ಅಗಲಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಆವರಣದಲ್ಲಿ ಸಜ್ಜುಗೊಳಿಸಲಾದ ನೂತನ ಕ್ರೀಡಾಂಗಣ

ಕನ್ನಡಪ್ರಭ ವಾರ್ತೆ ತುಮಕೂರುಸಾಹೇ ವಿವಿಯಲ್ಲಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ವಿವಿಧ ಕ್ರೀಡೆಗಳ ತರಬೇತಿಗೆ ಅನುಕೂಲವಾಗುವಂತೆ ನಿರ್ಮಿಸಲಾದ ಸುಸಜ್ಜಿತ ಸಿಂಥೆಟಿಕ್ ಬಾಸ್ಕೆಟ್ ಬಾಲ್ ಕ್ರೀಡಾಂಗಣವನ್ನು ಸೋಮವಾರ ಉದ್ಘಾಟಿಸಲಾಯಿತು. ನಗರದ ಸಮೀಪದ ಅಗಲಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಆವರಣದಲ್ಲಿ ಸಜ್ಜುಗೊಳಿಸಲಾದ ನೂತನ ಕ್ರೀಡಾಂಗಣವನ್ನು ಸಾಹೇ ವಿವಿ ಕುಲಾಧಿಪತಿಗಳ ಸಲಹೆಗಾರ ಡಾ. ವಿವೇಕ್ ವೀರಯ್ಯ ಅವರು ಉದ್ಘಾಟಿಸಿದರು. ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಸಾನಿಕೊಪ್ಪ ಮಾತನಾಡಿ, ದೈಹಿಕ ಕಾರ್ಯಕ್ರಮತೆಯನ್ನು ಹೆಚ್ಚಿಸಲು ಕ್ರೀಡೆ ಅವಶ್ಯಕವಾಗಿದೆ. ಸೋಲು ಗೆಲುವುಗಳನ್ನು ಪರಿಗಣಿಸದೆ ನಿರಂತರವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಜೊತೆಗೆ ಕೈಜೋಡಿಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನ ಆಯೋಜಿಸುವ ಮೂಲಕ ಸಹಕಾರ, ಸೌಲಭ್ಯಗಳನ್ನು ನೀಡುತ್ತಿವೆ. ಸಾಹೇ ಕುಲಾಧಿಪತಿಗಳಾದ ಡಾ. ಜಿ. ಪರಮೇಶ್ವರ್ ಸ್ವತಃ ಅಥ್ಲೆಟಿಕ್ ಕ್ರೀಡಾಪಟುವಾಗಿದ್ದು, ಅವರ ಆಶಯದಂತೆ ವಿದ್ಯಾರ್ಥಿಗಳ ಕ್ರೀಡಾ ತರಬೇತಿಗೆ ಅನುಕೂಲವಾಗುವಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಂತಲಾ ರಾಜಣ್ಣ ಮಾತನಾಡಿ, ಇಂದಿನ ಕ್ರೀಡೆಗಳಲ್ಲಿ ಹೆಚ್ಚಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಂಡು ಬರುತ್ತಿರುವುದು ಶ್ಲಾಘನೀಯವಾಗಿದೆ. ದೇಸಿ ಕ್ರೀಡೆಗಳ ಜೊತೆ ಜೊತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಹೆಣ್ಣುಮಕ್ಕಳು ಇತ್ತೀಚೆಗೆ ಸಾಧಿಸಿರುವ ಸಾಧನೆಗಳು ಅಮೋಘವಾಗಿದೆ. ಈ ನಿಟ್ಟಿನಲ್ಲಿ ಡಾ.ಜಿ ಪರಮೇಶ್ವರ್ ಅವರು ತುಮಕೂರು ಜಿಲ್ಲೆಯಲ್ಲಿ ಆಯೋಜಿಸಿರುವ ಕರ್ನಾಟಕ ಕ್ರೀಡೋತ್ಸವ ಕ್ರೀಡಾ ಸಾಧಕರಿಗೆ ಬೆಂಬಲವಾಗಿ ಬಂದೊದಗಿದೆ ಎಂದು ತಿಳಿಸಿದರು. ಸಂದರ್ಭದಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಪ್ರಭಾಕರ್, ಪ್ರಾಧ್ಯಾಪಕರುಗಳಾದ ಡಾ. ನಂದಿನಿ, ಡಾ. ಚಂದ್ರಶೇಖರ್, ಕ್ರೀಡೋತ್ಸವದ ನೋಡಲ್ ಅಧಿಕಾರಿ ಸಂದೇಶ್ ಎಂ.ಎಸ್ , ಬಾಸ್ಕೆಟ್ ಬಾಲ್ ಟೆಕ್ನಿಕಲ್ ಕಮಿಟಿಯ ಅಧ್ಯಕ್ಷ ಎಸ್ ವೆಂಕಟೇಶ್ , ಸಾಹೇ ವಿವಿ ದೈಹಿಕ ಶಿಕ್ಷಣ ನಿರ್ದೇಶಕರಾದ ಶಶಿಕುಮಾರ್, ಮತ್ತು ವಿವಿಧ ತಂಡಗಳ ವ್ಯವಸ್ಥಾಪಕರು ಮತ್ತು ತರಬೇತುದಾರರು, ಕ್ರೀಡಾಪಟುಗಳು ಉಪಸ್ಥಿತರಿದ್ದರು. ಸಾಹೇ ವಿವಿಯ ನೂತನ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡೋತ್ಸವದ ಬಾಸ್ಕೆಟ್ ಬಾಲ್‌ನ ೮ ಪಂದ್ಯಗಳು ಮುಖಾ ಮುಖಿಯಾದವು.