ಕನ್ನಡಪ್ರಭ ವಾರ್ತೆ ಚಿತ್ರದುರ್ಗ
2027ರ ಏಪ್ರಿಲ್ನಿಂದ ಹೊಸ ತೆರಿಗೆ ಕಾಯ್ದೆ ಜಾರಿಗೆ ಬರಲಿದ್ದು ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆ ಬಲಪಡಿಸಲು ಮತ್ತು 2047ರ ವೇಳೆಗೆ ಅಮೃತ ಕಾಲದ ಗುರಿ ತಲುಪಲು ಈ ತೆರಿಗೆ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಹೆಚ್ಚುವರಿ ಆದಾಯ ತೆರಿಗೆ ಅಧಿಕಾರಿ ರಾಮನಾಥನ್ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆದಾಯ ತೆರಿಗೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹೊಸ ಆದಾಯ ತೆರಿಗೆ ಕಾಯ್ದೆ-2025 ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದೇಶದ ಸರ್ವತೋಮುಖ ಪ್ರಗತಿಯಲ್ಲಿ ಪ್ರತಿಯೊಬ್ಬ ತೆರಿಗೆದಾರರ ಪಾತ್ರವೂ ಅತ್ಯಂತ ಪ್ರಮುಖವಾಗಿದೆ. ಭಾರತ ಸರ್ಕಾರವು ಸುಲಭ ತೆರಿಗೆ ವ್ಯವಸ್ಥೆ ಜಾರಿಗೆ ತರುವ ಮೂಲಕ ತೆರಿಗೆ ಸುಧಾರಣೆಗೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ದೇಶದಲ್ಲಿ ‘ಸುಲಭ ವ್ಯಾಪಾರ ಮತ್ತು ಜೀವನ ನಿರ್ವಹಣೆ'''''''' ಉತ್ತೇಜಿಸಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ ತೆರಿಗೆ ಸುಧಾರಣೆಗಳನ್ನು ತರುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದರು.
ಸುಮಾರು 60ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ‘ಆದಾಯ ತೆರಿಗೆ ಕಾಯ್ದೆ 1961’ರ ಅಡಿಯಲ್ಲಿ ಹಲವು ತಿದ್ದುಪಡಿಗಳು, ಕೋರ್ಟ್ ಪ್ರಕರಣಗಳು ಹಾಗೂ ಜಟಿಲ ನಿಯಮಗಳು ಸೃಷ್ಠಿಯಾಗಿದ್ದವು. ಇದರಿಂದಾಗಿ ತೆರಿಗೆದಾರರಲ್ಲಿ ಗೊಂದಲ ಹಾಗೂ ವ್ಯಾಜ್ಯಗಳು ಹೆಚ್ಚಾಗಿದ್ದವು. ಇವೆಲ್ಲವನ್ನೂ ಸರಳಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಮುಖ ಉದ್ಯಮಿಗಳು, ತೆರಿಗೆದಾರರು ಹಾಗೂ ವಾಣಿಜ್ಯ ಸಂಘಟನೆಗಳ ಜತೆ ಸುದೀರ್ಘ ಚರ್ಚೆ ನಡೆಸಿ, ಅವರ ಸಲಹೆಗಳನ್ನು ಆಲಿಸಿದೆ. ಇದು ಮುಂಬರುವ ಏಪ್ರಿಲ್ ತಿಂಗಳಿನಿಂದ ಅನುಷ್ಠಾನಕ್ಕೆ ಬರಲಿದೆ ಎಂದರು.ದಾವಣಗೆರೆ ಆದಾಯ ತೆರಿಗೆ ಇಲಾಖೆ ಅಧಿಕಾರಿ ಸುಬ್ಬರಾಜ್ ಮಾತನಾಡಿ, ಆದಾಯ ತೆರಿಗೆ ಇಲಾಖೆ ಎಂದರೆ ಜನರು ಹೆದರಬೇಕಾಗಿಲ್ಲ. ಫ್ಯಾಮಿಲಿ ಡಾಕ್ಟರ್ ನಮ್ಮ ಇಡೀ ಆರೋಗ್ಯದ ಇತಿಹಾಸ ತಿಳಿದುಕೊಂಡು ಸೂಕ್ತ ಚಿಕಿತ್ಸೆ ನೀಡುವಂತೆ, ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಆರ್ಥಿಕ ಆರೋಗ್ಯ ಕಾಯುತ್ತದೆ ಹಾಗೂ ತಪ್ಪುಗಳಿದ್ದರೆ ಮುನ್ಸೂಚನೆ ನೀಡಿ ಸರಿಪಡಿಸಲು ನೆರವಾಗುತ್ತದೆ ಎಂದರು.
