ಒಳಮೀಸಲಾತಿ ಜಾರಿಯವರೆಗೆ ನೇಮಕಾತಿ, ಬಡ್ತಿ ಬೇಡ

| Published : Jun 06 2025, 12:36 AM IST

ಸಾರಾಂಶ

ಜನಗಣತಿ ಸಮೀಕ್ಷೆ ಕಾರ್ಯದಲ್ಲಿ ಸಮುದಾಯಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಜಾತಿವಾರು ಸರ್ಕಾರಿ ನೇಮಕಾತಿಯಲ್ಲಿ ಪ್ರಾತಿನಿಧ್ಯತೆ ನೀಡುತ್ತಾರೆಂದು ಭಾವಿಸಿದ್ದೇವೆ.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ನ್ಯಾ. ನಾಗಮೋಹನ್‌ದಾಸ್ ಅವರ ಸಮೀಕ್ಷೆ ಸರ್ಕಾರ ಪುರಸ್ಕರಿಸಿ ಒಳಮೀಸಲಾತಿ ಜಾರಿಯಾಗುವವರೆಗೆ ನೇಮಕಾತಿ ಹಾಗೂ ಬಡ್ತಿ ಮೀಸಲಾತಿ ನೀಡಬಾರದು ಎಂದು ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶಂಕರಪ್ಪ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಗಣತಿ ಸಮೀಕ್ಷೆ ಕಾರ್ಯದಲ್ಲಿ ಸಮುದಾಯಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಜಾತಿವಾರು ಸರ್ಕಾರಿ ನೇಮಕಾತಿಯಲ್ಲಿ ಪ್ರಾತಿನಿಧ್ಯತೆ ನೀಡುತ್ತಾರೆಂದು ಭಾವಿಸಿದ್ದೇವೆ. ಜನಗಣತಿ ಸಮೀಕ್ಷೆಯಲ್ಲಿ ಮಾದಿಗ ಮತ್ತು ಸಂಬಧಿತ ಸಮುದಾಯಗಳ ಜನಸಂಖ್ಯೆಯು ಕಳೆದ ಸಮೀಕ್ಷೆಗಿಂತ ಹೆಚ್ಚು ಬರುವ ವಿಶ್ವಾಸವಿದೆ. ನ್ಯಾ.ಎ.ಜೆ. ಸದಾಶಿವ ಅವರ ಜನಸಂಖ್ಯೆ ಆದಾರದ ಶಿಫಾರಸ್ಸು ಮಾಡಲಾದ ಪ್ರಮಾಣ ಶೇ. 6ಕ್ಕಿಂತ ಇಂದಿನ ಜನಸಂಖ್ಯೆ ಆಧಾರದ ಮೇಲೆ ಶೇ 7-8ಕ್ಕೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದರು.

ಒಳಮೀಸಲಾತಿ ಜಾರಿಯಾಗುವವರೆಗೆ ಉನ್ನತ ಶಿಕ್ಷಣ ಪ್ರವೇಶ ನಡೆಸದಂತೆ ತಡೆಹಿಡಿಯಬೇಕು. ಅಥವಾ ನ್ಯಾ. ಸದಾಶಿವ ವರದಿಯಂತೆ ಮಾದಿಗ ಮತ್ತು ಅದರ ಸಂಬಂಧಿ ಸಮುದಾಯದ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ 2025-26ನೇ ಸಾಲಿಗೆ ಅನ್ವಯಿಸುವಂತೆ ಶೇ.6 ಮೀಸಲಾತಿ ಕಾಯ್ದಿರಿಸಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಕ್ರಿಯೆ ನಡೆಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದರು.ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಜಿ.ಮಾರಪ್ಪ ಮಾತನಾಡಿ, ದೇವನಹಳ್ಳಿ ತಾಲೂಕಿನಲ್ಲಿ ಶೇ. 70ರಷ್ಟು ಜಾತಿ ಹೇಳಿಕೊಂಡಿದ್ದಾರೆ. ಶೇ. 30ರಷ್ಟು ಹೇಳಿಕೊಂಡಿಲ್ಲ, ಸಮುದಾಯದ ಹೆಸರು ಹೇಳಿದರೆ ನಗರ ಪ್ರದೇಶಗಳಲ್ಲಿ ಮನೆ ಬಾಡಿಗೆ ನೀಡುವುದಿಲ್ಲವೆಂದು ಹಿಂಜರಿದ್ದಾರೆ. ಅಂತಹವರು ಆನ್‌ಲೈನ್ ಮೂಲಕ ಜಾತಿ ತಿಳಿಸಬಹುದು, ಸಮೀಕ್ಷೆಯಿಂದ ಸಮಾಜಕ್ಕೆ ನ್ಯಾಯ ದೊರೆಯಲಿದೆ. ನ್ಯಾ.ಮೂರ್ತಿ ನಾಗಮೋಹನ್‌ದಾಸ್ ಅಸ್ಪೃಶ್ಯ ಸಮಾಜಕ್ಕೆ ನ್ಯಾಯ ಒದಗಿಸುತ್ತಾರೆಂಬ ವಿಶ್ವಾಸವಿದೆ ಎಂದರು.ಇದೇ ವೇಳೆ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಕಾನೂನು ಘಟಕ ರಾಜ್ಯಾಧ್ಯಕ್ಷ ವೆಂಕಟೇಶಪ್ಪ ರಾಜ್ಯ ಖಜಾಂಚಿ ಮುನಿರಾಜು, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಗಂಗಾಧರಪ್ಪ, ಕೋಲಾರ ಜಿಲ್ಲಾಧ್ಯಕ್ಷ ವೆಂಕಟಸ್ವಾಮಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ರಾಜಶೇಖರ್, ದೇವನಹಳ್ಳಿ ತಾಲೂಕು ಅಧ್ಯಕ್ಷ ವೆಂಕಟೇಶ್, ಖಜಾಂಚಿ ಶ್ರೀನಿವಾಸ್, ಕೃಷ್ಣಮೂರ್ತಿ.ಡಿ.ವಿ, ಶ್ರೀನಿವಾಸ್, ಮುನಿಶಾಮೇಗೌಡ, ಬುಳ್ಳಹಳ್ಳಿ ಮುನಿರಾಜು, ಗೋಪಾಲಸ್ವಾಮಿ, ವೆಂಕಟೇಶಪ್ಪ, ಮುನಿರಾಜು ಮತ್ತಿತರರು ಇದ್ದರು. ೦೧ ದೇವನಹಳ್ಳಿ ಚಿತ್ರಸುದ್ದಿ: ೫ ದೇವನಹಳ್ಳಿ ಕರ್ನಾಟಕ ಮಾದಿಗದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸುದ್ದಿಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಶಂಕರಪ್ಪ ಮಾತನಾಡಿದರು.