ಮೂಲ್ಕಿ: ಯಾಂತ್ರಿಕ ಬದುಕಿನ ಇಂದಿನ ದಿನದಲ್ಲಿ ಮೊಬೈಲ್ ನಿಂದ ಮಕ್ಕಳನ್ನು ರಕ್ಷಿಸಿ, ಆರೋಗ್ಯವನ್ನು ಕಾಯ್ದುಕೊಳ್ಳಬೇಕಾದರೆ ಜನಪದ ಆಟಗಳು ಅನಿವಾರ್ಯ ಎಂದು ಹಿರಿಯ ಜನಪದ ವಿದ್ವಾಂಸ, ಡಾ. ಶಿವರಾಮ ಕಾರಂತ ಟ್ರಸ್ಟ್‌ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರ್ ಅಭಿಪ್ರಾಯಪಟ್ಟರು. ಪಾವಂಜೆಯ ನಿನಾದ ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜನೆಯಲ್ಲಿ ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಪಾವಂಜೆಯ ನಿನಾದ ರಂಗ ಮಂದಿರ-ರಾಮಪ್ಪ ಪೂಜಾರಿ ಚಾವಡಿಯಲ್ಲಿ ನಡೆದ ನಿನಾದ ನೆಂಪು-ಬಾಲ ನಿನಾದ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲದ ಬದುಕಿನಲ್ಲಿ ಎಲ್ಲ ಜನಪದ ಆಟಗಳು ಶಾರೀರಿಕ ಮತ್ತು ಮಾನಸಿಕ ಬದ್ಧತೆ ಕಾಪಾಡುವುದರೊಂದಿಗೆ ಸಾಮಾಜಿಕ ಮತ್ತು ಕೌಟುಂಬಿಕ ಬದುಕಿನಲ್ಲಿ ಯಶಸ್ಸು ಕಾಣಲು, ಆಯುಷ್ಯ ಪೂರ್ತಿ ಬದುಕಲು ಆಯುರ್ವೇದ ಸತ್ವವಾಗಿತ್ತೆಂದು ಹೇಳಿದರು.ಟ್ರಸ್ಟಿನ ಅಧ್ಯಕ್ಷ ಪಿ. ದಯಾಕರ ಅಧ್ಯಕ್ಷತೆ ವಹಿಸಿದ್ದು, ಹಿಂದಿನ ಕಾಲದ ಮಕ್ಕಳು ಹಳ್ಳಿಯಲ್ಲಿ ಆಡುತ್ತಿದ್ದ ಅಡಕೆ ಸೋಗೆಯ ಹಾಳೆಯ ಆಟದ ರೀತಿ ಶಾಲಾ ವಿದ್ಯಾರ್ಥಿ ಪುನೀಶ್‌ನನ್ನು ಹಾಳೆಯಲ್ಲಿ ಕುಳ್ಳಿರಿಸಿ ಎಳೆಯುವ ಮೂಲಕ ತುಳುನಾಡಿನ ಜನಪದ ಆಟಗಳ ಚಿಂತನೆ ಮತ್ತು ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಲಾಯಿತು.

ಈ ಸಂದರ್ಭ 15ನೇ ವರ್ಷದ ನಿನಾದ ನೆನಪು ಮಾಡಲಾಯಿತು. ಕಲ್ಲಾಟ, ಸರಿ ಮುಗುಳಿ ಆಟ ವೇದಿಕೆಯಲ್ಲಿ ನಡೆದರೆ, ಜನಪದ ವಿದ್ವಾಂಸ ವಿಶ್ರಾಂತ ಮುಖ್ಯ ಶಿಕ್ಷಕ ಕೆ.ಕೆ. ಪೇಜಾವರ್ ಅವರು ವಿದ್ಯಾರ್ಥಿಗಳಿಗೆ ಜುಬುಲಿ, ಹುಲಿ ದನ, ಕಾಗೆ ಗಿಳಿ, ಬೇರಿಚೆಂಡು, ಕಬಡ್ಡಿ ಮುಂತಾದ ಆಟಗಳನ್ನು ಆಡಿಸುವ ಮೂಲಕ ಕಾರ್‍ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಕಾರ್‍ಯಕ್ರಮದಲ್ಲಿ 2025ನೇ ಸಾಲಿನ ಅಖಿಲ ಭಾರತ ಮಟ್ಟದ ಮುಕ್ತ ಚಾಂಪಿಯನ್‌ ಷಿಪ್ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಪಾವಂಜೆಯ ಶಿಶಿರ್ ಎಸ್. ಕುಲಾಲ್‌ ಅವರನ್ನು ಅಭಿನಂದಿಸಲಾಯಿತು.

ಪೊಲೀಸ್ ಇಲಾಖೆಯಲ್ಲಿ ಉತ್ತಮ ಕಾರ್‍ಯನಿರ್ವಹಣೆಗಾಗಿ ಕಮಿಷನ್‌ ರಿಂದ ಪುರಸ್ಕರಿಸಲ್ಪಟ್ಟ ಗೀತಾ ಸತೀಶ್ ಕುಲಾಲ್‌ ಇದ್ದರು. ಸಾಮಾಜಿಕ ಮತ್ತು ಧಾರ್ಮಿಕ ಮುಂದಾಳು ಕಡಂಬೋಡಿ ಮಹಾಬಲ ಪೂಜಾರಿ, ಕುಸುಮ ಮಹಾಬಲ ಪೂಜಾರಿ, ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯ ವಿಶ್ರಾಂತ ವಲಯ ಪ್ರಬಂಧಕ ಯಾದವ ದೇವಾಡಿಗ, ಶಾಲಾ ಮುಖ್ಯೋಪಾಧ್ಯಾಯಿನಿ ಗುಣವತಿ ರಮೇಶ್, ಸಾಹಿತಿ ಅನುರಾಧಾ ಕಡಂಬೋಡಿ, ರಾಜಾರಾಮ ಸಾಲ್ಯಾನ್ , ಪಾವಂಜೆಯ ಹಿರಿಯ ಕೃಷಿಕ ರಮೇಶ್ ದೇವಾಡಿಗ, ನಿನಾದ ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಚಾಲಕ ಯಶೋದರ ಸಾಲ್ಯಾನ್ , ಅನುರಾಧ ರಾಜೀವ್ ಮತ್ತಿತರರಿದ್ದರು.

ಕೇಂದ್ರದ ಅಧ್ಯಕ್ಷ ಡಾ. ಗಣೇಶ ಅಮೀನ್ ಸಂಕಮಾರ್ ಸ್ವಾಗತಿಸಿದರು. ಜಯಂತಿ ಸಂಕಮಾರ್ ವಂದಿಸಿದರು. ಅನು ಧೀರಜ್ ಮತ್ತು ಭವ ಸಂಕಮಾರ್‌ ನಿರೂಪಿಸಿದರು.