ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪೊಲೀಸರು ಕೆಲಸ ಮಾಡುತ್ತಿದ್ದಾರೆ, ಮಾಡಲು ಬಿಡಿ. ಪ್ರಕರಣದ ತನಿಖೆಯನ್ನು ರಾಜಕೀಕರಣಗೊಳಿಸಬೇಡಿ. ಅಡ್ವಾನ್ಸ್ ಜಡ್ಜ್ಮೆಂಟ್ ಬರೆಯುವ ಅವಶ್ಯಕತೆ ಇಲ್ಲ. ತನಿಖೆ ಮಾಡಲಿ, ಏನು ಸತ್ಯಾಂಶ ಹೊರಗೆ ಬರುತ್ತದೆ ನೋಡೋಣ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಧರ್ಮಸ್ಥಳದ ನಿಗೂಢ ಹತ್ಯೆಗಳ ತನಿಖೆಗೆ ಎಸ್ಐಟಿ ರಚನೆ ಬಗ್ಗೆ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಎಸ್ಐಟಿ ತನಿಖೆಯಲ್ಲಿ ಸೌಜನ್ಯ ಪ್ರಕರಣ ಪ್ರತ್ಯೇಕವಾಗಿಟ್ಟ ವಿಚಾರದ ಬಗ್ಗೆ ಮಾತನಾಡಿ, ಅದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಎಸ್ಐಟಿ ಮಾಡಿದ್ದಾರೆ. ತನಿಖೆ ಮಾಡಲಿ. ಎರಡೂ ಪ್ರಕರಣಗಳು ನ್ಯಾಯಾಲಯಕ್ಕೆ ಹೋಗುತ್ತವೆ. ಅಂತಿಮ ತೀರ್ಪು ಬರಲಿ ನೋಡೋಣ. ಸರ್ಕಾರ ಸೂಕ್ತ ನಿರ್ಧಾರ ಮಾಡುತ್ತದೆ. ಎಲ್ಲರಿಗೂ ನ್ಯಾಯ ಸಿಗಲಿ ಎನ್ನುವ ದೃಷ್ಟಿಯಿಂದಲೇ ತೀರ್ಮಾನ ಮಾಡುತ್ತಾರೆ. ಏನಾಗತ್ತದೆ ಕಾದು ನೋಡೋಣ ಎಂದರು.
ಸನಾತನ ಧರ್ಮದ ಮೇಲೆ ದಾಳಿ ಎಂದಿರುವ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಚುನಾವಣೆಯಲ್ಲಿ ಈ ರೀತಿ ಹಬ್ಬಿಸೋದು ಕಾಮನ್. ಚುನಾವಣೆ 6 ತಿಂಗಳು ಇರೋವಾಗ ಶುರು ಮಾಡುತ್ತಾರೆ. ಆದರೀಗ ಮೂರು ವರ್ಷ ಮುಂಚೆಯೇ ಶುರು ಮಾಡಿದ್ದಾರೆ. ಇದೇನು ಹೊಸದಲ್ಲ. ಹಿಂದೆ ಕರಾವಳಿಯಲ್ಲಿ ಹಿಂದೂಗಳ ಹತ್ಯೆ ಇದ್ದವು. ಸಿಬಿಐ, ಎಸ್ಐಟಿ ರಚನೆ ಮಾಡಿದರು. ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.ಸಿಎಂ- ಡಿಸಿಎಂ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಮುಗಿದ ಹೋದ ವಿಚಾರ. ಸ್ವತಃ ಸಿಎಂ ಹೇಳಿದ್ದಾರಲ್ಲ, ಮುಸುಕಿನ ಗುದ್ದಾಟದ ಪ್ರಶ್ನೆಯೇ ಬರೋದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೆಪಿಸಿಸಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಉತ್ತರಿಸಿ, ಅದು ನಮ್ಮ ಹಂತದಲ್ಲಿಲ್ಲ. ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಟೈಂ ಬಂದಾಗ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುತ್ತಾರೆ. ಸೂಕ್ತ ಸಮಯದಲ್ಲಿ ವರಿಷ್ಠರು ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಇದನ್ನು ನಾವು ಹೇಳೋಕೆ ಆಗಲ್ಲ, ಕಾದು ನೋಡೋಣ ಎಂದರು.
ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆಯ ಬಿರುಗಾಳಿ ವಿಚಾರಕ್ಕೆ ಉತ್ತರಿಸಿದ ಅವರು, ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡಬೇಕು. ಸಿಎಂ ಈಗಾಗಲೇ ನಾನೇ 5 ವರ್ಷ ಸಿಎಂ ಆಗೀರ್ತಿನಿ ಎಂದಿದ್ದಾರೆ. ಜಾಗ ಖಾಲಿ ಇಲ್ಲ ಎಂದು ಸ್ವತಃ ಡಿಸಿಎಂ ಹೇಳಿದ್ದಾರೆ. ಅವರೇ ಹೊಂದಾಣಿಕೆ ಆಗಿದ್ದಾರೆ. ಇದರಲ್ಲಿ ನಾವೇನು ಹೇಳೋದು ಎಂದು ಹೇಳಿದರು.ಅಭಿಮಾನಿಗಳಿಂದ ಮುಂದಿನ ಸಿಎಂ ಘೋಷಣೆ ವಿಚಾರದ ಬಗ್ಗೆ ಮಾತನಾಡಿ, ನಾನು ಯಾವತ್ತೂ ಅದನ್ನ ಕ್ಲೈಮ್ ಮಾಡಿಯೇ ಇಲ್ಲ. ಅದರ ಬಗ್ಗೆ ನಾನು ಯಾವತ್ತೂ ಹೇಳಿಯೇ ಇಲ್ಲ. ನಾನು ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗುತ್ತೇನೆ. ನಮ್ಮ ಡಿಪಾರ್ಟ್ಮೆಂಟ್ ಕೆಲಸದ ಮೇಲೆ ಹೋಗಲೇ ಬೇಕಾಗುತ್ತೆೃದೆ, ಹೋಗುತ್ತೇವೆ. ಅದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.