇತ್ರಗಳಲ್ಲಿ ತುಂಬಾ ಹಿಂದುಳಿದಿರುವ ಪಂಚಾಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಪಂಚಮಸಾಲಿಯ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಮಾಳನೂರ, ತಾಲೂಕಾಧ್ಯಕ್ಷ ದೇವಿಂದ್ರಪ್ಪ ತೋಟಗೇರ, ಜಿಲ್ಲಾ ಯುವ ಘಟಕ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ತಾಲೂಕು ಯುವ ಘಟಕ ಅಧ್ಯಕ್ಷ ಶಾಂತಗೌಡ ಹಿಮ್ಮಶೆಟ್ಟಿ, ಶರಣು ಬೇವಿನಹಳ್ಳಿ, ಅಶೋಕ ಪ್ಯಾಟಿ, ಅನಿಲ ಬಿರಾದಾರ್, ಚನ್ನಬಸ್ಸು ನರಬೋಳಿ, ಸಂಗಣ್ಣ ಬಳಬಟ್ಟಿ, ಶರಣು ಸುರಪುರ, ಚಂದ್ರಶೇಖರ ಪೊಲೀಸ್ ಪಾಟೀಲ್, ರವಿಕುಮಾರ ಹಿಮಶೆಟ್ಟಿ, ದೇವಿಂದ್ರಪ್ಪ ಮಹಾಮನಿ, ಗುರುಬಸಪ್ಪ ಪ್ಯಾಟಿ ಇತರರಿದ್ದರು.