ಲೋಕಸಭೆ, ವಿರೋಧ ಪಕ್ಷದ ಸ್ಥಾನದಿಂದ ಕಾಂಗ್ರೆಸ್‌ ದೂರ. ಕಾಂಗ್ರೆಸ್‌ಗೆ 4 ಸ್ಥಾನ ಬಂದ್ರೆ, ಬಿಜೆಪಿಯ ಮೈತ್ರಿಗೆ 25 ಸ್ಥಾನಗಳು ಪಕ್ಕಾ ಎಂದು ಬೀದರ್‌ನಲ್ಲಿ ನಡೆದ ಈಶಾನ್ಯ ಪದವೀಧರರ ಚುನಾವಣೆ ನಿಮಿತ್ತ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಅಮರನಾಥ ಪಾಟೀಲರ ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭವಿಷ್ಯ ನುಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕಾಂಗ್ರೆಸ್‌ ಪಕ್ಷದಲ್ಲಿ ನೆಹರು ಅವರಿಂದ ಹಿಡಿದು ಇಲ್ಲಿಯವರೆಗೆ ಇರುವ ಎಲ್ಲ ನಾಯಕರೂ ಸುಳ್ಳು ಹೇಳುತ್ತಲೇ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಈಗ ಜನರು ಎಚ್ಚರಗೊಂಡಿದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ಪಾಠ ಕಲಿಸಿದ್ದಾರೆ. ಇದರಿಂದ ರಾಜ್ಯದ 28 ಸೀಟುಗಳ ಪೈಕಿ 4ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲ್ಲಲ್ಲ, ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ 24 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭವಿಷ್ಯ ನುಡಿದರು.

ನಗರದ ಲಾವಣ್ಯ ಫಂಕ್ಷನ್‌ ಹಾಲ್‌ನಲ್ಲಿ ಈಶಾನ್ಯ ಪದವೀಧರರ ಚುನಾವಣೆ ನಿಮಿತ್ತ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಅಮರನಾಥ ಪಾಟೀಲರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ರಾಹುಲ್‌ ಬಾಬಾ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಬರೆದುಕೊಳ್ಳಿ ಎಂದು ಹೇಳುತಿದ್ದಾರೆ. ಆದರೆ ನಾನು ರಾಹುಲ್‌ಗೆ ಇದು ರಿಕಾರ್ಡ್‌ ಮಾಡಿಕೊಳ್ಳಿ ಕೇಂದ್ರದಲ್ಲಿ ಅಧಿಕೃತ ವಿರೋಧ ಪಕ್ಷವಾಗಿಯೂ ಉಳಿಯಲ್ಲ ಎಂದು ಹೇಳಿದ್ದೇನೆ. ಇದೀಗ ಪದವೀಧರ ಮತದಾರರು ಎಲ್ಲವನ್ನೂ ತಿಳಿದು ಸುಳ್ಳು ಹೇಳುವ ಕಾಂಗ್ರೆಸ್‌ನೊಂದಿಗೆ ಹೋಗಲು ಹೇಗೆ ಸಾಧ್ಯ ಎಂದು ಸಚಿವ ಜೋಶಿ ಹೇಳಿದರು.

ರಾಜ್ಯದಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 135 ಸ್ಥಾನ ಗೆದ್ದಿದ್ದಾರೆ. ಆದರೆ ಒಂದು ವೇಳೆ ಸದ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದರೆ 35 ಸ್ಥಾನಗಳು ಕೂಡ ಬರೋಲ್ಲ. ಇದಕ್ಕೆ ಕಾಂಗ್ರೆಸ್‌ನ ಭ್ರಷ್ಟಾಚಾರದ ಇತಿಹಾಸ, ತುಷ್ಟೀಕರ ನೀತಿಗಳೇ ಕಾರಣವಾಗುತ್ತವೆ ಎಂದರು.

ಕರ್ನಾಟಕ ಪಂಜಾಬ್‌ನ್ನು ಹಿಂದಿಕ್ಕಲಿದೆ: ರಾಜ್ಯದಲ್ಲಿ ಹಾಡು ಹಗಲೇ ಕೊಲೆ, ಡ್ರಗ್ಸ ಮಾಫಿಯಾ ಹೀಗೆ ಮುಂದುವರೆದರೆ ಮುಂದಿನ ನಾಲ್ಕು ವರ್ಷಗಳಲ್ಲಿ ಕರ್ನಾಟಕ ರಾಜ್ಯವು ಡ್ರಗ್ಸ ಮಾಫಿಯಾದಲ್ಲಿ ಪಂಜಾಬ್‌ ರಾಜ್ಯವನ್ನು ಹಿಂದಿಕ್ಕಲಿದೆ ಎಂಬ ಭಯ ಕಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಪೊಲೀಸ್‌ ಇಲಾಖೆಯ ವರ್ಗಾವಣೆಯಲ್ಲಿ ಸಿಕ್ಕಾಪಟ್ಟೆ ವಸೂಲಿಗಿಳಿದಿದೆ: ರಾಜ್ಯದ ಕಾಲೇಜುಗಳ ಸುತ್ತ, ವಿಶ್ವ ವಿದ್ಯಾಲಯಗಗಳ ಬಳಿ ಡ್ರಗ್ಸ್‌ ಮಾರಾಟ ಜೋರಾಗಿ ನಡೆಯುತ್ತಿದೆ. ಪೊಲೀಸ್‌ ಇಲಾಖೆ ಏನೂ ನಡೆಯತ್ತಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ನೇಹಾ ಕೋಲೆ, ಅಂಜಲಿ ಹತ್ಯೆ ಪ್ರಕರಣದಲ್ಲಿ ಸಿಎಂ ಅವರ ಹೇಳಿಕೆ ಒಂದಾದರೆ ಗೃಹ ಸಚಿವ ಹೇಳಿಕೆ ಮತ್ತೊಂದಾಗುತ್ತದೆ. ಈ ಸರ್ಕಾರ ಪೊಲೀಸ್‌ ಇಲಾಖೆಯ ವರ್ಗಾವಣೆಯಲ್ಲಿ ಸಿಕ್ಕಾಪಟ್ಟೆ ವಸೂಲಿಗೆ ಇಳಿದಿದೆ ಎಂದರು.

ಕಲ್ಯಾಣ ಕರ್ನಾಟಕದಲ್ಲಿ ಸುಮಾರು 17795 ಶಿಕ್ಷಕರ ಕೊರತೆ ಇದೆ. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಹೀಗಾಗಿ ಈ ಭಾಗದಲ್ಲಿ ಶಿಕ್ಷಣ ಗುಣಮಟ್ಟ ಸಂಪೂರ್ಣವಾಗಿ ಕುಸಿದಿದೆ. ಸುಳ್ಳು ಹೇಳುವ ವ್ಯವಸ್ಥೆ ಹಾಗೂ ಗ್ಯಾರಂಟಿಯಲ್ಲಿ ಯಾವುದೇ ಯೋಜನೆಗಳು ಆಗಿಲ್ಲ ಹೊಸ ರಸ್ತೆ ಕೂಡ ಆಗುತ್ತಿಲ್ಲ ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ, ಶಾಸಕರಾದ ಡಾ. ಸಿದ್ದು ಪಾಟೀಲ್‌, ಶರಣು ಸಲಗರ, ಎಂಎಲ್ಸಿಗಳಾದ ಶಶೀಲ ನಮೋಶಿ, ರಘುನಾಥರಾವ್‌ ಮಲ್ಕಾಪೂರೆ ಹಾಗೂ ಎನ್‌. ರವಿಕುಮಾರ, ಈಶ್ವರಸಿಂಗ ಠಾಕೂರ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌, ಜೆಡಿಎಸ್‌ ಅಧ್ಯಕ್ಷ ರಮೇಶ ಪಾಟೀಳ್‌ ಸೋಲಪೂರ, ಎಂಜಿ ಮೂಳೆ, ಸೂರ್ಯಕಾಂತ ನಾಗಮಾರಪಳ್ಳಿ, ಶಿವಾನಂದ ಮಂಠಾಳಕರ್‌, ಬಾಬು ವಾಲಿ, ಅಭ್ಯರ್ಥಿ ಅಮರನಾಥ ಪಾಟೀಲ್‌ ಇದ್ದರು.