ಬೆಳಗ್ಗೆ ನಡೆದಿತ್ತು ಮದುವೆ - ಸಂಜೆ ಮಚ್ಚಿನಿಂದ ಹೊಡೆದಾಡಿಕೊಂಡ ನವ ಜೋಡಿ : ವಧು ಸಾವು

| Published : Aug 08 2024, 01:34 AM IST / Updated: Aug 08 2024, 10:41 AM IST

ಬೆಳಗ್ಗೆ ನಡೆದಿತ್ತು ಮದುವೆ - ಸಂಜೆ ಮಚ್ಚಿನಿಂದ ಹೊಡೆದಾಡಿಕೊಂಡ ನವ ಜೋಡಿ : ವಧು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಲಿಖಿತ ಶ್ರೀ ಮತ್ತು ನವೀನ್ ಕುಮಾರ್‌ರಿಗೆ ಬುಧವಾರ ಬೆಳಗ್ಗೆ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯ ವರ ನವೀನ್‌ಕುಮಾರ್‌ರ ಅಕ್ಕನ ಮನೆಯಲ್ಲಿ ಮದುವೆ ನಡೆದಿತ್ತು. ಮದುವೆ ಸಮಾರಂಭದಲ್ಲಿ ವರನ ತಂದೆ, ತಾಯಿ ಮತ್ತು ವಧುವಿನ ತಂದೆ, ತಾಯಿ ಹಾಗೂ ಕೆಲವು ಸಂಬಂಧಿಕರು ಭಾಗವಹಿಸಿದ್ದರು ಎನ್ನಲಾಗಿದೆ.

 ಕೆಜಿಎಫ್ :  ಬುಧವಾರ ಬೆಳಗ್ಗೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ನೂತನ ವಧುವರರು, ಸಂಜೆ ಪರಸ್ಪರ ಮಚ್ಚಿನಿಂದ ಹಲ್ಲೆ ಮಾಡಿಕೊಂಡ ಪರಿಣಾಮ ವಧು ಆಸ್ಪತ್ರೆಯಲ್ಲಿ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡ ವರನನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ರವಾನಿಸಿರುವ ಘಟನೆ ಆ್ಯಂಡರ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಬೈನೇಹಳ್ಳಿ ಶ್ರೀನಿವಾಸಲು ಮತ್ತು ಲಕ್ಷ್ಮೀ ಎಂಬುವವರ ಪುತ್ರಿ ಲಿಖಿತ ಶ್ರೀ (18) ಮೃತ ದುರ್ದೈವಿಯಾಗಿದ್ದಾಳೆ. ಆಂಧ್ರಪ್ರದೇಶದ ಶಾಂತಿಪುರಂ ನಿವಾಸಿ ಮುನಿಯಪ್ಪರ ಪುತ್ರ ನವೀನ್ ಕುಮಾರ್(30) ತೀವ್ರವಾಗಿ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾನೆ.

ಲಿಖಿತ ಶ್ರೀ ಮತ್ತು ನವೀನ್ ಕುಮಾರ್‌ರಿಗೆ ಬುಧವಾರ ಬೆಳಗ್ಗೆ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯ ವರ ನವೀನ್‌ಕುಮಾರ್‌ರ ಅಕ್ಕನ ಮನೆಯಲ್ಲಿ ಮದುವೆ ನಡೆದಿತ್ತು. ಮದುವೆ ಸಮಾರಂಭದಲ್ಲಿ ವರನ ತಂದೆ, ತಾಯಿ ಮತ್ತು ವಧುವಿನ ತಂದೆ, ತಾಯಿ ಹಾಗೂ ಕೆಲವು ಸಂಬಂಧಿಕರು ಭಾಗವಹಿಸಿದ್ದರು ಎನ್ನಲಾಗಿದೆ.

ಕುಟುಂಬ ಸದಸ್ಯರೆಲ್ಲರ ಸಮ್ಮುಖದಲ್ಲಿ ಮದುವೆ ನಡೆದ ನಂತರ ಅದೇ ಗ್ರಾಮದಲ್ಲಿರುವ ವರನ ದೊಡ್ಡಪ್ಪನ ಮನೆಗೆ ಹುಡುಗ ಮತ್ತು ಹುಡುಗಿ ಇಬ್ಬರು ಒಟ್ಟಿಗೆ ಹೋಗಿ ಕೋಣೆಯ ಮುಂಭಾಗಿಲನ್ನು ಹಾಕಿಕೊಂಡು ಪರಸ್ಪರ ಮಚ್ಚಿನಲ್ಲಿ ಹಲ್ಲೆ ಮಾಡಿಕೊಂಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಚಿಕಿತ್ಸೆಗೆಂದು ಕೆಜಿಎಫ್‌ನ ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಯಿತಾದರೂ, ಲಿಖಿತ ಶ್ರೀ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ನವೀನ್ ಕುಮಾರ್‌ನನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಕೆಜಿಎಫ್ ಎಸ್‌ಪಿ ಶಾಂತರಾಜು, ಡಿವೈಎಸ್‌ಪಿ ಪಾಂಡುರಂಗ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆ್ಯಂಡರ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.