ಮಾಲಿನ್ಯ ಮಂಡಳಿಗೆ ಹೊಸ ರೂಪು: ನರೇಂದ್ರ ಸ್ವಾಮಿ

| Published : Jun 05 2025, 01:01 AM IST

ಸಾರಾಂಶ

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಸಂದರ್ಶನ.

- ಮಂಜುನಾಥ ನಾಗಲೀಕರ್ಕನ್ನಡಪ್ರಭ ವಾರ್ತೆ ಬೆಂಗಳೂರು

ಅಭಿವೃದ್ಧಿ ಹೆಸರಲ್ಲಿ ಹತ್ತಾರು ಬಗೆಯ ಯೋಜನೆ ಜಾರಿ, ಹೆಚ್ಚುತ್ತಿರುವ ವಾಹನಗಳ ಬಳಕೆ, ಜಲಮೂಲಗಳ ಒತ್ತುವರಿ ಹಾಗೂ ತ್ಯಾಜ್ಯ ನೀರಿನ ಸೇರ್ಪಡೆಯಿಂದ ಗಾಳಿ, ನೀರು ಮಲಿನವಾಗುತ್ತಿರುವ ಸಂದರ್ಭದಲ್ಲಿ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರ ಕಾಪಾಡುವ ಮಹತ್ವದ ಹೊಣೆಯನ್ನು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹೊತ್ತುಕೊಂಡಿದೆ. ಜೂ.5ರಂದು ನಡೆಯಲಿರುವ ‘ಪರಿಸರ ದಿನಾಚರಣೆ’ ಹಿನ್ನೆಲೆಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ‘ಕನ್ನಡಪ್ರಭ’ದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

-ಮಾಲಿನ್ಯ ನಿಯಂತ್ರಣ ಮಂಡಳಿ ಗಣೇಶ, ದೀಪಾವಳಿ ವೇಳೆ ಮಾತ್ರ ಸಕ್ರಿಯ ಅನ್ನೋ ಭಾವನೆಯಿದೆ. ಅದನ್ನು ಬದಲಿಸಲು ಹೊಸ ಅಧ್ಯಕ್ಷರಾದ ನಿಮ್ಮ ಪ್ಲಾನ್‌ ಏನು?

ಇಲ್ಲ. ಆ ಭಾವನೆ ತಪ್ಪು. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿನಿತ್ಯ ಕೆಲಸ ಮಾಡುತ್ತಿದೆ. ಆದರೆ, ಈ ಎರಡು ಹಬ್ಬದ ಸಂದರ್ಭಗಳಲ್ಲಿ ನಮ್ಮ ಮಂಡಳಿ ಹೆಚ್ಚು ಹೈಲೈಟ್ ಆಗುತ್ತದೆ. ವಾಯುಮಾಲಿನ್ಯ, ಜಲಮಾಲಿನ್ಯ ಸೇರಿ ವಿವಿಧ ಮಾಲಿನ್ಯಗಳ ಕುರಿತು ಮಾದರಿಗಳನ್ನು ನಮ್ಮ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಶಬ್ದ ಮಾಲಿನ್ಯದ ಕುರಿತು ನಿರಂತರವಾಗಿ ಮಾನಿಟರ್ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ತಪ್ಪು ಮಾಡುವ ನಾಗರಿಕರು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ಹೇಗೆ ಎಂಬುದನ್ನು ತೋರಿಸಿಕೊಡುತ್ತೇವೆ.

ಕೈಗಾರಿಕೆ ಮತ್ತು ವಸತಿ ಪ್ರದೇಶಗಳಿಂದ ಜಲ ಮೂಲಗಳಿಗೆ ಈಗಲೂ ತ್ಯಾಜ್ಯ, ಮಲಿನ ನೀರು ಸೇರುತ್ತಿದೆ. ಅದನ್ನು ತಪ್ಪಿಸಲು ಯೋಜನೆಯೇನು?

