ಸಾರಾಂಶ
ಮದ್ದೂರು : ಅಭಿವೃದ್ಧಿ ಪರ ಇರದ, ಪಕ್ಷ ಮತ್ತು ರಾಜಕಾರಣಿಗಳಿಗೆ ಮನ್ನಣೆ ನೀಡದ ಜಿಲ್ಲೆಯ ಜನರು ಕೇವಲ ಟಾಟಾ ಮಾಡಿ ಹೋಗುವವರನ್ನು ಬೆಂಬಲಿಸುತ್ತಿರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.
ಪಟ್ಟಣದಲ್ಲಿ ಸರ್ಕಾರಿ ನೌಕರರ ಸಂಘ ಮಾಜಿ ಅಧ್ಯಕ್ಷ ಸಿ.ರಾಜು ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯ ಜಿಲ್ಲೆಯ ಜನರು ಅಭಿವೃದ್ಧಿಯನ್ನು ಯಾರು, ಯಾವ ಪಕ್ಷ ಮಾಡುತ್ತಿದೆ ಎನ್ನುವುದನ್ನು ಸೂಕ್ತವಾಗಿ ಗಮನಿಸಬೇಕು. ಇದರಿಂದ ಹೆಚ್ಚಿನ ಮನ್ನಣೆ ದೊರಕುತ್ತದೆ ಹೇಳಿದರು.
ಅಭಿವೃದ್ಧಿಗೆ ಒಬ್ಬ ರಾಜಕಾರಣಿ ಹತ್ತಿರ ಬೇಡಿಕೆ ಇಟ್ಟು, ಚುನಾವಣೆಯಲ್ಲಿ ಮತ್ತೊಬ್ಬ ರಾಜಕಾರಣಿಗೆ ಜನರು ಬೆಂಬಲ ನೀಡುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಇನ್ನು ಮುಂದಾದರೂ ನಾಟಕ ಮಾಡುವ ಹಾಗೂ ದೂರದಿಂದ ಕೈಬೀಸಿ ಟಾಟಾ ಮಾಡುವ ರಾಜಕಾರಣಿಗಳಿಗೆ ಮನ್ನಣೆ ನೀಡದೆ ಅಭಿವೃದ್ಧಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ಆಯ್ಕೆ ಸಿಎಂ, ಡಿಸಿಎಂಗೆ:
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಉಪ ಚುನಾವಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಸ್ಪರ್ಧಿಸಲು ಮೂವರು ಆಕಾಂಕ್ಷಿತ ಅಭ್ಯರ್ಥಿಗಳು ಇದ್ದು, ಒಂದು ವಾರದಲ್ಲಿ ಪೂರ್ಣಗೊಳಿಸುತ್ತೇವೆ ಎಂದರು.
ಈ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗೀಗೌಡ, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ತಾಪಂ ಮಾಜಿ ಸದಸ್ಯ ಕೆ.ಆರ್. ಮಹೇಶ್, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಟಿ. ದಿವಾಕರ, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಅಮರ್ಬಾಬು ಇದ್ದರು.
ಮೈಷುಗರ್ಗೆ ಕಾಯಕಲ್ಪ, ಕೃಷಿ ವಿವಿ, ವಿಸಿ ಅಚ್ಚುಕಟ್ಟು ಆಧುನೀಕರಣ ಮುಂದಿರುವ ಯೋಜನೆಗಳು
ಮದ್ದೂರು: ಮೈಷುಗರ್ಗೆ ಕಾಯಕಲ್ಪ, ಕೃಷಿ ವಿಶ್ವವಿದ್ಯಾಲಯ, ವಿ.ಸಿ. ನಾಲೆ ಅಚ್ಚುಕಟ್ಟು ಸಂಪೂರ್ಣ ಆಧುನೀಕರಣ, ರಸ್ತೆಗಳ ಅಭಿವೃದ್ಧಿ ಇವು ನಮ್ಮ ಮುಂದಿರುವ ಯೋಜನೆಗಳಾಗಿವೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಷುಗರ್ನಲ್ಲಿ ನಿತ್ಯ 5 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯವನ್ನು ಮೊದಲು ವೃದ್ಧಿಸಬೇಕು. ನಂತರ 10 ಸಾವಿರ ಟನ್ ಕಬ್ಬು ಅರೆದು, ಶಾಶ್ವತವಾಗಿ ಕಾರ್ಖಾನೆ ನಡೆಯುವಂತಾಗಬೇಕು ಎಂದರು.
ಕೆ.ಎಂ.ದೊಡ್ಡಿ, ಕೊಪ್ಪ, ಪಾಂಡವಪುರ, ಕೆ.ಆರ್.ಪೇಟೆಯಲ್ಲಿನ ಕಾರ್ಖಾನೆಗಳಿಗಿಂತ ಹೆಚ್ಚಾಗಿ ರೈತರಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದೇವೆ. ಜೊತೆಗೆ ವಿಸಿ ಫಾರಂನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ವರದಿ ಬಂದಿದೆ. ತಿಂಗಳಾಂತ್ಯದೊಳಗೆ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದರು.
ವಿ.ಸಿ. ಅಚ್ಚುಕಟ್ಟು ನಾಲಾ ಸಂಪೂರ್ಣ ಆಧುನೀಕರಣ ಮಾಡಲಾಗುವುದು. ಇದರಿಂದ ಮದ್ದೂರು ಮತ್ತು ಮಳವಳ್ಳಿ ಕೊನೇ ಭಾಗಕ್ಕೆ ನೀರು ತಲುಪಿಸಲು ಸಾಧ್ಯ. ಇಲ್ಲದಿದ್ದರೆ ಈ ಭಾಗದವರು ನಿರಂತರವಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಜಿಲ್ಲೆಯ ರಸ್ತೆಗಳನ್ನು 350 ಕೋಟಿ ರು. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.