ಚನ್ನಪಟ್ಟಣ: ಕಂದಾಯ ಇಲಾಖೆಯ ಅಧಿಕಾರಿಗಳ ಭ್ರಷ್ಟಾಚಾರ, ತಾಲೂಕು ಮತ್ತು ಜಿಲ್ಲಾ ಆಡಳಿತದ ವೈಫಲ್ಯ ಮತ್ತು ಬಡ ರೈತರ ಭೂ ಹಕ್ಕುಗಳ ರಕ್ಷಣೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ದಲಿತ ವಿರೋಧಿ ಧೋರಣೆಯನ್ನು ಖಂಡಿಸಿ ನಗರದ ತಾಲೂಕು ಕಚೇರಿ ಆವರಣದಲ್ಲಿ ನನ್ನ ಭೂಮಿ ನನ್ನ ಹಕ್ಕು ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಅನಿರ್ಧಿಷ್ಟಾವಧಿ ಅಹೋರಾತ್ರಿ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.
ತಾಲೂಕಿನಲ್ಲಿ ಭೂ ಕಂದಾಯ ಕಾಯ್ದೆ ೧೯೬೪ರ ಪ್ರಕಾರ ಸುಮಾರು ೭,೦೦೦ ರೈತರಿಗೆ ಭೂಮಿ ಮಂಜೂರಾಗಿದ್ದರೂ, ಸರ್ಕಾರವು ಕೇವಲ ಕೆಲವರಿಗೆ ಮಾತ್ರ ಸಂಪೂರ್ಣ ದಾಖಲೆಗಳನ್ನು ನೀಡಿದೆ. ಅವರಿಗೆ ಭೂ ದಾಖಲಾತಿಗಳನ್ನು ಕೊಡುವಲ್ಲಿ ತಾಲೂಕು ಆಡಳಿತ ವಿಳಂಬ ಧೋರಣೆಯನ್ನು ತೋರುತ್ತಿದ್ದು, ನ್ಯಾಯ ದೊರಕುವವರೆಗೂ ಆಹೋರಾತ್ರಿ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.ರಾಜ್ಯ ಸರ್ಕಾರವು ''''''''ನನ್ನ ಭೂಮಿ'''''''' ಅಭಿಯಾನದಡಿ ದೊಡ್ಡ ಮಟ್ಟದ ಪ್ರಚಾರ ಪಡೆಯುತ್ತಿದೆ. ಆದರೆ, ತಾಲೂಕಿನಲ್ಲಿ ೨೦೨೪ ರಿಂದ ೨೦೨೬ರ ಫೆಬ್ರವರಿವರೆಗೆ ಕೇವಲ ೧೭೩ ರೈತರ ಪೋಡಿ ದುರಸ್ತಿ ಕಾರ್ಯ ಮಾತ್ರ ನಡೆದಿದೆ. ಇದು ಒಟ್ಟು ಮಂಜೂರಾದ ರೈತರ ಶೇ. ಒಂದರಷ್ಟು ಕೂಡ ಇಲ್ಲದಿರುವುದು ಸರ್ಕಾರದ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ''''''''ನನ್ನ ಭೂಮಿ'''''''' ಅಭಿಯಾನವು ಕೇವಲ ಪ್ರಚಾರಕ್ಕೆ ಸೀಮಿತವಾಗದೆ, ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಹಕ್ಕೊತ್ತಾಯಗಳು: ತಾಲೂಕಿನಲ್ಲಿ ಭೂಮಿ ಮಂಜೂರಾಗಿರುವ ಎಲ್ಲ ೭,೦೦೦ ರೈತರಿಗೂ ಕೂಡಲೇ ಸಂಪೂರ್ಣ ಭೂ ಹಕ್ಕು ದಾಖಲೆಗಳನ್ನು ಒದಗಿಸಬೇಕು. ಪರಿಶಿಷ್ಟ ಜಾತಿ, ಪಂಗಡಿಗಳಿಗೆ ಮಂಜೂರಾದ ಭೂಮಿಯನ್ನು ತಹಸೀಲ್ದಾರ್ ಭೂಮಿ ತಂತ್ರಾಂಶದಲ್ಲಿ ಫ್ಲಾಗ್ ಮಾಡಬೇಕು. ಪೋಡಿ ಮಾಡುವ ಸಂದರ್ಭದಲ್ಲಿ ಮಂಜೂರು ಭೂಮಿಗಿಂತ ಕಡಿಮೆ ಅನುಭೋಗ ಇರುವ ರೈತರಿಗೆ ಸರ್ಕಾರ ಮಂಜೂರು ಮಾಡಿರುವ ಅಳತೆಯಂತೆ ದಾಖಲೆ ಮಾಡಿಕೊಡಬೇಕು.