1961ರ ಆದಾಯ ತೆರಿಗೆ ಕಾಯ್ದೆಗೆ ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ‘ಆದಾಯ ತೆರಿಗೆ ಕಾಯ್ದೆ-2025'''''''' ಆಗಿ ರೂಪಿಸಲಾಗಿದೆ. ಕಾನೂನಿನ ಕಠಿಣ ಭಾಷೆಯನ್ನು ಸರಳಗೊಳಿಸುವುದು ಹಾಗೂ ತೆರಿಗೆದಾರ ಸ್ನೇಹಿಯಾಗಿಸುವುದು ಈ ಹೊಸ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಟ್ಯಾಕ್ಸ್ ಇಯರ್ 2026-27ರಲ್ಲಿ ಮಾಡುವ ವ್ಯವಹಾರಗಳಿಗೆ ಅದೇ ವರ್ಷದಲ್ಲೇ ರಿಟರ್ನ್ಸ್ ಸಲ್ಲಿಸಬಹುದಾಗಿದ್ದು, ಸಾಮಾನ್ಯ ಜನರಿಗೂ ಇದು ಸುಲಭವಾಗಿ ಅರ್ಥವಾಗಲಿದೆ. ಹೊಸ ಕಾಯ್ದೆಯ ಸೆಕ್ಷನ್ 536(2) ರ ಪ್ರಕಾರ, ಹಳೆಯ ಕಾಯ್ದೆಯಡಿ ಬಾಕಿ ಇರುವ ಯಾವುದೇ ಅಸೆಸ್ಮೆಂಟ್ಗಳು, ಬೇಡಿಕೆಗಳು ಅಥವಾ ಅಪೀಲುಗಳು ಹಳೆಯ ಕಾಯ್ದೆಯ ನಿಯಮಗಳಡಿಯೇ ಮುಂದುವರಿಯಲಿವೆ ಎಂದರು.
ತೆರಿಗೆದಾರರು ಇನ್ಮುಂದೆ ತಮ್ಮ ರಿಟರ್ನ್ಸ್ ಸಲ್ಲಿಸುವಾಗ ಮನೆ ಹಾಗೂ ಕಚೇರಿ ಎರಡೂ ವಿಳಾಸಗಳನ್ನು ನೀಡಲು ಹೊಸ ನಮೂನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.ಚಿತ್ರದುರ್ಗ ಆದಾಯ ತೆರಿಗೆ ಅಧಿಕಾರಿ ಆರ್.ಪಿ.ಕುಮಾರಸ್ವಾಮಿ, ಇನ್ಕಮ್ ಟ್ಯಾಕ್ಸ್ ಪ್ರಾಕ್ಟಿಸ್ ಅಸೋಸಿಯೇಷನ್ನ ತಿಪ್ಪೇಸ್ವಾಮಿ, ಚಾರ್ಟೆಡ್ ಅಕೌಂಟೆಡ್ಗಳಾದ ಕಾರ್ತಿಕ್, ಜಗನ್ನಾಥ್ ಸೇರಿ ತೆರಿಗೆದಾರರು, ಸಾರ್ವಜನಿಕರು ಇದ್ದರು.