ಮಾಲಿನ್ಯ ಉಂಟು ಮಾಡುವ ಕೈಗಾರಿಕೆಗಳು, ನಾಗರಿಕರು ಮಾತ್ರವಲ್ಲದೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬಹುದು. ಜೈಲು ಶಿಕ್ಷೆಯು ಆಗುತ್ತದೆ. ಪರಿಸರ ಮಾಲಿನ್ಯಕ್ಕೆ ಶಿಕ್ಷೆಯ ರೂಪದಲ್ಲಿ ಪರಿಹಾರ ಸಂಗ್ರಹಿಸಲು ಅವಕಾಶವಿದೆ. ನಮ್ಮಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಾಲಿನ್ಯವಾಗುತ್ತಿದೆ. ಕೆರೆ, ನದಿ, ಜಲಮೂಲಗಳು ಮಾಲಿನ್ಯವಾಗಲು ಎಲ್ಲರೂ ಕಾರಣವಾಗಿದ್ದಾರೆ. ಹಳ್ಳಿ, ಪಟ್ಟಣ, ನಗರ, ಮಹಾನಗರ ಪ್ರದೇಶಗಳಲ್ಲಿ ಮನೆಗಳಲ್ಲಿ ಬಳಕೆಯಾಗುವ ಶೇ.90ಕ್ಕಿಂತ ಹೆಚ್ಚು ಕೊಳಚೆ ನೀರು ಮೋರಿ, ಒಳಚರಂಡಿಗೆ ಹರಿದು ನೇರವಾಗಿ ಜಲಮೂಲಕ್ಕೆ ಸೇರುತ್ತಿದೆ. ಶುದ್ಧೀಕರಣ ಆಗುತ್ತಿಲ್ಲ. ಹೀಗಾಗಿ, ಜಾಗೃತಿ ಮೂಡಿಸುತ್ತಿದ್ದೇವೆ.

ಮಂಡಳಿಯಲ್ಲಿ ಹೊರಗಿನವರ ಹಸ್ತಕ್ಷೇಪ ಹೆಚ್ಚು ಇದೆ ಅಂತಾರಲ್ಲ?

ಮಂಡಳಿ ತನ್ನ ವ್ಯಾಪ್ತಿಯೊಳಗೆ ಎಲ್ಲ ಕೆಲಸಗಳನ್ನು ನಿಭಾಯಿಸಲು ಸಮರ್ಥವಾಗಿದೆ. ಅದೇ ರೀತಿಯಾಗಿ ಈಗ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಸರ್ಕಾರ ಮೇಲ್ವಿಚಾರಣೆ ಮಾಡುತ್ತಿದೆ. ಅದರ ಜೊತೆ ಹೊರಗಿನವರ ಹಸ್ತಕ್ಷೇಪವೂ ಇದೆ. ಹೀಗಾಗಿ, ಪರಿಸರ ಸಂರಕ್ಷಣೆ ಕೆಲಸಗಳನ್ನು ಸಮರ್ಥವಾಗಿ, ಪರಿಣಾಮಕಾರಿಯಾಗಿ ಮಾಡಲು ಸ್ವಾತಂತ್ರ್ಯ ಬೇಕಿದೆ. ಮಂಡಳಿಗೆ ಸ್ವಾಯತ್ತತೆ ಕೋರಿ ಮುಖ್ಯಮಂತ್ರಿಯವರ ಬಳಿ ಮನವಿ ಮಾಡಿದ್ದೇನೆ. ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.

ಮಂಡಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿ ಕೊರತೆಯಿದೆಯಲ್ಲವೇ?

ಮಂಡಳಿಗೆ ಮಂಜೂರಾಗಿರುವ ಹುದ್ದೆಗಳ ಪೈಕಿ ಶೇ.40ರಷ್ಟು ಮಾತ್ರ ಭರ್ತಿ ಇದ್ದು, ಶೇ.60ರಷ್ಟು ಹುದ್ದೆಗಳು ಖಾಲಿ ಇವೆ. ಇದು ಕೂಡ ಪರಿಣಾಮಕಾರಿ ಕಾರ್ಯ ನಿರ್ವಹಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ, ಒಳಮೀಸಲಾತಿ ಅಂತಿಮಗೊಳ್ಳುತ್ತಿದ್ದಂತೆ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಶೇ.80ರಷ್ಟು ಹುದ್ದೆಗಳನ್ನು ಭರ್ತಿ ಮಾಡುತ್ತೇವೆ.

ಪರಿಸರ ಮಾಲಿನ್ಯದ ಮೇಲೆ ನಿಗಾ, ನಿಯಂತ್ರಣಕ್ಕಾಗಿ ತಂತ್ರಜ್ಞಾನದ ಬಳಸಲಾಗುತ್ತಿದೆಯೇ?