ಭೂ ಮಂಜೂರಾತಿ ಕಾಯ್ದೆ ೧೯೬೯ರಂತೆ ಭೂ ಮಂಜೂರು ಸಮಯದಲ್ಲಿ ದಲಿತರಿಗೆ ಭೂಮಿಯನ್ನು ಮೀಸಲಿಡಬೇಕು ಎಂದು ಆಗ್ರಹಿಸಿದರು.೨೦೨೪ರಿಂದ ೨೦೨೬ರವರೆಗೆ ಕೇವಲ ೧೭೩ ರೈತರ ಪೋಡಿ ದುರಸ್ತಿ ಕಾರ್ಯ ಮಾತ್ರ ಕೈಗೆತ್ತಿಕೊಂಡಿರುವ ಕಂದಾಯ ಇಲಾಖೆಯ ವಿಳಂಬ ಧೋರಣೆಯನ್ನು ಖಂಡಿಸಿ, ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡಬೇಕು. ಸಾಮಾನ್ಯ ಜನರ ಭೂ ಒಡೆತನದ ದಾಖಲೆಗಳನ್ನು ನೀಡಲು ವಿಳಂಬ ಮಾಡುತ್ತಿರುವ ಮತ್ತು ಉಳ್ಳವರ ಪರವಾಗಿ ವರ್ತಿಸುತ್ತಿರುವ ಭ್ರಷ್ಟ ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು. ಕಂದಾಯ ಇಲಾಖೆಯ ದಾಖಲೆಗಳ ತಿದ್ದುಪಡಿ ಮತ್ತು ಪೋಡಿ ದುರಸ್ತಿ ಕಾರ್ಯವನ್ನು ರೈತರ ಮನೆಬಾಗಿಲಿಗೆ ತಲುಪಿಸುವ ಭರವಸೆಯನ್ನು ಸರ್ಕಾರ ಪಾರದರ್ಶಕವಾಗಿ ಈಡೇರಿಸಬೇಕು.
ಸಾಗುವಳಿ ಚೀಟಿ, ಸ್ಕೆಚ್, ಆರ್ಟಿಸಿ ಇದ್ದರೂ ಭೂಮಿಯಿಂದ ವಂಚಿತರಾಗುತ್ತಿರುವ ದಲಿತ ಮತ್ತು ಬಡ ರೈತರಿಗೆ ಸರ್ಕಾರ ರಕ್ಷಣೆ ನೀಡಬೇಕು ಹಾಗೂ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು.
ಸಚಿವ ಕೃಷ್ಣೇಗೌಡ ಆವರು ಆಗಮಿಸಿ ನಮ್ಮ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವವರೆಗೂ ಈ ಧರಣಿಯನ್ನು ಕೈ ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
ನನ್ನ ಭೂಮಿ ನನ್ನ ಹಕ್ಕು ಹೋರಾಟ ಸಮಿತಿ ಸಂಯೋಜಕರಾದ ಶ್ರೀಕಾಂತ್, ರಘು, ಕರ್ನಾಟಕ ರಕ್ಷಣ ವೇದಿಕೆ ತಾಲೂಕು ಘಟಕದ ಎಂ.ಎನ್.ಸತ್ಯನಾರಾಯಣ, ಸಾಗರ್, ರೈತಮುಖಂಡ ಸುಜ್ಜೀವನ್ ಕುಮಾರ್, ವಿ.ಬಿ.ಚಂದ್ರು, ದಲಿತ ಮುಖಂಡರಾದ ಪಿ.ಜೆ.ಗೋವಿಂದರಾಜು, ಮತ್ತೀಕೆರೆ ಹನುಮಂತಯ್ಯ, ಚಂದ್ರು, ಮೋಹನ್ಕುಮಾರ್, ಪ್ರಕಾಶ್, ನೇರಳೂರು, ಭೈರಶೆಟ್ಟಿಹಳ್ಳಿ, ಎಲಿಯೂರು, ಹೊನ್ನಿಗಾನಹಳ್ಳಿ, ಎನ್.ಆರ್. ಕಾಲೋನಿ, ಕನ್ನಮಂಗಲ ಗ್ರಾಮಗಳ ಸಂತ್ರಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪೊಟೋ೮ಸಿಪಿಟಿ೧:
ಚನ್ನಪಟ್ಟಣ ತಾಲೂಕು ಕಚೇರಿ ಆವರಣದಲ್ಲಿ "ನನ್ನ ಭೂಮಿ ನನ್ನ ಹಕ್ಕು " ಸಮಿತಿಯ ಸದಸ್ಯರು ಅಹೋರಾತ್ರಿ ಪ್ರತಿಭಟನೆ ನಡೆಸಿದರು.