ಸಾರಾಂಶ
ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು ಕಾಲೇಜಿನಲ್ಲಿಯೇ ಏ.18ರಂದು ಹಾಡುಹಗಲೇ ಕೊಲೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಹಾಗೂ ಪ್ರಿಯತಮನಿಂದ ಮನೆಯಲ್ಲಿಯೇ ಮೇ 15ರಂದು ಹತ್ಯೆಯಾದ ಅಂಜಲಿ ಅಂಬಿಗೇರ ಘಟನೆಗಳು.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಈ ವರ್ಷ ಸಿಹಿಗಿಂತ ಕಹಿ ಘಟನೆಗಳೇ ಕಣ್ಣೆದುರು ಕಾಣಿಸುತ್ತಿವೆ. ಕೊಲೆ, ಸುಲಿಗೆ, ಅಪಘಾತ, ಸಿಲಿಂಡರ್ ಸೋರಿಕೆಯಿಂದ ಅಯ್ಯಪ್ಪ ಸ್ವಾಮಿಗಳು ಸಾವು ಸೇರಿದಂತೆ ವಿವಿಧ ಕಹಿ ಘಟನೆಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿವೆ. ಅಪರಾಧ ಪ್ರಕರಣ ಲೆಕ್ಕ ಹಾಕಿದರೆ ಒಂದೇ ವರ್ಷದಲ್ಲಿ ಮಹಾನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 3323 ಪ್ರಕರಣ ದಾಖಲಾಗಿವೆ.
ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು ಕಾಲೇಜಿನಲ್ಲಿಯೇ ಏ.18ರಂದು ಹಾಡುಹಗಲೇ ಕೊಲೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಹಾಗೂ ಪ್ರಿಯತಮನಿಂದ ಮನೆಯಲ್ಲಿಯೇ ಮೇ 15ರಂದು ಹತ್ಯೆಯಾದ ಅಂಜಲಿ ಅಂಬಿಗೇರ ಘಟನೆಗಳು. ಇವು ರಾಜ್ಯ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ರಾಜಕೀಯ ಜಟಾಪಟಿಗೂ ಕಾರಣವಾಗಿ ಪೊಲೀಸ್ ಅಧಿಕಾರಿಗಳ ತಲೆದಂಡವೂ ಆಯಿತು. ಇದು ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವೂ ಆಗಿತ್ತು. ಹಳೆ ಕೋರ್ಟ್ ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ವೇಳೆ ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್ಐ ಮೇಲೆ ಕಬ್ಬಿಣದ ರಾಡ್ ಬಿದ್ದು ಮೃತರಾದರು. ಇದರಿಂದ ಕಾಮಗಾರಿಯೇ ಸ್ಥಗಿತವಾಗಿದೆ. ಡಿ. 22ರಂದು ಸಿಲಿಂಡರ್ ಸೋರಿಕೆಯಾಗಿ 6 ಅಯ್ಯಪ್ಪ ಮಾಲಾಧಾರಿಗಳು ಮೃತರಾಗಿದ್ದು ಜನರ ಮನಸ್ಸನ್ನು ಘಾಸಿಮಾಡಿದೆ.ಗುಂಡಿನ ಸದ್ದು:
ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಹತ್ಯೆ ಬಳಿಕ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಸೇರಿದಂತೆ ವಿವಿಧ ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ ನೀಡಲಾಯಿತು. ಬಳಿಕ ಮಹಾನಗರ ಪೊಲೀಸ್ ಕಮಿಷನರ್ ಆಗಿ ಜು. 3ರಂದು ಅಧಿಕಾರ ಸ್ವೀಕರಿಸಿದ ಎನ್. ಶಶಿಕುಮಾರ, ಅಪರಾಧಿಗಳಿಗೆ ನಡುಕು ಹುಟ್ಟಿಸಿದರು. ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಸ್ಥಳ ಮಹಜರು ಮಾಡಲು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾದ ಆರೋಪಿಗಳಿಗೆ ಗುಂಡೇಟು ನೀಡಲಾಯಿತು. ಜುವೆಲರಿ ಶಾಪ್ ಕಳ್ಳತನ ಆರೋಪಿ ಫರ್ಹಾನ್ ಶೇಖ್ ಕಾಲಿಗೆ ಗುಂಡು ಹಾರಿಸುವ ಮೂಲಕ ಆರಂಭವಾದ ಗುಂಡಿನ ಸದ್ದು ಎಲ್ಲೆಡೆ ಸಂಚಲನವನ್ನುಂಟು ಮಾಡಿತು. ಈ ವರೆಗೆ 9 ಫೈರಿಂಗ್ ಪ್ರಕರಣ ನಡೆದಿದ್ದು, 11 ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ. ಈ ಘಟನೆಗಳಲ್ಲಿ ಒಟ್ಟು 23 ಪೊಲೀಸರಿಗೆ ಗಾಯಗಳಾಗಿವೆ.ರಾಡ್ ಬಿದ್ದು ಎಎಸ್ಐ ಸಾವು:
ನಗರದ ಕ್ಲಬ್ ರಸ್ತೆಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದ ವೇಳೆ ಕಬ್ಬಿಣದ ರಾಡ್ ಬಿದ್ದು ಉಪನಗರ ಠಾಣೆ ಎಎಸ್ಐ ನಾಭಿರಾಜ ದಾಯಣ್ಣವರ ಮೃತರಾದರು. ಕಾಮಗಾರಿ ವೇಳೆ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ ಇರುವುದರಿಂದ ಈ ಅವಘಡ ನಡೆದಿತ್ತು. ಈ ಕಾಮಗಾರಿ ಗುತ್ತಿಗೆ ಪಡೆದಿದ್ದ ಝಂಡು ಕಂಪನಿಯ 19 ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.ಮುನ್ನೆಲೆಗೆ ಬಂದ ಹಳೆ ಹುಬ್ಬಳ್ಳಿ ಪ್ರಕರಣ:
2022ರ ಏ. 16ರಲ್ಲಿ ನಡೆದಿದ್ದ ಹಳೆಹುಬ್ಬಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರವು ಹಿಂಪಡೆಯಲು ನಿರ್ಧರಿಸುತ್ತಿದ್ದಂತೆ ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದು ರಾಜ್ಯಾದ್ಯಂತ ಹೋರಾಟ ನಡೆಸಿದವು. ಹಲವು ಹಂತದ ಹೋರಾಟ ನಡೆಸಿ ಸರ್ಕಾರದ ನಡೆ ಖಂಡಿಸಿದರು. ಎರಡು ವರ್ಷಗಳ ಬಳಿಕ ಮತ್ತೆ ರಾಜ್ಯಾದ್ಯಂತ ಈ ಪ್ರಕರಣ ಸದ್ದು ಮಾಡಿತು.7 ಮಾಲಾಧಾರಿ ಸಾವು:ಹುಬ್ಬಳ್ಳಿಯ ಸಾಯಿನಗರದಲ್ಲಿ ಡಿ. 22ರ ಮಧ್ಯರಾತ್ರಿ ಸಿಲಿಂಡರ್ ಸೋರಿಕೆಯಿಂದಾಗಿ ಉಂಟಾದ ಅಗ್ನಿ ಅವಘಡದಲ್ಲಿ ಅಯ್ಯಪ್ಪ ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗೆ ಕೆಎಂಸಿಆರ್ಐಗೆ ದಾಖಲಿಸಲಾಗಿತ್ತು. ಆದರೆ, ಇದರಲ್ಲಿ 7 ಜನರು ಮೃತರಾಗಿದ್ದು ಇನ್ನುಳಿದ ಇಬ್ಬರಿಗೆ ಚಿಕಿತ್ಸೆ ಮುಂದುವರಿದೆ. ಈ ಘಟನೆಯಿಂದ ಹಲವು ಮಾಲಾಧಾರಿಗಳು ವ್ರತವನ್ನೆ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.3323 ಪ್ರಕರಣ ದಾಖಲು:
ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿರುವ ಎಲ್ಲ ಪೊಲೀಸ್ ಠಾಣೆಗಳಲ್ಲಿ ಒಂದೇ ವರ್ಷದಲ್ಲಿ ಒಟ್ಟು 3323 ಪ್ರಕರಣ ದಾಖಲಾಗಿವೆ. ಇದರಲ್ಲಿ ಎನ್ಎಸ್ಪಿಎಸ್ 245, ಕಳ್ಳತನ 60, ಗಲಾಟೆ 164, ವಂಚನೆ 85, ಡಕಾಯಿತಿ 03, ಹತ್ಯೆಗೆ ಯತ್ನ 80, ಕಿಡ್ನಾಪ್ 80, ಮಿಸ್ಸಿಂಗ್ 418, ಅಬಕಾರಿ 60, ಮಟ್ಕಾ 215, ಕ್ರಿಕೆಟ್ ಬೆಟ್ಟಿಂಗ್ 73, ಎಸ್ಸಿ, ಎಸ್ಟಿ 46, ಕೊಲೆ 22, ಪೋಕ್ಸೋ 63, ಆತ್ಮಹತ್ಯೆ 13, ಅಪಘಾತ 432 ಸೇರಿದಂತೆ ಒಟ್ಟು 3323 ಪ್ರಕರಣ ದಾಖಲಾಗಿವೆ.