ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಹೊಸ ಸಮಿತಿ ಆಯ್ಕೆ

| Published : Jun 22 2025, 11:47 PM IST

ಸಾರಾಂಶ

ಒಕ್ಕಲಿಗ ಸಮುದಾಯ ಇಂದು ಸಂಘಟಿತರಾಗಿ ಹೋರಾಟ ಮಾಡುವ ಅಗತ್ಯವಿದೆ. ಹೊಸ ಕಮಿಟಿ ಸದೃಢವಾಗಿ ಕಾರ್ಯ ನಿರ್ವಹಿಸಿ ಸಮುದಾಯದ ಹಕ್ಕು, ಕಲ್ಯಾಣ ಹಾಗೂ ಒಗ್ಗಟ್ಟು ಕಾಪಾಡಬೇಕು ಎಂದು ಹೇಳಿದ ಅವರು, ಶಿಡ್ಲಘಟ್ಟ ತಾಲೂಕಿನಲ್ಲಿ ಹೊಸ ಸಮಿತಿಯನ್ನು ರಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ತಾಲೂಕಿನ ಒಕ್ಕಲಿಗ ಸಮುದಾಯದ ಪ್ರಮುಖರು ಶಿಡ್ಲಘಟ್ಟ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಶಿಡ್ಲಘಟ್ಟ ತಾಲೂಕು ಹೊಸ ಸಮಿತಿಯನ್ನು ಆಯ್ಕೆ ಮಾಡಿದ್ದಾರೆ.

ಮೂರು ವರ್ಷಗಳ ಹಿಂದೆ ಸ್ಥಾಪನೆಯಾದ ಈ ಸಂಘಟನೆ ನಿರೀಕ್ಷೆಯಂತೆ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಹಳೆಯ ಸಮಿತಿಯನ್ನು ರದ್ದುಗೊಳಿಸಿ, ಹೊಸ ತಂಡವನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ನೆಲಮಂಗಲ ಮಧುಸೂದನ್, ಕಾರ್ಯಾಧ್ಯಕ್ಷ ಮಧುಸೂದನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಆರ್. ಲಕ್ಷ್ಮಣ್, ಖಜಾಂಚಿ ಮಡಿಕೇರಿ ಪೊನ್ನಪ್ಪ ಹಾಗೂ ಸಹ ಕಾರ್ಯದರ್ಶಿ ವೆಂಕಟೇಶ್ ಎಚ್.ವಿ. ಸೇರಿದಂತೆ ಹಲವರು ಉಪಸ್ಥಿತರಿದ್ದು, ಇವರ ನೇತೃತ್ವದಲ್ಲಿ ತಾಲೂಕು ಮಟ್ಟದ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಶಿಡ್ಲಘಟ್ಟ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಶೆಟ್ಟಹಳ್ಳಿ ದೇವಕೃಷ್ಣಪ್ಪ ಅವರು ತಾಲೂಕು ಅಧ್ಯಕ್ಷರಾಗಿ, ಭಕ್ತರಹಳ್ಳಿ ಕೋಟೆ ಚೆನ್ನೇಗೌಡ ಗೌರವಾಧ್ಯಕ್ಷರಾಗಿ, ದೊಣ್ಣಹಳ್ಳಿ ರಮೇಶ್ ಉಪಾಧ್ಯಕ್ಷರಾಗಿ, ಎಸ್.ಎಂ. ರವಿಪ್ರಕಾಶ್ ಪ್ರಧಾನ ಕಾರ್ಯದರ್ಶಿಯಾಗಿ, ದೇವೇನಹಳ್ಳಿ ನಂಜೇಗೌಡ ಕಾರ್ಯದರ್ಶಿಯಾಗಿ, ದೊಣ್ಣಹಳ್ಳಿ ಕಿಶೋರ್ ಕುಮಾರ್ ಖಜಾಂಚಿಯಾಗಿ, ಜಯಂತಿ ಗ್ರಾಮದ ಬೈರೇಗೌಡ, ಚೌಡಸಂದ್ರ ಶ್ರೀನಿವಾಸ್ ಮತ್ತು ಲೋಕೇಶ್ ಸಹ ಕಾರ್ಯದರ್ಶಿಗಳಾಗಿ ಆಯ್ಕೆಯಾದರು. ನಿರ್ದೇಶಕರಾಗಿ ಬಿ.ಕೆ. ಮುನಿ ಕೆಂಪಣ್ಣ, ಚೌಡಸಂದ್ರ ಶ್ರೀಧರ್, ಶೆಟ್ಟಹಳ್ಳಿ ಮುನಿರಾಜು ಹಾಗೂ ನಾಗರಾಜ್ ನೇಮಕಗೊಂಡರು.

ರಾಜ್ಯಾಧ್ಯಕ್ಷ ಮಧುಸೂದನ್ ಮಾತನಾಡಿ, ಒಕ್ಕಲಿಗ ಸಮುದಾಯ ಇಂದು ಸಂಘಟಿತರಾಗಿ ಹೋರಾಟ ಮಾಡುವ ಅಗತ್ಯವಿದೆ. ಹೊಸ ಕಮಿಟಿ ಸದೃಢವಾಗಿ ಕಾರ್ಯ ನಿರ್ವಹಿಸಿ ಸಮುದಾಯದ ಹಕ್ಕು, ಕಲ್ಯಾಣ ಹಾಗೂ ಒಗ್ಗಟ್ಟು ಕಾಪಾಡಬೇಕು ಎಂದು ಹೇಳಿದ ಅವರು, ಶಿಡ್ಲಘಟ್ಟ ತಾಲೂಕಿನಲ್ಲಿ ಹೊಸ ಸಮಿತಿಯನ್ನು ರಚಿಸಲಾಗಿದೆ ಎಂದರು.

ನೂತನ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಶೆಟ್ಟಹಳ್ಳಿ ದೇವಕೃಷ್ಣಪ್ಪ ಮಾತನಾಡಿ, ತಾಲೂಕಿನ ಎಲ್ಲಾ ಹಳ್ಳಿಗಳಲ್ಲೂ ಸಮಿತಿಯನ್ನು ಬಲಪಡಿಸಲಾಗುವುದು. ಹೆಚ್ಚಿನ ಸದಸ್ಯರನ್ನು ಸೇರಿಸಿ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಸಂಘಟನೆ ಮುಂಚೂಣಿಯಲ್ಲಿರಲಿದೆ. ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್.ಎಂ. ರವಿಪ್ರಕಾಶ್ ಮಾತನಾಡಿ, ನೂತನ ತಂಡ ಗ್ರಾಮಮಟ್ಟದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವತ್ತ ಗಮನ ಹರಿಸುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉದ್ಯೋಗಾವಕಾಶ, ಹಕ್ಕುಗಳ ರಕ್ಷಣೆ ಮೊದಲಾದ ವಿಷಯಗಳಿಗೆ ವಿಶೇಷ ಒತ್ತು ನೀಡಲಾಗುವುದು ಎಂದರು.

ಸಭೆಯಲ್ಲಿ ಎಲ್ಲ ಹೊಸ ಪದಾಧಿಕಾರಿಗಳು ಸಂಘಟನೆಯ ಯಶಸ್ಸಿಗೆ ಸಂಪೂರ್ಣ ಬದ್ಧರಾಗಿರುವುದಾಗಿ ಘೋಷಿಸಿದರು.