ಸಾರಾಂಶ
ಧಾರವಾಡ: ಯುವ ಜನತೆಗೆ ಸಮಾಜದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಆದರೆ, ನಿರ್ಲಕ್ಷ್ಯ, ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಹಾಗೂ ಅನೂಕೂಲಕರ ವಾತಾವರಣಗಳನ್ನು ಅಪೇಕ್ಷೀಸುತ್ತ ಯುವ ಜನತೆ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಜೆಎಸ್ಸೆಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಎಚ್ಚರಿಸಿದರು.
ಬೆಂಗಳೂರಿನ ಡೆವೆಲಪ್ ಸಂಸ್ಥೆಯು ಜನತಾ ಶಿಕ್ಷಣ ಸಮಿತಿಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಉದ್ಯೋಗಮೇಳ ಡೆವೆಲಪ್ ಉದ್ಯಮಾ-2025ನ್ನು ಉದ್ಘಾಟಿಸಿ ಮಾತನಾಡಿದರು.ಕೆಲಸದಲ್ಲಿ ಆಸಕ್ತಿ, ಶ್ರದ್ಧೆ ಮತ್ತು ಏನಾದರೂ ಸಾಧಿಸಬೇಕೆಂಬ ಛಲ ಇದ್ದರೇ, ನೀವು ಕಾರ್ಯನಿರ್ವಹಿಸುವ ಕಂಪನಿ ಹಾಗೂ ನಿಮ್ಮ ಯಶಸ್ಸು ಸಹ ಕಟ್ಟಿಟ್ಟ ಬುತ್ತಿ ಎಂದ ಅವರು ತಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಜೊತೆಗೆ ಕೌಶಲ್ಯಾಭಿವೃದ್ದಿಗೂ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದರು.
ಆಧುನಿಕ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳನ್ನು ಹಾಗೂ ಉದ್ಯೋಗದಾತರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನವನ್ನು ಡೆವೆಲಪ್ ಮಾಡಿದೆ. ಸಮಯ ವ್ಯರ್ಥ ಮಾಡದೇ, ನಮಗೆ ಸೂಕ್ತ ಅನಿಸಿದ ಕಂಪನಿಗೆ ಸಂದರ್ಶನವನ್ನು ನೀಡಿ. ಆ ಉದ್ಯೋಗ ತಮಗೆ ತೃಪ್ತಿಯಾಗದಿದ್ದರೆ, ಕೇವಲ ನೆಪಕ್ಕಾಗಿ ಇನ್ನೊಂದು ಕಂಪನಿಗೆ ಸಂದರ್ಶನ ನೀಡಬೇಡಿ. ಇದು ಇನ್ನೊಬ್ಬರ ಅವಕಾಶವನ್ನು ಕಸಿದುಕೊಂಡಂತಾಗುತ್ತದೆ ಎಂದರು.ಡೆವೆಲಪ್ ಕಂಪನಿಯ ಸಿಇಒ ತೇಜಸ್ ಗೌಡ ಮಾತನಾಡಿ, ಬಹಳಷ್ಟು ಕಂಪನಿಗಳಲ್ಲಿ ಕೆಲಸಗಾರರ ಕೊರತೆ ಇದೆ ಹಾಗೂ ಅದೇ ರೀತಿ ನಿರುದ್ಯೋಗಿ ಯುವಕ ಯುವತಿಯರಿಗೆ ಕೆಲಸದ ಅವಶ್ಯಕತೆ ಇದೆ. ಆದರೆ, ಇಬ್ಬರ ನಡುವೆ ಸರಿಯಾದ ಮಾಹಿತಿ ಹಾಗೂ ಸಂಪರ್ಕದ ಕೊರತೆಯಿಂದಾಗಿ ನಿರುದ್ಯೋಗದ ಮಟ್ಟ ಜಾಸ್ತಿಯಾಗುತ್ತಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಕಂಪನಿ ಹಾಗೂ ಉದ್ಯೋಗಾಸಕ್ತರ ಬಾಂಧವ್ಯ ಬೆಸೆಯಲು ಡೆವೆಲಪ್ ಕಂಪನಿಯನ್ನು ಸ್ಥಾಪಿಸಿದೆ ಎಂದರು.
ಮಹಾವೀರ ಉಪಾದ್ಯೆ, ಡಾ. ನಾಗಚಂದ್ರ, ಶಿವಪ್ರಸಾದ, ಸೂರಜ್ ಆಲದಕಟ್ಟಿ, ನಿರಂಜನ, ಪಲ್ಲವಿ ಎಸ್., ಶಿವು ರಾಜನ್ ಇದ್ದರು. ಸಂಜಯ ನಿರೂಪಿಸಿದರು. ಉದ್ಯೋಗ ಮೇಳದಲ್ಲಿ 60ಕ್ಕೂ ಹೆಚ್ಚು ಕಂಪನಿಗಳು ಬಂದಿದ್ದು, 3580 ಅಭ್ಯರ್ಥಿಗಳು ಹಾಜರಾಗಿದ್ದು, ಈ ಪೈಕಿ 260 ಜನ ಉದ್ಯೋಗಕ್ಕೆ ಆಯ್ಕೆಯಾದರು. 620 ಜನ ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದಾರೆ.