ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಇಲ್ಲಿನ ಕುಮಾರಧಾರಾ ನದಿಯ ೩೪ನೇ ನೆಕ್ಕಿಲಾಡಿ ದಡದಲ್ಲಿ ಮೊಸಳೆ ಪತ್ತೆಯಾಗಿದ್ದು, ಮೊಸಳೆಯನ್ನು ನೋಡಲು ಜನ ಜಮಾಯಿಸುತ್ತಿದ್ದಂತೆಯೇ ಮೊಸಳೆಯು ಬಾಯಗಲಿಸಿ ಶಬ್ದಗೈದು ಆಕ್ರಮಣಕಾರಿ ವರ್ತನೆ ತೋರಿ ನದಿ ನೀರಿಗೆ ಇಳಿದು ಹೋದ ಘಟನೆ ಬುಧವಾರ ಸಂಜೆ ನಡೆದಿದೆ.ಇಲ್ಲಿನ ಶೇಖಬ್ಬ ಹಾಜಿ ಎಂಬವರ ಮನೆ ಬಳಿ ಕುಮಾರಧಾರ ನದಿಗಿಳಿಯುವ ದಾರಿಯ ಬಳಿ ನದಿ ದಡದಲ್ಲಿ ಮೊಸಳೆಯು ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಕಂಡಿದ್ದರು. ನದಿ ದಡದಲ್ಲಿ ಏನೋ ಮಲಗಿದೆ ಎಂದು ಮಕ್ಕಳು ಸ್ಥಳೀಯ ನಿವಾಸಿಗಳಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಪರಿಶೀಳಿಸಲು ಹೋದಾಗ ಮೊಸಳೆಯು ನದಿ ದಡದಲ್ಲಿ ವಿಶ್ರಾಂತಿ ಪಡೆಯುವುದು ಕಂಡು ಬಂತು. ಇವರು ಸ್ವಲ್ಪ ಹತ್ತಿರಕ್ಕೆ ಹೋದಾಗ ಮೊಸಳೆ ಆಕ್ರಮಣಕಾರಿಯಂತೆ ಇವರ ಕಡೆ ನೋಡಿದ್ದು, ಮತ್ತೆ ನದಿ ನೀರಿಗೆ ಇಳಿದು ಕಣ್ಮರೆಯಾಗಿದೆ. ಎರಡು ವರ್ಷಗಳ ಹಿಂದೆ ಪಂಜಳದ ನೇತ್ರಾವತಿ ನದಿಯಲ್ಲಿಯೂ ದೊಡ್ಡ ಮೊಸಳೆಗಳೆರಡು ಪ್ರತ್ಯಕ್ಷವಾಗಿದ್ದವು. ಕಳೆದ ವರ್ಷ ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯ ಬಳಿ ನೇತ್ರಾವತಿ ನದಿ ದಡದಲ್ಲಿ ದೊಡ್ಡ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ನದಿಯಲ್ಲಿ ಮೊಸಳೆಯಿರುವುದು ನದಿಗೆ ಮೀನು ಬೇಟೆಗೆಂದು ಹೋಗುವವರಲ್ಲಿ ಆತಂಕ ಮೂಡಿಸಿದೆ. ಒಂದೆಡೆ ನದಿಯಲ್ಲಿ ಮೊಸಳೆಯು ಕಾಣಿಸಿಕೊಂಡರೆ ಕೆಲವು ದಿನಗಳ ಹಿಂದೆ ನದಿಯಲ್ಲಿ ನೀರು ಕಡಿಮೆ ಇದ್ದ ಸಂದರ್ಭ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ನೇತ್ರಾವತಿ ನದಿಯಲ್ಲಿ ಕಡವಿನ ಬಾಗಿಲ ಸಮೀಪ ಸುಮಾರು ೧೦ರಷ್ಟಿದ್ದ ನೀರು ನಾಯಿಗಳ ಹಿಂಡು ಕಾಣಿಸಿಕೊಂಡಿತ್ತು ಎಂದು ಉಪ್ಪಿನಂಗಡಿಯ ಪ್ರವಾಹ ರಕ್ಷಣಾ ತಂಡದ ನೇತೃತ್ವ ವಹಿಸಿರುವ ಗೃಹ ರಕ್ಷಕದಳದ ಸಿಬ್ಬಂದಿ ದಿನೇಶ್ ಬಿ. ತಿಳಿಸಿದ್ದಾರೆ.ಕಳೆದೆರಡು ವರ್ಷಗಳ ಹಿಂದೆ ಸರಕಾರದ ವತಿಯಿಂದ ನದಿಗೆ ಮೀನಿನ ಮರಿಗಳನ್ನು ಹಾಕಲಾಗಿದ್ದು, ಅವುಗಳು ಈಗ ಬೆಳೆದು ದೊಡ್ಡದಾಗಿವೆ. ಮೀನು ಹೇರಳವಾಗಿರುವ ಕಾರಣ ಇದೀಗ ನೀರು ನಾಯಿಗಳು ಅದರ ಬೇಟೆಗೆ ನದಿಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎನ್ನಲಾಗುತ್ತಿವೆ.