ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಮುದ್ರಣ ಮಾಧ್ಯಮದಲ್ಲಿ ಸುದ್ದಿ ಖಚಿತತೆಗೆ ಪ್ರಾಮುಖ್ಯತೆ ಇರುತ್ತದೆ, ಹಾಗಾಗಿ ಅದರ ಮಹತ್ವ ಉಳಿಸಿಕೊಂಡಿದೆ ಹಾಗೂ ದಿನಪತ್ರಿಕೆಗಳಿಂದ ಜ್ಞಾನ ವಿಕಾಸ ಸಾಧ್ಯಗುವುದಲ್ಲದೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಅವಕಾಶವಾಗಿದೆ ಎಂದು ಹಿರಿಯ ಪತ್ರಕರ್ತ ಮಂಜುನಾಥ್ ಗೌರಕ್ಕಳವರ್ ಅಭಿಪ್ರಾಯಪಟ್ಟರು.ಇಲ್ಲಿನ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಅಣ್ಣನ ಬಳಗದವರು ಹಾಗೂ ಬಿ.ಎಲ್.ಆರ್ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಸಮೂಹ ಮಾಧ್ಯಮಗಳು ವಿಷಯದ ದಂದಣ-ದತ್ತಣ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಂಬಿಕೆ ಅರ್ಹತೆಯು ಸಾಮಾಜಿಕ ಪರಿವರ್ತನೆಗೆ ಕಾರಣವಾಗುತ್ತದೆ. ಮೊಬೈಲ್ ಬಳಕೆಯಿಂದ ಪತ್ರಿಕೆ ಓದುವ ಹವ್ಯಾಸ ಕುಂಠಿತವಾಗುತ್ತಿದೆ ಇದು ವಿಪರ್ಯಾಸವೇ ಸರಿ. ವೇಗದ ಎಲೆಕ್ಟ್ರಾನಿಕ್ ಮಾಧ್ಯಮದಿಂದ ಬಹಳಷ್ಟು ಸಮಸ್ಯೆಗಳು ಸಂಭವಿಸುತ್ತಿವೆ. ಪತ್ರಿಕೆ ಓದಿ ಜ್ಞಾನ ಹೆಚ್ಚಿಸಿಕೊಳ್ಳಿ. ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದನ್ನು ದೂರತಳ್ಳಿ, ವಿದ್ಯಾರ್ಥಿ ಜೀವನ ಸದುಪಯೋಗ ಪಡಿಸಿಕೊಳ್ಳಿ ಭವಿಷ್ಯ ಉಜ್ವಲವಾಗುತ್ತದೆ ಎಂದು ಕರೆ ನೀಡಿದರು.ಹಾಸನದ ಆಕಾಶವಾಣಿ ಪ್ರಸಾರ ನಿರ್ವಹಣಾಧಿಕಾರಿ ಅರಕಲಗೋಡು ವಿ.