ಸಾರಾಂಶ
ನೂತನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಕಚೇರಿಗೆ ಬರುವುದಕ್ಕೂ ಮೊದಲು ನಗರದಲ್ಲಿರುವ ಅಧಿದೇವತೆ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ನಂತರ ತಮ್ಮ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದರು. ನೂತನ ಡೀಸಿ ಕೆ.ಎಸ್. ಲತಾಕುಮಾರಿ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ತಂದೆ- ತಾಯಿ ಅವರ ಉಪಸ್ಥಿತಿಯಲ್ಲಿ ಉನ್ನತ ಹುದ್ದೆಯ ಅಧಿಕಾರ ಸ್ವೀಕರಿಸಿರುವುದು ತುಂಬ ಸಂತೋಷ ತಂದಿದೆ. ತಂದೆ ಅವರಿಂದ ಹಸಿರು ಇಂಕಿನ ಪೆನ್ನು ಪಡೆದು ಸಿಟಿಸಿಗೆ ಸಹಿ ಮಾಡಿದ್ದು, ನಾನು ಉನ್ನತ ಹುದ್ದೆಗೇರುವುದು ನಮ್ಮ ತಂದೆ ಅವರ ಕನಸ್ಸಾಗಿತ್ತು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಗೆ ಗುರುವಾರ ಆಗಮಿಸಿದ ನೂತನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಕಚೇರಿಗೆ ಬರುವುದಕ್ಕೂ ಮೊದಲು ನಗರದಲ್ಲಿರುವ ಅಧಿದೇವತೆ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ನಂತರ ತಮ್ಮ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದರು.ನೂತನ ಡೀಸಿ ಕೆ.ಎಸ್. ಲತಾಕುಮಾರಿ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ತಂದೆ- ತಾಯಿ ಅವರ ಉಪಸ್ಥಿತಿಯಲ್ಲಿ ಉನ್ನತ ಹುದ್ದೆಯ ಅಧಿಕಾರ ಸ್ವೀಕರಿಸಿರುವುದು ತುಂಬ ಸಂತೋಷ ತಂದಿದೆ. ತಂದೆ ಅವರಿಂದ ಹಸಿರು ಇಂಕಿನ ಪೆನ್ನು ಪಡೆದು ಸಿಟಿಸಿಗೆ ಸಹಿ ಮಾಡಿದ್ದು, ನಾನು ಉನ್ನತ ಹುದ್ದೆಗೇರುವುದು ನಮ್ಮ ತಂದೆ ಅವರ ಕನಸ್ಸಾಗಿತ್ತು ಎಂದು ತಿಳಿಸಿದರು.
ಪ್ರತಿ ವರ್ಷ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆಗೆದು ದರ್ಶನ ನೀಡಲಾಗುತ್ತದೆ. ನಾಡಿನ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ. ಜಿಲ್ಲಾಧಿಕಾರಿಯಾಗಿ ನೇಮಕಗೊಂಡಾಗ ವಿಕಿಪೀಡಿಯಾ ಮೂಲಕ ಮಾಹಿತಿ ಪಡೆದು ಇಲ್ಲಿಗೆ ಬಂದಿದ್ದು, ದೇವಸ್ಥಾನದ ಕಿಂಡಿಯಿಂದ ದೇವಿ ನೋಡಬಹುದು ಎಂದುಕೊಂಡಿದ್ದೆನು. ಆದರೆ ಇಲ್ಲಿ ಕಠಿಣ ನಿಯಮಗಳಿವೆ ಎಂಬುದು ಈಗ ತಿಳಿದಿದೆ. ದೇವರಲ್ಲಿ ಒಂದು ನಂಬಿಕೆ. ಅಮ್ಮನ ಆಶೀರ್ವಾದ ಪಡೆದು ಜಿಲ್ಲೆಯಲ್ಲಿ ಒಳ್ಳೆಯ ಕೆಲಸ ಮಾಡಲು ಮೊದಲ ಹೆಜ್ಜೆ ಇಟ್ಟಿದ್ದೇನೆ ಎಂದರು. ಡೀಸಿ ಆಗುವುದು ಐಎಎಸ್ ಆದ ಎಲ್ಲರ ಕನಸು, ಅಂತಹ ಅವಕಾಶ ಹಾಸನ ಜಿಲ್ಲೆಯಲ್ಲಿ ನನಗೆ ಸಿಕ್ಕಿದೆ. ಇದು ನನ್ನ ಅದೃಷ್ಟ. ಹಾಸನಾಂಬೆ ಆಶೀರ್ವಾದದಿಂದ ಸಂವಿಧಾನದ ನಿಯಮದಂತೆ ಪ್ರಾಮಾಣಿಕತೆ, ನಿಷ್ಠೆಯಿಂದ ಕೆಲಸ ಮಾಡುವೆನು. ತಿರುಪತಿಯಂಥ ಸ್ಥಳದಲ್ಲಿ ಲಕ್ಷ ಲಕ್ಷ ಜನರು ಬರ್ತಾರೆ. ಇಲ್ಲಿಯೂ ಭಕ್ತರು ಸುಗಮವಾಗಿ ಹಾಸನಾಂಬೆ ದರ್ಶನ ವ್ಯವಸ್ಥೆಗಾಗಿ ಪ್ರಯತ್ನಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಉಪವಿಭಾಗಾಧಿಕಾರಿ ಮಾರುತಿ, ತಹಸೀಲ್ದಾರ್ ಸೇರಿ ಇತರರು ಉಪಸ್ಥಿತರಿದ್ದರು.