ಪಟ್ಟಣದ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ಪಿಯು ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ನಿಂಗಮ್ಮರಾಜಶೇಖರ ಬಿಸ್ಟಗೊಂಡ ವಿಜ್ಞಾನ ವಿಭಾಗದಲ್ಲಿ 592 (ಶೇ.98.66) ಅಂಕ ಗಳಿಸಿ ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದಿದ್ದಾರೆ.
ಆನಂದ ಜಡಿಮಠ
ಕನ್ನಡಪ್ರಭ ವಾರ್ತೆ ಬೀಳಗಿಪಟ್ಟಣದ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ಪಿಯು ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ನಿಂಗಮ್ಮರಾಜಶೇಖರ ಬಿಸ್ಟಗೊಂಡ ವಿಜ್ಞಾನ ವಿಭಾಗದಲ್ಲಿ 592 (ಶೇ.98.66) ಅಂಕ ಗಳಿಸಿ ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದಿದ್ದಾರೆ.
ನಿಂಗಮ್ಮ ಅವರ ತಂದೆ-ತಾಯಿ ಅಲ್ಪ-ಸ್ವಲ್ಪ ಶಿಕ್ಷಣ ಪಡೆದು 4ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ತಮ್ಮ ಮೂರು ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಶಿಕ್ಷಣ ಪ್ರೇಮ ಮೆರೆದಿದ್ದಾರೆ.ವಿಜಯಪುರ ಜಿಲ್ಲೆಯ ಕೊಲ್ದಾರ ತಾಲೂಕಿನ ಮಸೂತಿ ಗ್ರಾಮದ ರಾಜಶೇಖರ ಹಾಗೂ ಲತಾ ದಂಪತಿಯ ದ್ವಿತೀಯ ಪುತ್ರಿ ನಿಂಗಮ್ಮ ತನ್ನ ಎಸ್ಸೆಸ್ಸೆಲ್ಸಿವರೆಗೆ ಸರ್ಕಾರಿ ಶಾಲೆ ಮತ್ತು ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾಳೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.97.06 ಅಂಕ ಗಳಿಸಿದ್ದ ನಿಂಗಮ್ಮ ಪಿಯುಸಿಯಲ್ಲಿ ಪಡೆದ ಅಂಕಗಳು ಕನ್ನಡ 100, ಇಂಗ್ಲಿಷ್ 96, ಭೌತಶಾಸ್ತ್ರ 100, ರಾಸಾಯನ ಶಾಸ್ತ್ರ 96, ಗಣಿತ 100, ಜೀವಶಾಸ್ತ್ರ 100 ಅಂಕಗಳನ್ನು ಪಡೆದಿದ್ದಾಳೆ.ಮನೆಯಲ್ಲಿ ಪಾಲಕರ ಪ್ರೋತ್ಸಾಹ, ಶಿಕ್ಷಕರ ಸಹಕಾರ ಮತ್ತು ನನ್ನ ಪ್ರಯತ್ನದಿಂದ ಪಿಯು ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವೆ. ಕಾಲೇಜಿನಲ್ಲಿ ಪಠ್ಯಕ್ಕನುಸಾರವಾಗಿ ಪರೀಕ್ಷೆ ತೆಗೆದುಕೊಳ್ಳುತ್ತಿದ್ದರು. ನನಗೆ ಎಂಜಿನೀಯರಾಗುವ ಆಸೆ ಇದೆ.-ನಿಂಗಮ್ಮ ಬಿಸ್ಟಗೊಂಡ,
ರ್ಯಾಂಕ್ ವಿದ್ಯಾರ್ಥಿನಿ.ಮಗಳು ಶೇ.98.09 ಅಂಕ ಗಳಿಸಿದ್ದು ಖುಷಿ ತಂದಿದೆ. ಎರಡು ಎಕರೆ ಜಮೀನು ಮಾರಿಯಾದರೂ ಮಗಳಿಗೆ ಉನ್ನತ ಶಿಕ್ಷಣ ಕೊಡಿಸುವ ಆಸೆ ಇದೆ. ಮಗಳ ಕಲಿಕೆಗೆ ಸಂಪೂರ್ಣ ಸಹಕಾರ ನೀಡುವೆ.-ರಾಜಶೇಖರ ಬಿಸ್ಟಗೊಂಡ, ರ್ಯಾಂಕ್ ವಿಜೇತೆ ನಿಂಗಮ್ಮಳ ತಂದೆ.ನಮ್ಮ ಮಹಾವಿದ್ಯಾಲಯದಲ್ಲಿ ನುರಿತ ಉಪನ್ಯಾಸಕರು ಶ್ರಮವಹಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡುತ್ತಿದ್ದಾರೆ. ಅದರ ಪ್ರತಿಫಲವಾಗಿ ನಮ್ಮ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ರ್ಯಾಂಕ್ ಪಡೆದಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಕಲಿಸಿದ ಉಪನ್ಯಾಸಕರಿಗೆ ಅಭಿನಂದನೆಗಳು.-ಎಂ.ಎನ್.ಪಾಟೀಲ,
ಸಂಸ್ಥಾಪಕ ಅಧ್ಯಕ್ಷರು, ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆ ಬೀಳಗಿ.