ಮಧುಸೂಧನ್ ಮಾತನಾಡಿ, ಆಕಾಶವಾಣಿ ಹೊರತುಪಡಿಸಿ ಉಳಿದ ಮಾಧ್ಯಮಗಳ ಪ್ರಯೋಜನ ಪಡೆಯಲು ಬಂಡವಾಳ ತೊಡಗಿಸಬೇಕು. ಪತ್ರಿಕೆ ಓದಲು, ಅಂತರಜಾಲ, ಟಿವಿ ಬಳಸಲು ಕೆಲಸವನ್ನು ಬದಿಗಿಡಬೇಕು. ಆದರೆ ರೇಡಿಯೋ ನಮ್ಮ ಆಡುಭಾಷೆಯಲ್ಲಿ ಕೇಳಿಸಿಕೊಳ್ಳಬಹುದು. ನಮ್ಮ ದಿನನಿತ್ಯದ ಯಾವ ಕೆಲಸಕ್ಕೂ ತೊಂದರೆ ಆಗುವುದಿಲ್ಲ, ಸಮಯ ವ್ಯರ್ಥವಾಗುವುದಿಲ್ಲ, ಕೆಲಸಕ್ಕೆ ತೊಂದರೆ ಆಗುವುದಿಲ್ಲ. ಸುಳ್ಳು ಸುದ್ದಿಗೆ ಅವಕಾಶ ಇಲ್ಲ. ರೇಡಿಯೋ ಮಾಧ್ಯಮ ಮಾತುಗಾರಿಕೆ ಬೆಳೆಸುತ್ತದೆ ಹಾಗೂ ಕಲ್ಪನಾ ಶಕ್ತಿ ವೃದ್ಧಿಸುತ್ತದೆ. ಭಾಷಾಜ್ಞಾನ, ಸಮಯ ಪ್ರಜ್ಞೆ, ಶ್ರವಣಶಕ್ತಿ ಹೆಚ್ಚಿಸಲು ರೇಡಿಯೋ ಪೂರಕವಾಗಿದೆ. ಕೃಷಿಕರು, ಮಹಿಳೆಯರು, ಮಕ್ಕಳು, ಕಾರ್ಮಿಕರು ಮುಂತಾದ ಎಲ್ಲಾ ವರ್ಗದ ಜನರನ್ನು ಇಷ್ಟವಾಗುವ ಕಾರ್ಯಕ್ರಮಗಳನ್ನು ರೂಪಿಸುತ್ತದೆ.
ಹೆಚ್ಚು ಜನರನ್ನು ತಲುಪುವ ಮಾಧ್ಯಮವಾಗಿದ್ದು ಅನುಪಯುಕ್ತ, ಅನಗತ್ಯ ಸುದ್ದಿ ಮತ್ತು ಮಾಹಿತಿಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ ಎಂದರು.ದಾವಣಗೆರೆ ವಿಶ್ವವಿದ್ಯಾಲಯ ಪತ್ರಿಕೋದ್ಯಮದ ವಿಭಾಗದ ಪ್ರಾಧ್ಯಾಪಕ, ಡಾ.ಶಿವಕುಮಾರ ಕಣಸೋಗಿ ಮಾತನಾಡಿ, ಮನರಂಜನೆ ಜೊತೆಗೆ ಜ್ಞಾನ ವಿಕಾಸಕ್ಕೆ ದೂರದರ್ಶನ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಬಳಸಬೇಕು ಎಂದರು.
ಶಿವನಗೌಡ ಕೆ.ಸುರಕೋಡ ಅಧ್ಯಕ್ಷತೆ ನುಡಿಯನ್ನಾಡಿದರು. ಕಾಲೇಜಿನ ವಿದ್ಯಾರ್ಥಿಗಳಾದ ಬಸವನಗೌಡ ಭರಮನಗೌಡ್ರ ಕಂಪ್ಯೂಟರ್ ಹಾಗೂ ಇಂಟರ್ನೆಟ್, ದನುಷ್ ಶಂಕ್ರಪ್ಪ ಸಮೂಹ ಮಾಧ್ಯಮ, ಸಂತೋಷ್ ಬಸವರಾಜ ದೇವರಹಳ್ಳಿ ಆಕಾಶವಾಣಿ, ಪಾಂಡುರಂಗ ಆನೆಗೊಂದಿ ನಿಯತಕಾಲಿಕೆಗಳು, ಬೆಣ್ಣೆರ ರವಿಕುಮಾರ್ ದೂರದರ್ಶನ ವಿಷಯವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕವರ್ಗದವರು ಭಾಗವಹಿಸಿದ್ದರು. ಕೀರ್ತನ ಡಿ.ಜಿ. ಸಂಗಡಿಗರಿಂದ ಪ್ರಾರ್ಥನೆ, ಶರತ್.ಆರ್.ಜಿ ಸ್ವಾಗತಿಸಿದರು, ಉದಯಕುಮಾರ್ ನಿರೂಪಿಸಿದರು.