ಭಾನುವಾರ ನಗರದ ಆಸ್ಪತ್ರೆಯಿಂದ ಐದು ಆ್ಯಂಬುಲೆನ್ಸ್‌ ಮೂಲಕ ಝಿರೋ ಟ್ರಾಫಿಕ್‌ನಲ್ಲಿ ಹುಬ್ಬಳ್ಳಿಗೆ ರವಾನಿಸಲಾಗಿದೆ. ಮಗು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ

ಕುಕನೂರ/ ಕೊಪ್ಪಳ: ಜನನದ ವೇಳೆಯೇ ಕರುಳು ಹೊರ ಬಂದು ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ ನವಜಾತ ಹಸುಗೂಸನ್ನು ನಗರದ ತಾಯಿ-ಮಕ್ಕಳ ಆಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭಾನುವಾರ ಝಿರೋ ಟ್ರಾಫಿಕ್‌ನಲ್ಲಿ ರವಾನೆ ಮಾಡಲಾಯಿತು.

ಕುಕನೂರು ತಾಲೂಕಿನ ಬೂದಗುಂಪಾದ ಮಲ್ಲಪ್ಪ- ವಿಜಯಲಕ್ಷ್ಮೀ ದಂಪತಿ ಮಗು ಇದು. ವೈದ್ಯಾಧಿಕಾರಿಗಳು ಗರ್ಭಾವಸ್ಥೆಯಲ್ಲಿಯೇ ಮಗುವಿಗೆ ತೊಂದರೆ ಇದೆ ಎಂದಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಈ ಮಗು ಜನಿಸಿದ್ದು, ಅದರ ಕರುಳು ಹೊರಗೆ ಇದ್ದದ್ದು ವೈದ್ಯರನ್ನು ಆಶ್ಚರ್ಯ ಚಕಿತರನ್ನಾಗಿಸಿದೆ. ವೈದ್ಯರು ಕೂಡಲೇ ಆ ಮಗುವನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಉಸಿರಾಟದ ತೊಂದರೆ ಅನುಭವಿಸುತ್ತಿದೆ. ಭಾನುವಾರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಭಾನುವಾರ ನಗರದ ಆಸ್ಪತ್ರೆಯಿಂದ ಐದು ಆ್ಯಂಬುಲೆನ್ಸ್‌ ಮೂಲಕ ಝಿರೋ ಟ್ರಾಫಿಕ್‌ನಲ್ಲಿ ಹುಬ್ಬಳ್ಳಿಗೆ ರವಾನಿಸಲಾಗಿದೆ. ಮಗು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ. ಶಿಶುವನ್ನು ಝಿರೋ ಟ್ರಾಫಿಕ್‌ನಲ್ಲಿ ಸಾಗಿಸಲು ಪೊಲೀಸ್ ಇಲಾಖೆ ಅಗತ್ಯ ವ್ಯವಸ್ಥೆ ಕಲ್ಪಿಸಿತ್ತು.

ಕೊಪ್ಪಳದಿಂದ ಹುಬ್ಬಳ್ಳಿ ಸುಮಾರು 120 ಕಿಮೀ ದೂರವಿದ್ದು, 2 ಗಂಟೆಯ ಪ್ರಯಾಣ. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಹುಬ್ಬಳ್ಳಿ ಕೆಎಂಸಿಆರ್‌ಐಗೆ ದಾಖಲಿಸಲು ನಿರ್ಧರಿಸಲಾಯಿತು. ಅಖಿಲ ಕರ್ನಾಟಕ ಆ್ಯಂಬುಲೆನ್ಸ್ ರೋಡ್ ಸೇಫ್ಟಿ ಸಂಘಟನೆ ಹಾಗೂ ಪೊಲೀಸರ ಸಹಕಾರ ಪಡೆದು ಐದು ಆ್ಯಂಬುಲೆನ್ಸ್‌ಗಳ ಮೂಲಕ ಕೇವಲ ಒಂದೇ ಗಂಟೆಯಲ್ಲಿ ಹುಬ್ಬಳ್ಳಿ ಕೆಎಂಸಿಆರ್‌ಐಗೆ ತಂದು ದಾಖಲಿಸಲಾಗಿದೆ.

ಹೊಟ್ಟೆಯ ಮೇಲ್ಭಾಗದಲ್ಲಿ ಚರ್ಮ ಇಲ್ಲದೇ ಅಂಗಾಂಗಗಳು ಹೊರಭಾಗದಲ್ಲಿ ಕಾಣುತ್ತಿವೆ. ಹೀಗಿರುವುದರಿಂದ ಮಗುವಿಗೆ ಸೋಂಕು (ಇನ್ಫೆಕ್ಷನ್), ಗ್ಯಾಂಗ್ರಿನ್, ನಂಜು ತಗುಲಿದೆ. ನಮ್ಮ ಆಸ್ಪತ್ರೆಯ ವೈದ್ಯರು, ಕೂಡಲೇ ಎಸ್‌ಎನ್‌ಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೆಎಂಸಿಆರ್‌ಐನ ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ತಿಳಿಸಿದ್ದಾರೆ.