ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದಾಗ ನಡೆದಿರುವ ಭದ್ರತಾ ಲೋಪದ ಬಗ್ಗೆ ಎನ್‍ಐಎ ತನಿಖೆ ನಡೆಸಬೇಕು ಎಂದು ಬಿಜೆಪಿ ಮುಖಂಡ ಹನುಮಂತೇಗೌಡ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಪ್ರಧಾನಿಯವರು ಬಂದಾಗ ಕಾಂಗ್ರೆಸ್ ಸರ್ಕಾರ ಸರಿಯಾದ ಭದ್ರತೆ ನೀಡದೆ ಲೋಪ ಎಸಗಿದೆ. ಮೋದಿ ಜೀ ಅವರು ವಿಶ್ವದೆಲ್ಲೆಡೆ ಹೋದರೂ ಸರಿಯಾದ ಭದ್ರತೆಯನ್ನು ನೀಡಲಾಗುತ್ತದೆ. ಅಂತಹುದರಲ್ಲಿ ರಾಜ್ಯಕ್ಕೆ ಬಂದಾಗ ಭದ್ರತಾ ವ್ಯವಸ್ಥೆ ಸರಿ ಇರಲಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಮೋದಿ ಅವರು ಕೇವಲ ಬಿಜೆಪಿಯವರಿಗೆ ಮಾತ್ರವೇ ಪ್ರಧಾನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಪರಮೇಶ್ವರ್ ಅವರು ತಿಳಿದಂತಿದೆ. ಅವರು ದೇಶದ ಪ್ರಧಾನಿ ಅವರ ಭದ್ರತೆಗೆ ಎಲ್ಲಾ ಕಡೆ ಆತಂಕ ಇರುತ್ತದೆ. ಆದರೆ ಇದನ್ನು ಸರ್ಕಾರ ತಿಳಿದಿಲ್ಲ. ಪ್ರಧಾನಿಯವರು ಬೆಂಗಳೂರಿಗೆ ಬಂದಾಗ ನೂರು ಮಂದಿ ಇನ್‌ಸ್ಪೆಕ್ಟರ್‌ಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ. ಇದಕ್ಕೆ ಅಂತಹ ತುರ್ತು ಏನಿತ್ತು. ಪ್ರಧಾನಿಯವರು ಸಾಗುವ ನಿಗದಿತ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಸಿಕ್ಕಿವೆ. ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಯಾರು ಹೊಣೆಯಾಗುತ್ತಿದ್ದರು. ಇತ್ತೀಚೆಗೆ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಅದರಿಂದಲೇ ಕಾಂಗ್ರೆಸ್‍ನವರಿಗೆ ಕೋಪ ಬಂದಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಪ್ರಧಾನಿ ಮೇಲೆ ಕಾಳಜಿ, ಗೌರವ ಇಲ್ಲ ಎಂದು ದೂರಿದರು.

ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದ ದೇಶದಲ್ಲಿ ಕಷ್ಟದ ಪರಿಸ್ಥಿತಿ ಇದೆ. ಪೆಟ್ರೋಲ್, ಡೀಸೆಲನ್ನು ಮಿತವಾಗಿ ಬಳಸಿ ಎಂದು ಹೇಳಿದ್ದಾರೆ. ಇವುಗಳನ್ನು ಆಮದು ಮಾಡಿಕೊಳ್ಳಲು ತೊಂದರೆ ಇದೆ. ಆದ್ದರಿಂದ ಬಳಕೆಗೆ ಮಿತಿ ಇರಲಿ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ. ಇದು ಬಿಟ್ಟರೆ ಬೇರೆ ಯಾವ ಕಾರಣವೂ ಇಲ್ಲ. ಕಾಂಗ್ರೆಸ್‍ನವರಿಗೆ ಬುದ್ದಿ ಕಡಿಮೆ. ಮೋದಿ ಅವರಿಂದಾಗಿ ಇಡೀ ವಿಶ್ವದಲ್ಲೇ ಭಾರತಕ್ಕೆ ಗೌರವ ಸಿಕ್ಕುತ್ತಿದೆ. ಎಷ್ಟೋ ವರ್ಷಗಳ ನಂತರ ಈ ಗೌರವ ಸಿಗುತ್ತಿದೆ. ಮೇಕ್ ಇನ್ ಇಂಡಿಯಾಗೆ ಆದ್ಯತೆ ಸಿಗಬೇಕು. ಜನರಲ್ಲಿ ಜಾಗೃತಿ ಮೂಡಬೇಕು ಎಂದು ಪ್ರಧಾನಿ ಅವರು ಮಿತ ಬಳಕೆಗೆ ಸಲಹೆ ನೀಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಜಿಡಿಪಿ ಹೆಚ್ಚಿದೆ. ಇದನ್ನೆಲ್ಲ ತಿಳಿಯದೇ ಕಾಂಗ್ರೆಸ್‍ನವರು ಮನಸಿಗೆ ಬಂದಂತೆ ಮಾತನಾಡುತ್ತಾರೆ ಎಂದು ಹನುಮಂತೇಗೌಡ ಆರೋಪಿಸಿದರು.