ನೂತನ ಆದಾಯ ತೆರಿಗೆ ಕಾಯ್ದೆ ಸಿಎಗಳಿಗೆ ಮಾರಕ: ಸಂಸದ ಜಿ.ಕುಮಾರ

| Published : Jul 28 2025, 12:30 AM IST

ಸಾರಾಂಶ

ಕೇಂದ್ರ ಸರ್ಕಾರ ಪ್ರಸ್ತುತ ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಕಾಯ್ದೆಗೆ, ತಿದ್ದುಪಡಿಯ ನೂತನ ಆದಾಯ ತೆರಿಗೆ ಕಾಯ್ದೆ-2025 ಜಾರಿ ಸಿದ್ಧತೆ ನಡೆಸಿದೆ. ಈ ಉದ್ದೇಶಿತ ನೂತನ ಆದಾಯ ತೆರಿಗೆ ಕಾಯ್ದೆ ಚಾರ್ಟರ್ಡ್ ಅಕೌಂಟೆಂಟ್ ಸೇವೆಗೆ ಮಾರಕವಾಗಿದೆ ಎಂದು ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ ನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕೇಂದ್ರ ಸರ್ಕಾರ ಪ್ರಸ್ತುತ ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಕಾಯ್ದೆಗೆ, ತಿದ್ದುಪಡಿಯ ನೂತನ ಆದಾಯ ತೆರಿಗೆ ಕಾಯ್ದೆ-2025 ಜಾರಿ ಸಿದ್ಧತೆ ನಡೆಸಿದೆ. ಈ ಉದ್ದೇಶಿತ ನೂತನ ಆದಾಯ ತೆರಿಗೆ ಕಾಯ್ದೆ ಚಾರ್ಟರ್ಡ್ ಅಕೌಂಟೆಂಟ್ ಸೇವೆಗೆ ಮಾರಕವಾಗಿದೆ ಎಂದು ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ.ಕುಮಾರ ನಾಯಕ ಹೇಳಿದರು.

ನಗರದ ಎಸ್ಡಿಎನ್ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಮತ್ತು ಯಾದಗಿರಿ ಚಾರ್ಟೆಡ್ ಅಕೌಂಟ್ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ್ದ ನೂತನ ಆದಾಯ ತೆರಿಗೆ ಕಾಯ್ದೆ 2025 ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಆದಾಯ ತೆರಿಗೆಯಂತಹ ಮಹತ್ವದ ಕಾಯ್ದೆ ಜಾರಿ ತರುವ ಪೂರ್ವ ಈ ಬಗ್ಗೆ ನುರಿತ ತಜ್ಞರ ಮತ್ತು ಈ ಕ್ಷೇತ್ರದಲ್ಲಿ ಅನುಭವಿಗಳ ಮಧ್ಯೆ ಚರ್ಚೆಗೆ ಕೇಂದ್ರ ಸರ್ಕಾರ ಅವಕಾಶ ನೀಡುವ ಅಗತ್ಯವಿತ್ತು. ಡಿಜಿಟಲ್ ಡಿವೈಸ್ ತಂತ್ರಜ್ಞಾನ ವ್ಯಾಪಾರಿಗಳ ಖಾಸಗಿ ಜೀವನಕ್ಕೆ ಸಂಚಕಾರವಾಗಿದೆ. ನೂತನ ಆದಾಯ ತೆರಿಗೆ ಕಾಯ್ದೆ ಸಾಧಕ-ಬಾಧಕಗಳ ಬಗ್ಗೆ ಚಾರ್ಟರ್ಡ್ ಅಕೌಂಟೆಂಟ್ ಕೂಲಂಕುಶ ಅಧ್ಯಯನ ಮಾಡಿ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಅಂಶಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರೆ ಲೋಕಸಭೆ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಮುಂದೆ ಸವಾಲಿನ ಪ್ರಶ್ನೆ ಮಂಡಿಸಿ ವಿವರಣೆ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಈ ಚರ್ಚಾ ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕ ಚಾರ್ಟರ್ಡ್ ಅಕೌಂಟೆಂಟ್‌ಗಳು, ಡಿಜಿಟಲ್ ತಂತ್ರಜ್ಞಾನ ವೈಯಕ್ತಿಕ ಜೀವನಕ್ಕೆ ಬಾಧಕವಾಗದಂತೆ ಗಮನಿಸಬೇಕು ಮತ್ತು ಚಾರ್ಟರ್ಡ್ ಅಕೌಂಟೆಂಟ್ ವೃತ್ತಿ ಜೀವನದ ಮೇಲೆ ಯಾವುದೇ ಪ್ರಹಾರ ಮಾಡದಂತೆ ತಿದ್ದುಪಡಿ ಪರಿಷ್ಕರಿಸಬೇಕು ಎಂದು ಧ್ವನಿ ಎತ್ತಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಅನೇಕರು ಮಹತ್ವದ ಸಲಹೆಗಳನ್ನು ನೀಡಿದರು. ಕೇಂದ್ರ ಸರ್ಕಾರದ ಮುಂದೆ ಮಂಡಿಸುವ 5 ಪ್ರಶ್ನೆಗಳ ಬಗ್ಗೆ ಈ ಸಭೆಯಲ್ಲಿ ಸುದೀರ್ಘ ಚರ್ಚೆ ಮತ್ತು ಅದಕ್ಕೆ ಪೂರಕ ಮಾಹಿತಿ ಒದಗಿಸಲಾಯಿತು.

ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ದಿನೇಶ್ ಕುಮಾರ ಜೈನ್, ವೆಂಕಟ ಕೃಷ್ಣ, ವಿವೇಕ್‌ ತೊಟ್ಲೂರಕರ್‌ ಮತ್ತು ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಅಕ್ಕಿ ಹಾಗೂ ಯಾದಗಿರಿ ಜಿಲ್ಲೆಯ ವೈಡಿಸಿಸಿಐ ಸದಸ್ಯರು, ಚಾರ್ಟೆಡ್ ಅಕೌಂಟೆಂಟ್ಸ್ ಗಳು, ವಾಣಿಜ್ಯ ವ್ಯಾಪಾರ ಮಳಿಗೆಯ ವ್ಯಾಪಾರಸ್ಥರು, ಸಾರ್ವಜನಿಕರು ಹಾಜರಿದ್ದರು.