ಉಪ್ಪಿನಂಗಡಿಯ ನೇತ್ರಾವತಿ ನದಿಯ ಒಡಲು ಬರಿದು

| Published : May 14 2024, 01:01 AM IST

ಸಾರಾಂಶ

ಭಾನುವಾರ ಸಂಜೆ ಸುಮಾರು 1 ಗಂಟೆ ಕಾಲ ಸಿಡಿಲು ಸಹಿತ ಭಾರೀ ಮಳೆ ಸುರಿದಿದ್ದು, ಸೋಮವಾರ ನಸುಕಿನಲ್ಲಿಯೂ ಉಪ್ಪಿನಂಗಡಿ ಪರಿಸರದಲ್ಲಿ ಭಾರೀ ಗಾಳಿ ಮಳೆ ಸುರಿದಿದೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ತೀವ್ರಗೊಂಡಿರುವ ಬಿಸಿಲ ಬೇಗೆಯ ನಡುವೆ ಅಲ್ಲಲ್ಲಿ ಮಳೆ ಸುರಿಯುತ್ತಿದ್ದರೂ ಮಂಗಳೂರಿಗೆ ಕುಡಿಯುವ ನೀರು ಒದಗಿಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಲಭ್ಯತೆ ಕುಸಿದಿದೆ. ಬಿಳಿಯೂರು ಅಣೆಕಟ್ಟಿನಿಂದ ಸೋಮವಾರದಂದು ಪೂರ್ಣ ಪ್ರಮಾಣದಲ್ಲಿ ನೀರನ್ನು ಹರಿದು ಬಿಟ್ಟ ಪರಿಣಾಮ ಹಿನ್ನೀರು ತಿಂಬಿಕೊಂಡಿದ್ದ ಉಪ್ಪಿನಂಗಡಿಯ ನೇತ್ರಾವತಿ ನದಿಯ ಒಡಲು ಬರಿದಾಗಿದೆ.

ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಸಣ್ಣ ನೀರಾವತಿ ಇಲಾಖಾ ಎಂಜಿನಿಯರ್‌ ಶಿವಪ್ರಸನ್ನ, ಬಿಳಿಯೂರು ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರನ್ನು ಹರಿಯ ಬಿಡಬೇಕೆಂದು ಜಿಲ್ಲಾಡಳಿತದಿಂದ ನಿರ್ದೇಶನ ಬಂದಿದ್ದು, ಸೋಮವಾರದಂದು ಎಲ್ಲ ಗೇಟುಗಳನ್ನು ತೆರೆಯಲಾಗಿದೆ. ಅಣೆಕಟ್ಟಿನಲ್ಲಿ ಸಂಗ್ರಹವಾಗಿದ್ದ ನೀರು ಸಂಪೂರ್ಣ ಹರಿದು ಹೋಗಿ ಬರಿದಾಗಿದೆ. ಮುಂಬರುವ ಮಳೆಗಾಲದ ಕಾರಣಕ್ಕೆ ಮತ್ತೆ ಗೇಟುಗಳನ್ನು ಅಳವಡಿಸಲಾಗುವುದಿಲ್ಲ. ಇನ್ನು ಏನಿದ್ದರೂ ಮಳೆಯ ನೀರನ್ನು ಅವಲಂಬಿಸಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಬೇಕು ಎಂದು ತಿಳಿಸಿದ್ದಾರೆ.

ಭಾನುವಾರ ಸಂಜೆ ಸುಮಾರು 1 ಗಂಟೆ ಕಾಲ ಸಿಡಿಲು ಸಹಿತ ಭಾರೀ ಮಳೆ ಸುರಿದಿದ್ದು, ಸೋಮವಾರ ನಸುಕಿನಲ್ಲಿಯೂ ಉಪ್ಪಿನಂಗಡಿ ಪರಿಸರದಲ್ಲಿ ಭಾರೀ ಗಾಳಿ ಮಳೆ ಸುರಿದಿದೆ.