ಅರಣ್ಯ, ಜಲ ಮೂಲಗಳ ಹಿಂದಿನ ಸ್ಥಿತಿ ಮತ್ತು ಪ್ರಸ್ತುತ ಸ್ಥಿತಿ ತಿಳಿಯಲು ಮತ್ತು ತಪ್ಪು ಮಾಡಿರುವವರನ್ನು ಪತ್ತೆ ಮಾಡಲು ಸ್ಯಾಟಲೈಟ್ ಚಿತ್ರಗಳನ್ನು ಬಳಸಲಾಗುತ್ತದೆ. ಈ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಅವಕಾಶವಿದೆ. ತಂತ್ರಜ್ಞಾನದ ಬಳಕೆಯಲ್ಲಿ ಮಂಡಳಿ ದೇಶದಲ್ಲೇ ಮುಂಚೂಣಿಯಲ್ಲಿದೆ.

ಪರಿಸರ ಕುರಿತು ಜಾಗೃತಿ ವಿಚಾರದಲ್ಲಿ ಜನರ ಜವಾಬ್ದಾರಿಗಳು ಏನು?

ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ನಿಯಂತ್ರಣ ವಿಚಾರದಲ್ಲಿ ನಾಗರಿಕರನ್ನು ಒಳಗೊಂಡಂತೆ ಒಂದು ಸಮಾಜವಾಗಿ ಎಲ್ಲರ ಜವಾಬ್ದಾರಿ ಇದೆ. ಆದರೆ, ನಮ್ಮ ಜನತೆಗೆ ಮಾಲಿನ್ಯ ಎಂದರೇನು ಮತ್ತು ಅದರಿಂದಾಗುವ ಅಪಾಯದ ಅರಿವಿನ ಕೊರತೆ ಇದೆ. ಪ್ಲಾಸ್ಟಿಕ್ ಬಳಕೆ, ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ವಿಂಗಡಣೆ, ಸುತ್ತಲಿನ ಪರಿಸರ ಸ್ವಚ್ಛವಾಗಿಡುವುದು ನಮ್ಮ ಮಹತ್ವದ ಜವಾಬ್ದಾರಿ.

ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಬಾಲ್ಯದಿಂದಲೇ ಜಾಗೃತಿಗೆ ಕ್ರಮಗಳೇನು?

ಶಾಲಾ ಹಂತದಲ್ಲೇ ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಶಾಲಾ ಪಠ್ಯದಲ್ಲಿ ಮಾಲಿನ್ಯ, ಪರಿಸರ ಸಂರಕ್ಷಣೆ ಕುರಿತು ವಿಶೇಷ ಪಾಠ ಸೇರ್ಪಡೆ ಮಾಡಬೇಕು. ಪರಿಸರಕ್ಕೆ ಆದ್ಯತೆ ನೀಡುವ ವಿಶೇಷ ಪಾಠ ಸೇರ್ಪಡೆ ಮಾಡಲು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ. ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.

+++

ಸಚಿವರಾಗಬೇಕಿದ್ದವರು ನೀವು? ಈಗ ಮಂಡಳಿಯೊಂದರ ಅಧ್ಯಕ್ಷರಾಗಿದ್ದೀರಿ, ಮುಂದೆ?ಹೌದು, ನಾನು ಸಚಿವ ಸ್ಥಾನದ ಆಕಾಂಕ್ಷಿ. ಎರಡು ಬಾರಿ ನಾನು ಸಚಿವನಾಗುವ ಅವಕಾಶ ತಪ್ಪಿಸಿಕೊಂಡಿದ್ದೇನೆ. ಈ ಬಾರಿಯೂ ಸಚಿವ ಸ್ಥಾನ ಬಯಸಿದ್ದೆ. ಆದರೆ, ಮುಖ್ಯಮಂತ್ರಿಯವರು ಹಾಗೂ ಪಕ್ಷದ ನಾಯಕತ್ವ ಈ ಜವಾಬ್ದಾರಿ ನೀಡಿದರು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನು ಇದನ್ನು ನಿರ್ವಹಿಸುತ್ತಿದ್ದೇನೆ. ನೋಡಿ, ಮಂಡ್ಯ ಜಿಲ್ಲೆಯಲ್ಲಿ ರಾಜಕಾರಣ ಮಾಡುವುದು ಸುಲಭವಲ್ಲ. ಹೀಗಾಗಿ, ಏಳು-ಬೀಳುಗಳೊಂದಿಗೆ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದೇನೆ. ಈಗಾಗಲೇ ಎರಡು ಬಾರಿ ನನಗೆ ಸಚಿವ ಸ್ಥಾನ ಕೈತಪ್ಪಿದೆ. ಮುಂದೆ ಸಚಿವ ಸ್ಥಾನ ದೊರೆಯುವ ವಿಶ್ವಾಸ ನನಗೆ ಇದೆ.